ಡೆಹ್ರಾಡೂನ್ (ಉತ್ತರಾಖಂಡ್): ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್ನಲ್ಲಿ 200 ವರ್ಷಗಳಷ್ಟು ಹಳೆಯದಾದ ಅಶ್ವತ್ಥ ಮರ ಕಾಪಾಡಲು ಪರಿಸರ ಪ್ರೇಮಿಗಳು ಪ್ರಯತ್ನಿಸುತ್ತಿದ್ದು, ಅದನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲು ಜನರಿಂದ ಆರ್ಥಿಕ ಸಹಾಯದ ಮೊರೆ ಹೋಗಿದ್ದಾರೆ.
ಇಲ್ಲಿನ ಡಿಫೆನ್ಸ್ ಕಾಲೋನಿಯಲ್ಲಿರುವ ಅಶ್ವತ್ಥ ಮರ ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಲು ಹೊರಟಿದೆ. ಈ ವಿಷಯ ತಿಳಿಯುತ್ತಿದ್ದಂತೆ ಮರ ಉಳಿಸಲು ಪರಿಸರ ಪ್ರೇಮಿಗಳು ಮುಂದಾಗಿದ್ದಾರೆ. ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಮರಗಳ ಮಹತ್ವ ತಿಳಿಸಲು ಅಭಿಯಾನ ಆರಂಭಿಸಿದ್ದಾರೆ. ಇದೇ ವೇಳೆ ಅರ್ಥ್ ಅಂಡ್ ಕ್ಲೈಮೇಟ್ ಇನಿಶಿಯೇಟಿವ್ ಸಂಸ್ಥೆ ಈ ಮರವನ್ನು ಸ್ಥಳಾಂತರ ಮಾಡಲು ಯೋಜನೆ ಸಿದ್ಧಪಡಿಸಿದೆ. ಇದಕ್ಕಾಗಿ ಹೈದರಾಬಾದ್ನ ವಾಟ ಫೌಂಡೇಶನ್ ಸಹಕಾರ ಪಡೆಯಲು ಮುಂದಾಗಿದೆ.
ಆರ್ಥಿಕ ಸಹಾಯಕ್ಕೆ ಮನವಿ: ದಿ ಅರ್ಥ್ ಅಂಡ್ ಕ್ಲೈಮೇಟ್ ಇನಿಶಿಯೇಟಿವ್ ಸಂಸ್ಥೆ ಇದುವರೆಗೆ 4 ಮರಗಳನ್ನು ಸ್ಥಳಾಂತರ ಮಾಡಿದೆ. ಮತ್ತೊಂದೆಡೆ, ಹೈದರಾಬಾದ್ನ ವಾಟ ಫೌಂಡೇಶನ್ ಸಹ ಸುಮಾರು 3 ಸಾವಿರ ಮರಗಳ ಸ್ಥಳಾಂತರಿಸಿದೆ. ಆದರೆ, ಸುಮಾರು 200 ವರ್ಷಗಳಷ್ಟು ಹಳೆಯದಾದ ಈ ಮರ 40 ಅಡಿ ಎತ್ತರವಿದೆ. ಇದನ್ನು ಸ್ಥಳಾಂತರಿಸಲು ಜೆಸಿಬಿ, ಪೋಕ್ಲ್ಯಾಂಡ್, ಟ್ರೈಲರ್ನಂತಹ ಸಾಕಷ್ಟು ಯಂತ್ರಗಳು ಮತ್ತು ಕಾರ್ಮಿಕರ ಅಗತ್ಯವಿದೆ. ಇದಕ್ಕಾಗಿ ಹಣ ಮಾಡಬೇಕಾಗುತ್ತದೆ ಎನ್ನುತ್ತಾರೆ ದಿ ಅರ್ಥ್ ಅಂಡ್ ಕ್ಲೈಮೇಟ್ ಇನಿಶಿಯೇಟಿವ್ ಸಂಸ್ಥೆಯ ಸಂಸ್ಥಾಪಕಿ ಡಾ.ಆಂಚಲ್ ಶರ್ಮಾ.
ಈ ಮರ ಸ್ಥಳಾಂತರ ಕಾರ್ಯಕ್ಕೆ ಅಂದಾಜು 2 ಲಕ್ಷ ರೂಪಾಯಿ ಖರ್ಚು ಆಗುತ್ತದೆ. ಸದ್ಯ ಸ್ಥಳೀಯ ಜನರ ಸಹಾಯದೊಂದಿಗೆ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಇದುವರೆಗೆ 17 ಸಾವಿರ ರೂ. ಸಂಗ್ರಹವಾಗಿದೆ. ಆದ್ದರಿಂದ ಈ ಮರವನ್ನು ಉಳಿಸಲು ಜನರು ಸಹ ಮುಂದೆ ಬಂದು, ಆರ್ಥಿಕ ನೆರವು ನೀಡಿ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಈಗಾಗಲೇ ಮರ ಸ್ಥಳಾಂತರಿಸಲು ಸಮೀಪದಲ್ಲೇ ಸುಮಾರು 200 ಮೀಟರ್ ಸ್ಥಳವನ್ನು ಗುರುತಿಸಲಾಗಿದೆ. ಈ ಮರದ ಬಳಿ ಇರುವ ಕಂಬಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಇಂಧನ ಇಲಾಖೆಯ ಸಹಾಯವೂ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಈ ಮರ ಸ್ಥಳಾಂತರಕ್ಕೆ ಪರಿಸರ ಪ್ರೇಮಿಗಳು ಮುಂದಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಹ ಸ್ವಲ್ಪ ಕಾಲಾವಕಾಶ ನೀಡಿದೆ. ಈ ಬಗ್ಗೆ ಡೆಹ್ರಾಡೂನ್ ವಿಭಾಗೀಯ ಅರಣ್ಯಾಧಿಕಾರಿ ನಿತೀಶ್ ಮಣಿ ತ್ರಿಪಾಠಿ ಮಾತನಾಡಿ, ಮರವನ್ನು ಉಳಿಸಲು ಪರಿಸರ ಪ್ರೇಮಿಗಳ ಮನವಿಯನ್ನು ಸ್ವೀಕರಿಸಲಾಗಿದೆ. ಈ ಮರದ ಸ್ಥಳಾಂತರ ನಿರ್ದಿಷ್ಟ ಸಮಯದಲ್ಲಿ ಮಾಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮರದ ಬಗ್ಗೆ ಧಾರ್ಮಿಕ-ವೈಜ್ಞಾನಿಕ ನಂಬಿಕೆಗಳು: ಅಶ್ವತ್ಥ ಮರವು ತನ್ನದೇ ಆದ ಧಾರ್ಮಿಕ ಮಹತ್ವವನ್ನು ಹೊಂದಿದೆ. ಸ್ಥಳೀಯ ಜನರು ಈ ಮರವನ್ನು ವರ್ಷಗಳಿಂದ ಪೂಜಿಸುತ್ತಿದ್ದಾರೆ. ಮರ ಬಳಿ ಧಾರ್ಮಿಕ ಆಚರಣೆಗಳನ್ನೂ ಮಾಡುತ್ತಾ ಬಂದಿದ್ಧಾರೆ. ಧಾರ್ಮಿಕವಾಗಿ ಈ ಮರವು ಅತ್ಯಂತ ಶುದ್ಧ ಮತ್ತು ಪೂಜ್ಯನೀಯ ಹಾಗೂ ಈ ಮರ ದೇವರುಗಳ ವಾಸಸ್ಥಾನವೆಂದೂ ನಂಬಲಾಗುತ್ತದೆ.
ಇತ್ತ, ವೈಜ್ಞಾನಿಕ ಪ್ರಾಮುಖ್ಯತೆಯನ್ನು ಸಹ ಈ ಮರ ಹೊಂದಿದೆ. ಅಶ್ವತ್ಥ ಮರವು 24 ಗಂಟೆಗಳ ಕಾಲ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಇದು ಮಾನವರು ಸೇರಿದಂತೆ ಇಡೀ ಪರಿಸರಕ್ಕೆ ಅತಂತ್ಯ ಮುಖ್ಯವಾದ ಮರವಾಗಿದೆ. ಆದ್ದರಿಂದ ಇಂತಹ ಮರಗಳ ಉಳಿಸುವ ಹೊಣೆ ಎಲ್ಲರದ್ದು ಎಂಬ ಪರಿಸರ ಪ್ರೇಮಿಗಳು ಒತ್ತಾಸೆಯಾಗಿದೆ.
ಇದನ್ನೂ ಓದಿ: ಭಾರಿ ಮಳೆಗೆ ಭೂಮಿ ಕುಸಿದು ಧರೆಗುರುಳಿದ ನಾಲ್ಕು ಅಂತಸ್ತಿನ ಕಟ್ಟಡ