ಮಂಗಳೂರು:ಪ್ರೀತಿಸಿದ್ದ ಹುಡುಗಿ ಕೈಕೊಟ್ಟಿದ್ದರಿಂದ ಆಘಾತಕ್ಕೊಳಗಾದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ತಾಲೂಕಿನ ಮುತ್ತೂರು ಗ್ರಾಮದ ತಾರೆಮಾರ್ ಅರ್ಭಿ ಎಂಬಲ್ಲಿ ನಡೆದಿದೆ.
ಚಂದ್ರಶೇಖರ (32) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೇಸ್ತ್ರಿ ಕೆಲಸ ಮಾಡುತ್ತಿದ್ದ ಈತ ಹಲವು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆ ದೂರವಾಗಲು ಯತ್ನಿಸಿದಾಗ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಎಂದಿನಂತೆ ಕೆಲಸ ಮುಗಿಸಿ ಶನಿವಾರ ಮನೆಗೆ ಬಂದು ಅಕ್ಕನ ಮಕ್ಕಳಿಗೆ ತಿಂಡಿ ಕೊಟ್ಟು ಹೋದಾತ ಮತ್ತೆ ಸ್ನೇಹಿತನಿಗೆ ವಾಯ್ಸ್ ಮೆಸೇಜ್ ಹಾಕಿ (ಬೆಳಗ್ಗೆ 5.30) ಬೈಕ್ ಇರುವ ಜಾಗ ತಿಳಿಸಿ, ಅದನ್ನು ಕೊಂಡೊಯ್ಯುವಂತೆ ತಿಳಿಸಿದ್ದ. ಆತ ಸೂಚಿಸಿದ್ದ ಸ್ಥಳಕ್ಕೆ ಆಗಮಿಸಿದಾಗ ಚಂದ್ರಶೇಖರ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ನಿರ್ಧಾರಕ್ಕೆ ತಾನು ಪ್ರೀತಿಸಿದ್ದ ಯುವತಿಯೇ ಕಾರಣ ಎಂದು ಡೆತ್ನೋಟ್ ಬರೆದಿದ್ದಾನೆ. ಯುವತಿಯ ಹೆಸರು, ಮೊಬೈಲ್ ನಂಬರ್ ಬರೆದಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.