ಬೆಂಗಳೂರು: ವಿಧಾನಸಭೆ ಕ್ಷೇತ್ರಗಳ ಮರು ವಿಂಗಡಣೆ ಸಂದರ್ಭ ರಚನೆಯಾಗಿರುವ ಸರ್ವಜ್ಞನಗರ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಮುನ್ನಡೆದಿರುವ ಕಾಂಗ್ರೆಸ್ನ ಕೆ.ಜೆ. ಜಾರ್ಜ್ ಗೆಲುವಿನ ಓಟಕ್ಕೆ ಈ ಸಲ ಬ್ರೇಕ್ ಹಾಕಲು, ಬಿಜೆಪಿ- ಕಾಂಗ್ರೆಸ್ ಪೈಪೋಟಿ ನಡೆಸಲಿವೆ. ಆದರೆ, ಕ್ಷೇತ್ರದ ಮೇಲೆ ಜಾರ್ಜ್ ಹಿಡಿತ ಬಿಗಿಯಾಗಿದೆ.
ಬಹು ಧರ್ಮೀಯರು, ಹಲವು ಭಾಷಿಕರು, ವಿವಿಧ ಸಂಸ್ಕೃತಿಯನ್ನು ಒಳಗೊಂಡವರು, ಬಹುವಿಧದ ಆಚರಣೆಗಳ ತಾಣವಾಗಿ ಸರ್ವಜ್ಞನಗರ ಗುರುತಿಸಿಕೊಂಡಿದೆ. ಹೆಚ್ಚು ಪ್ರಗತಿ ಕಂಡಿದೆ ಎಂದು ಹೇಳಲಾಗದಿದ್ದರೂ, ಹಿಂದುಳಿದ ಪ್ರದೇಶವಂತೂ ಅಲ್ಲ. ಕಾಂಗ್ರೆಸ್ ಭದ್ರಕೋಟೆ ಎಂದು ಕ್ಷೇತ್ರವನ್ನು ಕರೆಯುವುದಕ್ಕಿಂತ ಮಾಜಿ ಗೃಹ ಸಚಿವರು ಈ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆಯಾಗಿಸಿದ್ದಾರೆ. ನಿರಂತರವಾಗಿ ಗೆಲ್ಲುತ್ತಾ ಬರುವ ಜತೆಗೆ ಮತ್ತೆ ಗೆಲ್ಲಲು ಅಗತ್ಯವಿರುವ ಜನ ಬೆಂಬಲವೂ ಅವರಿಗಿದಿದೆ ಎಂದೇ ಹೇಳಬಹುದು. ವರ್ಷದಿಂದ ವರ್ಷಕ್ಕೆ ತಮ್ಮ ಮತಗಳಿಕೆಯನ್ನು ಹಾಗೂ ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದ್ದಾರೆ.
ಜಾರ್ಜ್ ಗೆಲುವಿನ ನಾಗಾಲೋಟ: 2008 ರಲ್ಲಿ ಕ್ಷೇತ್ರ ಮರುವಿಂಗಡಣೆ ನಂತರ ಹೊಸದಾಗಿ ರಚನೆಯಾದ ಸರ್ವಜ್ಞನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜಾರ್ಜ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಇದಕ್ಕೂ ಮೊದಲು ಅಂದರೆ 1985 ರಲ್ಲೇ ಅಂದಿನ ಭಾರತೀನಗರ ವಿಧಾನಸಭೆ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. 1989 ರಲ್ಲಿ ಅಲ್ಲಿಂದಲೇ ಮರು ಆಯ್ಕೆಯಾದರು. ವೀರೇಂದ್ರ ಪಾಟೀಲ್, ಎಸ್. ಬಂಗಾರಪ್ಪ ಸಿಎಂ ಆಗಿದ್ದಾಗ ಅವರ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ನಂತರ ವಸತಿ ಮತ್ತು ನಗರ ಅಭಿವೃದ್ಧಿ ಖಾತೆಯ ಸಂಪುಟ ಸಚಿವರಾಗಿ ಕೆಲಸ ಮಾಡಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಗೃಹ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಮತ್ತು 2018 ರಲ್ಲಿ ಎಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಖಾತೆಯ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ.
ಈ ಸಂದರ್ಭದಲ್ಲಿ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿ ತೋರಿಸಿದ್ದಾರೆ. 2008 ರಲ್ಲಿ ಬಿಜೆಪಿಯ ಆರ್. ಶಂಕರ್ ವಿರುದ್ಧ 22,608 ಮತಗಳ ಅಂತರದ ಗೆಲುವು, 2013 ರಲ್ಲಿ ಬಿಜೆಪಿಯ ಪದ್ಮನಾಭ ರೆಡ್ಡಿ ವಿರುದ್ಧ 22,853 ಹಾಗೂ 2018 ರಲ್ಲಿ ಬಿಜೆಪಿಯ ಎಂ.ಎನ್. ರೆಡ್ಡಿ ವಿರುದ್ಧ 53,304 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.
ಅಭಿವೃದ್ಧಿಯ ನಡುವೆ ಇವೆ ಸಮಸ್ಯೆಗಳು: ರಸ್ತೆ ಅವ್ಯವಸ್ಥೆ, ಚರಂಡಿ ದುರವಸ್ಥೆ, ಅಸಮರ್ಪಕ ಕಸ ವಿಲೇವಾರಿ, ಆಡಳಿತ ಯಂತ್ರ ಚುರುಕುಗೊಳ್ಳದಿರುವುದು, ಅಪರಾಧ ಚಟುವಟಿಕೆಗಳು ಹೆಚ್ಚಾಗಿರುವುದು, ಅಭಿವೃದ್ಧಿಯಲ್ಲಿ ಹಿಂದುಳಿದ ಕ್ಷೇತ್ರವಾಗಿ ಗೋಚರಿಸುತ್ತಿದೆ. ಸರ್ವಜ್ಞನಗರದ ಕ್ಷೇತ್ರದಲ್ಲಿ ಬಡ, ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಜತೆಗೆ ಎಸ್ಸಿ/ ಎಸ್ಟಿ ಹಾಗೂ ಅಲ್ಪಸಂಖ್ಯಾತರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ನಾಗವಾರ, ಎಚ್ಬಿಆರ್ ಬಡಾವಣೆ, ಬಾಣಸವಾಡಿ, ಕಮ್ಮನಹಳ್ಳಿ, ಕಾಚರಕನಹಳ್ಳಿ, ಕಾಡು ಗೊಂಡನಹಳ್ಳಿ, ಲಿಂಗರಾಜಪುರ ಹಾಗೂ ಮಾರುತಿ ಸೇವಾನಗರ ಕ್ಷೇತ್ರ ವ್ಯಾಪ್ತಿಯ ಪ್ರಮುಖ ಪ್ರದೇಶಗಳು. ಸ್ವತಃ ಕೆ.ಜೆ. ಜಾರ್ಜ್ ಅವರೇ ವಲಸಿಗರಾಗಿದ್ದಾರೆ. ವ್ಯಾಪಾರ ಉದ್ದೇಶದಿಂದ ಕೇರಳದಿಂದ ರಾಜ್ಯಕ್ಕೆ ಬಂದವರು. ಕ್ಷೇತ್ರದಲ್ಲಿ ಇನ್ನೊಂದು ಸಮಸ್ಯೆಯೆಂದರೆ ಅದು ವಲಸೆ. ಇಲ್ಲಿ ಸಾಕಷ್ಟು ಮಂದಿ ವಲಸೆ ಬಂದು ಆಶ್ರಯ ಪಡೆಯುತ್ತಾರೆ.
ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿ ಆಯ್ಕೆಯ ಗೊಂದಲ ಇಲ್ಲ. ಜಾರ್ಜ್ ಅವರೇ ಹುರಿಯಾಳು. ಇನ್ನು ಬಿಜೆಪಿಯಿಂದ ಎಂ.ಎನ್. ರೆಡ್ಡಿ ಜೊತೆ 2013 ರ ಅಭ್ಯರ್ಥಿ, ಬಿಬಿಎಂಪಿ ಮಾಜಿ ಮೇಯರ್ ಪದ್ಮನಾಭರೆಡ್ಡಿ ಟಿಕೆಟ್ ಬಯಸಿದ್ದಾರೆ. ಈ ಸಾರಿ ಕಾಂಗ್ರೆಸ್ ಮತಬ್ಯಾಂಕ್ ಸೆಳೆಯಲು ಆಮ್ ಆದ್ಮಿ ಪಕ್ಷ ಅಖಾಡಕ್ಕೆ ಇಳಿಯುತ್ತಿದೆ. ಇನ್ನು ಜೆಡಿಎಸ್ ಸಹ ಉತ್ತಮ ಅಭ್ಯರ್ಥಿ ಹುಡುಕಾಟದಲ್ಲಿದೆ.
ಮತದಾರರ ವಿವರ: ಒಟ್ಟು 3,52,927 ಮತದಾರರು ಕ್ಷೇತ್ರದಲ್ಲಿದ್ದಾರೆ. ಇವರಲ್ಲಿ 1,78,183 ಪುರುಷ ಹಾಗೂ 1,74,734 ಮಹಿಳೆಯರು ಹಾಗೂ 60 ಮಂದಿ ಇತರರು ಮತದಾರರಾಗಿದ್ದಾರೆ. ಮುಸ್ಲಿಂ ಹಾಗೂ ಇತರೆ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಸಂಖ್ಯಾಬಲದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಾಗಿದೆ.
ಓದಿ: ಸಂಚಾರ ದಟ್ಟಣೆಯೇ ದೊಡ್ಡ ಸವಾಲು: ಯಾರಿಗೆ ಒಲಿಯಲಿದೆ ಕೆ.ಆರ್. ಪುರ ಕ್ಷೇತ್ರ?