ಹೈದರಾಬಾದ್: ಚುನಾವಣೆ ನಡೆದ ಸಂದರ್ಭಗಳಲ್ಲಿ ಯಾವುದೇ ಒಂದು ಪಕ್ಷಕ್ಕೆ ಬಹುಮತ ಬರದೇ ಹೋದಾಗ ಅಥವಾ ದಿಢೀರ್ ರಾಜಕೀಯ ಅರಾಜಕತೆ ಉಂಟಾದಾಗ ವಿವಿಧ ಪಕ್ಷಗಳು ಸರ್ಕಾರ ರಚನೆ ಮಾಡಲು ಮುಂದಾಗಿ ಶಾಸಕರನ್ನು ಸೆಳೆಯಲು ಮುಂದಾಗುವುದು ಕಾಮನ್. ಈ ವೇಳೆ ತಮ್ಮ ಪಕ್ಷದ ಸದಸ್ಯರನ್ನ ಸೇಫ್ ಆಗಿ ಉಳಿಸಿಕೊಳ್ಳುವ ಉದ್ದೇಶದಿಂದ ವಿವಿಧ ಪಕ್ಷಗಳು ರೆಸಾರ್ಟ್ ರಾಜಕೀಯದ ಮೊರೆ ಹೋಗುತ್ತವೆ. ಈ ಪ್ರಕರಣಗಳು ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನಡೆದಿವೆ.
ಸದ್ಯ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವವಾಗಿರುವ ಕಾರಣ ಬಿಜೆಪಿ ತಮ್ಮ ಶಾಸಕರನ್ನು ಸೆಳೆಯಬಹುದು ಎಂಬ ಕಾರಣಕ್ಕಾಗಿ ಶಿವಸೇನೆ+ಎನ್ಸಿಪಿ ಹಾಗೂ ಕಾಂಗ್ರೆಸ್ ತಮ್ಮ ಶಾಸಕರನ್ನ ವಿವಿಧ ಹೋಟೆಲ್ಗಳಲ್ಲಿ ಇಟ್ಟಿದೆ.
ಯಾವ ರಾಜ್ಯಗಳಲ್ಲಿ ರೆಸಾರ್ಟ್ ರಾಜಕೀಯ
ಹರಿಯಾಣ
1982ರಲ್ಲಿ ಹರಿಯಾಣದಲ್ಲಿ ನಡೆದ ಚುನಾವಣೆ ವೇಳೆ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆದುಕೊಳ್ಳಲಿಲ್ಲ. ಹೀಗಾಗಿ ಐಎನ್ಎಲ್ಡಿ-ಬಿಜೆಪಿ ಮೈತ್ರಿ ಹೊರತಾಗಿ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ರಚನೆ ಮಾಡಲು ಆಹ್ವಾನ ನೀಡಲಾಗಿತ್ತು. ಈ ವೇಳೆ ಐಎನ್ಎಲ್ಡಿ ಮುಖ್ಯಸ್ಥೆ ದೇವಿ ಲಾಲ್ ತಕ್ಷಣವೇ ತಮ್ಮ ಹಾಗೂ ಬಿಜೆಪಿ ಶಾಸಕರನ್ನ ಕರೆದುಕೊಂಡು ಹೋಗಿ ದೆಹಲಿ ರೆಸಾರ್ಟ್ನಲ್ಲಿ ಇಡುತ್ತಾರೆ. ಆದರೂ ಕಾಂಗ್ರೆಸ್ ಈ ವೇಳೆ ಕೆಲ ಶಾಸಕರನ್ನ ತನ್ನತ್ತ ಸೆಳೆದುಕೊಂಡು ಸರ್ಕಾರ ರಚನೆ ಮಾಡುತ್ತದೆ.
ಕರ್ನಾಟಕ
ರೆಸಾರ್ಟ್ ರಾಜಕೀಯದಲ್ಲಿ ಕರ್ನಾಟಕದ್ದು ಮೆಲುಗೈ. ಈ ವಿಷಯದಲ್ಲಿ ಅಗ್ರಸ್ಥಾನ ಹೊಂದಿರುವ ಕರ್ನಾಟಕ 1983ರಲ್ಲಿ ರಾಮಕೃಷ್ಣ ಹೆಗ್ಡೆ ಅವರು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ತಮ್ಮ ಸರ್ಕಾರ ಉಳಿಸಿಕೊಳ್ಳುವುದರಿಂದ ಹಿಡಿದು, ಬಿ.ಎಸ್.ಯಡಿಯೂರಪ್ಪ 2009-11ರ ನಡುವಿನ ಅವಧಿಯಲ್ಲಿ ಮತ್ತು 2004, 2006, 2008 ಮತ್ತು 2012ರಲ್ಲೂ ಇದು ನಡೆದಿದೆ.
ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ವೇಳೆ ಬಿಜೆಪಿಯ ಸುಮಾರು 80 ಶಾಸಕರನ್ನು ಬೆಂಗಳೂರಿನ ಹೊರವಲಯದಲ್ಲಿರುವ ಐಷಾರಾಮಿ ರೆಸಾರ್ಟ್ಗೆ ಕರೆದೊಯ್ಯಲಾಗಿತ್ತು. 2009-11ರ ಅವಧಿಯಲ್ಲಿ ಅನೇಕ ಬಾರಿ ಇದು ನಡೆದಿದೆ. 2017ರಲ್ಲಿ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಗುಜರಾತ್ನ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯಲು ಮುಂದಾಗಿತ್ತು. ಇದನ್ನು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಯಶಸ್ವಿಯಾಗಿ ತಡೆಯಲಾಯಿತು. ಗುಜರಾತ್ನ ಸುಮಾರು 44 ಕಾಂಗ್ರೆಸ್ ಶಾಸಕರನ್ನು ಬಿಡದಿ ಸಮೀಪದ ರೆಸಾರ್ಟ್ನಲ್ಲಿ ಸುಮಾರು ಒಂದು ವಾರ ಕಾಲ ಇಡಲಾಗಿತ್ತು. ಇದು ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. 2019ರ ಜನವರಿಯಲ್ಲೂ ಕಾಂಗ್ರೆಸ್ ಮತ್ತೆ ತನ್ನ ಶಾಸಕರನ್ನು ಬಿಡದಿಯ ರೆಸಾರ್ಟ್ನಲ್ಲಿ ಇಟ್ಟಿದ್ದು ಗಮನಾರ್ಹ. ಆದರೆ ಈ ವೇಳೆ ಸಮ್ಮಿಶ್ರ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ.
ಆಂಧ್ರ ಪ್ರದೇಶ
1984: ಎನ್.ಟಿ.ರಾಮ ರಾವ್ ಅವರು ತೆರೆದ ಹೃದಯ ಶಸ್ತ್ರಚಿಕಿತ್ಸೆಗಾಗಿ ಯುಎಸ್ಗೆ ಹೋಗಬೇಕಾಗಿತ್ತು. ಈ ವೇಳೆ ಅವರ ಅನುಪಸ್ಥಿತಿಯಲ್ಲಿ ರಾಜ್ಯಪಾಲ ಠಾಕೂರ್ ರಾಮ್ಲಾಲ್ ಎನ್. ಭಾಸ್ಕರ್ ರಾವ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದರು. ಈ ವೇಳೆ ಟಿಡಿಪಿ ಶಾಸಕರನ್ನು ಬೆಂಗಳೂರಿನ ರೆಸಾರ್ಟ್ಗೆ ಕರೆದೊಯ್ದು ನಂತರ ದೆಹಲಿಗೆ ಕರೆದೊಯ್ಯಲಾಗುತ್ತದೆ. ಹೀಗಾಗಿ ಆಂಧ್ರ ಪ್ರದೇಶದಲ್ಲಿ ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತದೆ. ಇದಾಗಿ ಎರಡು ತಿಂಗಳ ಬಳಿಕ ರಥಯಾತ್ರೆ ನಡೆಸಿ ಎನ್ಟಿಆರ್ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಾರೆ.
1995: ಎನ್ಟಿಆರ್ ಅವರನ್ನು ಪಕ್ಷದಿಂದ ಹೊರ ಹಾಕಲು ಬಯಸಿ ಎನ್.ಚಂದ್ರಬಾಬು ನಾಯ್ಡು ತಮಗೆ ನಿಷ್ಠರಾಗಿರುವ ಶಾಸಕರನ್ನು ಹೈದರಾಬಾದ್ ಹೋಟೆಲ್ನಲ್ಲಿ ಇಡುತ್ತಾರೆ.
ಗುಜರಾತ್
1995ರಲ್ಲಿ ಶಂಕರ್ ಸಿಂಗ್ ವಘೇಲಾ ಬಿಜೆಪಿ ನಾಯಕತ್ವದ ವಿರುದ್ಧ 47 ಶಾಸಕರೊಂದಿಗೆ ಬಂಡಾಯ ಏಳುತ್ತಾರೆ. ಈ ವೇಳೆ ವಘೇಲಾ ಕೆಲ ಶಾಸಕರನ್ನ ಮಧ್ಯಪ್ರದೇಶ ಹೋಟೆಲ್ಗೆ ಕರೆದೊಯ್ದು ಏಳು ದಿನಗಳ ಕಾಲ ಇರಿಸುತ್ತಾರೆ. ಆದರೆ ಕೊನೆಯದಾಗಿ ರಾಜಿ ಮಾಡಿಕೊಳ್ಳಲಾಗುತ್ತದೆ.
ಆಗಸ್ಟ್ 2017: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತ ಸಹಾಯಕ ಅಹ್ಮದ್ ಪಟೇಲ್ ಅವರು ಸಂಸತ್ತಿನ ಮೇಲ್ಮನೆಗೆ ಮರು ಚುನಾವಣೆ ಬಯಸಿದ್ದರು. ಈ ವೇಳೆ ಕೆಲ ಶಾಸಕರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಪಕ್ಷಾಂತರಗೊಂಡ ಕಾರಣ ಬಿಜೆಪಿ ಕುದುರೆ ವ್ಯಾಪಾರದಲ್ಲಿ ನಿರತವಾಗಿದೆ ಎಂದು ಆರೋಪಿಸಿ ತಮ್ಮ 44 ಶಾಸಕರನ್ನು ಬೆಂಗಳೂರಿನ ಈಗಲ್ಟನ್ ಗಾಲ್ಫ್ ರೆಸಾರ್ಟ್ಗೆ ಸ್ಥಳಾಂತರ ಮಾಡಿತ್ತು.
ಉತ್ತರ ಪ್ರದೇಶ
1998 ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವನ್ನು ರಾಜ್ಯಪಾಲ ರೋಮೇಶ್ ಭಂಡಾರಿ ವಜಾಗೊಳಿಸಿದರು. ಕಾಂಗ್ರೆಸ್ನ ಜಗದಾಂಬಿಕಾ ಪಾಲ್ ಅವರನ್ನು 48 ಗಂಟೆಗಳ ಕಾಲ ಮುಖ್ಯಮಂತ್ರಿಯಾಗಿ ನೇಮಿಸಲಾಯಿತು. ವಿಶ್ವಾಸ ಮತಯಾಚನೆ ಮಾಡಲು ಬಿಜೆಪಿ ತನ್ನ ಶಾಸಕರನ್ನ ಸ್ಥಳಾಂತರ ಮಾಡಿತ್ತು. ಈ ವೇಳೆ ಶ್ರೀ ಸಿಂಗ್ ವಿಶ್ವಾಸಮತ ಗೆದ್ದರು.
ಬಿಹಾರ
ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ 2000ರಲ್ಲಿ ತಮ್ಮ ಶಾಸಕರನ್ನು ಪಾಟ್ನಾದ ಹೋಟೆಲ್ಗೆ ರವಾನೆ ಮಾಡಿದ್ದವು. ಈ ವೇಳೆ ಜೆಡಿಯು ನಿತೀಶ್ ಕುಮಾರ್ ತಮ್ಮ ಶಾಸಕರನ್ನು ಆಮಿಷಕ್ಕೆ ಒಳಪಡಿಸುತ್ತಾರೆ ಎಂಬ ಭಯದಿಂದ ಈ ನಿರ್ಧಾರ ಕೈಗೊಂಡಿದ್ದರು. ನಿತೀಶ್ ಕುಮಾರ್ ವಿಶ್ವಾಸಾರ್ಹ ಮತ ಕಳೆದುಕೊಂಡರೂ ಏಳು ದಿನ ಸಿಎಂ ಆಗಿ ಕಾರ್ಯನಿರ್ವಹಿಸುತ್ತಾರೆ. 2005ರಲ್ಲಿ ಲೋಕ ಜನಶಕ್ತಿ ಪಕ್ಷದ ಶಾಸಕರು ರೆಸಾರ್ಟ್ನಲ್ಲಿ ವಾಸ್ತವ್ಯ ಹೊಡಿದ್ರು.
ಮಹಾರಾಷ್ಟ್ರ
2002ರಲ್ಲಿ ಶಿವಸೇನೆ-ಬಿಜೆಪಿಯಿಂದ ಉಳಿಸಿಕೊಳ್ಳಲು ಆಗಿನ ಮುಖ್ಯಮಂತ್ರಿ ವಿಲಸ್ರಾವ್ ದೇಶ್ಮುಖ್ ಬೆಂಗಳೂರಿನ ಐಷಾರಾಮಿ ರೆಸಾರ್ಟ್ಗೆ ತಮ್ಮ ಶಾಸಕರನ್ನ ರವಾನೆ ಮಾಡಿದ್ರು. ಇದೀಗ ಸಹ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ರೆಸಾರ್ಟ್ ರಾಜಕೀಯದ ಮೊರೆ ಹೋಗಿವೆ.
ಉತ್ತರಾಖಂಡ್
2016ರಲ್ಲಿ ಉತ್ತರಾಖಂಡ್ನ ಕಾಂಗ್ರೆಸ್ ಸರ್ಕಾರ ಬಂಡಾಯ ಶಾಸಕರನ್ನು ಹೊರಹಾಕಿದ ನಂತರ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ವಿಶ್ವಾಸ ಮತಯಾಚನೆ ವೇಳೆ ಬಿಜೆಪಿ ತನ್ನ ಶಾಸಕರನ್ನ ಜೈಪುರ ಹೋಟೆಲ್ಗೆ ರವಾನೆ ಮಾಡಿತ್ತು. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕುದುರೆ ವ್ಯಾಪಾರದ ಟೀಕೆಗಳು ಕೇಳಿ ಬಂದಿದ್ದವು.
ತಮಿಳುನಾಡು
2017ರಲ್ಲಿ ಓ.ಪನ್ನಿರ್ ಸೇಲ್ವಂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ತಮ್ಮ ನಿಷ್ಠಾವಂತ ಶಾಸಕರನ್ನು ಚೆನ್ನೈ ಬಳಿಯ ರೆಸಾರ್ಟ್ಗೆ ಕಳುಹಿಸಿದ್ದರು.