ಕೋಲ್ಕತಾ: ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಆಲಾಪನ್ ಬಂಡೋಪಾಧ್ಯಾಯ ನಿವೃತ್ತಿ ಹೊಂದಿದ್ದು, ಇನ್ನು ಮುಂದೆ ಅವರು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಮುಖ್ಯ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಇದಕ್ಕೂ ಮುನ್ನ ಇವತ್ತು ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಮುಖ್ಯ ಕಾರ್ಯದರ್ಶಿ ಆಲಾಪನ್ ಬಂಡೋಪಾಧ್ಯಾಯರನ್ನು ವಾಪಸ್ ಕರೆಸಿಕೊಳ್ಳುವ ಕೇಂದ್ರದ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ತಮ್ಮ ಸರ್ಕಾರವು ಅವರನ್ನು ಸೇವೆಯಿಂದ ಬಿಡುಗಡೆ ಮಾಡುತ್ತಿಲ್ಲ ಎಂದು ಮಮತಾ ಕೇಂದ್ರಕ್ಕೆ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಕೇಡರ್ನ 1987ರ ಬ್ಯಾಚ್ ಐಎಎಸ್ ಅಧಿಕಾರಿ ಬಂಡೋಪಾಧ್ಯಾಯ ಅವರಿಗೆ 60 ವರ್ಷ ತುಂಬಿದ ನಂತರ ಇಂದು ನಿವೃತ್ತರಾಗಬೇಕಿತ್ತು. ಆದಾಗ್ಯೂ, ಕೊರೊನಾ ಸಾಂಕ್ರಾಮಿಕ ನಿರ್ವಹಿಸುವಲ್ಲಿ ಅವರು ಮಾಡಿದ ಕಾರ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರವು, ಅವರ ಸೇವೆಯನ್ನು ಮೂರು ತಿಂಗಳು ವಿಸ್ತರಿಸಿತ್ತು.