ಗುಜರಾತ್: ದೇಶದೆಲ್ಲೆಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದು, ಇತ್ತ ಪಾಕಿಸ್ತಾನದಿಂದ ಗುಜರಾತ್ಗೆ ಬಂದು ವಾಸಿಸುತ್ತಿದ್ದ 7 ಜನ ನಿರಾಶ್ರಿತರಿಗೆ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಶುಕ್ರವಾರ ಭಾರತ ಪೌರತ್ವದ ಪ್ರಮಾಣ ಪತ್ರಗಳನ್ನು ನೀಡಿ ಅಭಿನಂದಿಸಿದರು.
'ನಾನು 2007ರಲ್ಲಿ ಪಾಕಿಸ್ತಾನ ಬಿಟ್ಟು ಬಂದಿದ್ದೆ. ಅದು ಇಸ್ಲಾಮಿಕ್ ಗಣರಾಜ್ಯ. ಅಲ್ಲಿ ದೇವಾಲಯಗಳನ್ನ ಧ್ವಂಸ ಮಾಡಲಾಗಿತ್ತು. ಹಿಂದೂ ಹುಡುಗಿಯರು ಹಾಗೂ ಮಹಿಳೆಯರನ್ನು ಅಪಹರಿಸಿ ದೌರ್ಜನ್ಯ ಎಸಗಲಾಗುತ್ತಿತ್ತು. ಭಾರತಕ್ಕೆ ಬಂದ ಮೇಲೆ 2014ರವರೆಗೂ ನಮ್ಮ ಬಳಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಯಾವುದೂ ಇರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕವೇ ನಮಗೆ ಇವೆಲ್ಲವೂ ದೊರೆತಿದ್ದು, ಈಗ ನಾನು ಭಾರತದ ಪ್ರಜೆ ಎಂದು ಹೇಳುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ನಮ್ಮಲ್ಲೀಗ ದೀಪಾವಳಿ ಸಂಭ್ರಮ ಮನೆ ಮಾಡಿದೆ' ಎಂದು ಧಾರ್ಮಿಕ ಕಿರುಕುಳದಿಂದಾಗಿ ಪಾಕಿಸ್ತಾನ ತೊರೆದು ಬಂದಿದ್ದ ಮೆಹ್ತಾಬ್ ಸಿಂಗ್ ಈ ವೇಳೆ ಹೇಳಿದರು.
'ಪಾಕಿಸ್ತಾನದಲ್ಲಿನ ಧಾರ್ಮಿಕ ದೌರ್ಜನ್ಯದಿಂದಾಗಿ ಗುಜರಾತ್ಗೆ ಬಂದ ಅನೇಕ ನಿರಾಶ್ರಿತರಿಗೆ ಈಗ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದಾಗಿ ಭಾರತದ ಪೌರತ್ವ ಸಿಕ್ಕಿದಂತಾಗಿದೆ. ಅವರೆಲ್ಲರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಧನ್ಯವಾದಗಳನ್ನ ಸಲ್ಲಿಸುತ್ತಿದ್ದಾರೆ' ಎಂದು ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಯು 2014ರ ಡಿ.31ರೊಳಗೆ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಲ್ಲಿನ ಧಾರ್ಮಿಕ ಕಿರುಕುಳಕ್ಕೆ ಬೇಸತ್ತು ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಿಗೆ (ಹಿಂದೂ, ಕ್ರೈಸ್ತ, ಬೌದ್ಧ ಹಾಗೂ ಪಾರ್ಸಿ) ಭಾರತದ ಪೌರತ್ವ ನೀಡುವ ಕಾಯ್ದೆಯಾಗಿದೆ.