ತ್ರಿಪುರ: ಅಗರ್ತಾಲದಲ್ಲಿ ಮುಖ್ಯಮಂತ್ರಿ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ನಿರುದ್ಯೋಗಿ ಶಿಕ್ಷಕರ ಮೇಲೆ ಭದ್ರತಾ ಸಿಬ್ಬಂದಿ ಲಾಠಿ ಚಾರ್ಜ್ ನಡೆಸಿದ್ದು, ಇಬ್ಬರು ಫೋಟೋ ಜರ್ನಲಿಸ್ಟ್ ಸೇರಿದಂತೆ 87 ಮಂದಿ ಗಾಯಗೊಂಡಿದ್ದಾರೆ. 223 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿನ ನ್ಯೂನ್ಯತೆಗಳಿಂದಾಗಿ ಕಳೆದ ವರ್ಷ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ ಕೆಲಸ ಕಳೆದುಕೊಂಡ 10,323 ಶಿಕ್ಷಕರಲ್ಲಿ ಹೆಚ್ಚಿನವರು ಸರ್ಕಾರಿ ಇಲಾಖೆಗಳಲ್ಲಿ ನೇರ ಉದ್ಯೋಗವನ್ನು ಬಯಸುತ್ತಿದ್ದರು. ಆದರೆ ಜಂಟಿ ಚಳವಳಿ ಸಮಿತಿಯ (ಜೆಎಂಸಿ) ಬ್ಯಾನರ್ ಅಡಿಯಲ್ಲಿ ವಜಾಗೊಳಿಸಿದ ಶಿಕ್ಷಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬುಧವಾರ ಬೆಳಗ್ಗೆ ಪ್ರತಿಭಟನಾ ಸ್ಥಳದಿಂದ 500 ಮಂದಿಯನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಬಂಧಿತ ಶಿಕ್ಷಕರ ಬಿಡುಗಡೆ ಮತ್ತು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರು ಮುಖ್ಯಮಂತ್ರಿ ನಿವಾಸದ ಮುಂದೆ ಜಮಾಯಿಸಿ ಘೋಷಣೆ ಕೂಗಿದರು. ಅಷ್ಟೇ ಅಲ್ಲದೆ, ಬಿಕ್ಕಟ್ಟು ಶಮನಕ್ಕೆ ಸಿಎಂ ನೇರ ಚರ್ಚೆಗೆ ಬರಬೇಕೆಂದು ಆಗ್ರಹಿಸಿದರು.
ಶಿಕ್ಷಕರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಯಿತು. ಜನರ ಗುಂಪು ಚದುರಿಸಲು ಪೊಲೀಸರು ಪ್ರಯತ್ನಿಸಿದರೂ ಸಫಲವಾಗದ ಕಾರಣ ಜಲಫಿರಂಗಿ ಬಳಸಿದ್ದಾರೆ. ಆದರೆ ಕೊನೆಗೆ ಲಾಠಿ ಪ್ರಹಾರ ಮಾಡಿದ್ದಾರೆ. ಈ ವೇಳೆ 87 ಮಂದಿ ಗಾಯಗೊಂಡಿದ್ದಾರೆ.