ಮಂಗಳೂರು: ಪ್ರಯಾಣಿಕರೆದುರೇ ಹೊಡೆದಾಡಿಕೊಂಡ ಖಾಸಗಿ ಬಸ್ ಚಾಲಕ-ನಿರ್ವಾಹಕರು
Published : 4 hours ago
ಮಂಗಳೂರು: ಬಸ್ನೊಳಗಡೆ ಪ್ರಯಾಣಿಕರು ಇದ್ದಾಗಲೇ ಖಾಸಗಿ ಬಸ್ಗಳ ಚಾಲಕ ಮತ್ತು ನಿರ್ವಾಹಕರು ಹೊಡೆದಾಡಿಕೊಂಡಿರುವ ಘಟನೆ ಮಂಗಳೂರಿನ ಬಲ್ಮಠದ ಬಳಿ ನಡೆದಿದೆ. ಬಸ್ನೊಳಗಡೆ ಇದ್ದ ವಿಡಿಯೋದಲ್ಲಿ ಇವರ ಹೊಡೆದಾಟದ ದೃಶ್ಯ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಓರ್ವ ಬಸ್ ಚಾಲಕ ಉಗುಳಿದ್ದು, ಮತ್ತೊಂದು ಬಸ್ನ ನಿರ್ವಾಹಕನ ಮೇಲೆ ಬಿದ್ದಿದೆ ಎಂದು ಆರೋಪಿಸಿ ವಿಟ್ಲ-ಮಂಗಳೂರಿಗೆ ಬರುವ ಖಾಸಗಿ ಬಸ್ ಚಾಲಕ-ನಿರ್ವಾಹಕರ ನಡುವೆ ಈ ಹೊಡೆದಾಟ ನಡೆದಿದೆ. ಉಗುಳಿದ್ದು ತನ್ನ ಮೈಮೇಲೆ ಬಿದ್ದಿದೆ ಎಂದು ನಿರ್ವಾಹಕ ಮತ್ತೊಂದು ಬಸ್ನೊಳಗಡೆ ನುಗ್ಗಿ ಬಸ್ ಡ್ರೈವರ್ ಅನ್ನು ಎಳೆದುಹಾಕಿದ್ದಾನೆ. ಇದರಿಂದ ಇಬ್ಬರು ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟ ದೃಶ್ಯ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.
ಈ ವೇಳೆ ಓರ್ವ ಸ್ಕೂಡ್ರೈವರ್ನಲ್ಲಿ ಚುಚ್ಚಿ ಹಲ್ಲೆಗೆ ಯತ್ನ ನಡೆಸಿದ್ದಾನೆ. ಬಸ್ನೊಳಗಡೆ ಪ್ರಯಾಣಿಕರಿದ್ದಾಗಲೇ ಚಾಲಕ-ನಿರ್ವಾಹಕರು ರೌಡಿ ಕಾಳಗ ನಡೆಸಿದ್ದರಿಂದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಅಷ್ಟೇ ಅಲ್ಲದೇ ಪ್ರಯಾಣಿಕರೊಂದಿಗೂ ರೌಡಿಗಳ ರೀತಿ ವರ್ತಿಸಿದ್ದಾರೆ. ಈ ಬಗ್ಗೆ ನಗರದ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಡಿಸಿಪಿ ದಿನೇಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡ: ಮನೆಗೆ ನುಗ್ಗಿ ಹಲ್ಲೆ ನಡೆಸಿದ ಅಪರಾಧಿಗಳಿಗೆ 6 ವರ್ಷ ಶಿಕ್ಷೆ