ಕರ್ನಾಟಕ

karnataka

ETV Bharat / videos

ಗಬ್ಬೂರು ಶ್ರೀ ಬೂದಿಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ತೆರೆ: ಮೂಲಸ್ಥಾನ ಸೇರಿದ ತೇರು - SRI BUDIBASAVESHWARA JATRA

By ETV Bharat Karnataka Team

Published : Feb 13, 2025, 2:14 PM IST

ರಾಯಚೂರು: ಧಾರ್ಮಿಕವಾಗಿ ಹಾಗೂ ಐತಿಹಾಸಿಕವಾಗಿಯೂ ಪ್ರಸಿದ್ಧಿ ಪಡೆದಿರುವ ಗಬ್ಬೂರು ಶ್ರೀ ಬೂದಿಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿಯಾಗಿ ತೆರೆ ಬಿದ್ದಿದೆ. ಸಹಸ್ರ ಭಕ್ತರ ಭಕ್ತಿಯ ಝೇಂಕಾರದೊಂದಿಗೆ ರಥವು ತನ್ನ ಮೂಲ ಸ್ಥಾನವನ್ನು ಸೇರಿತು.

ಹೌದು, ಮಠದ ಪೀಠಾಧಿಪತಿ ಬೂದಿ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಶ್ರೀಬೂದಿ ಬಸವೇಶ್ವರ ಮಠದ ಮಹಾರಥೋತ್ಸವ ಇತ್ತೀಚೆಗೆ ವೈಭವದಿಂದ ನಡೆಯಿತು. ಇದಾದ ನಂತರ ಭರತ ಹುಣ್ಣಿಮೆಯಂದು ಜಾತ್ರಾ ಮಹೋತ್ಸವ ಮುಗಿದ ನಂತರ ರಥ (ತೇರು) ಮನೆಗೆ ಸೇರುತ್ತದೆ. ರಥವನ್ನು ಏಣಿ ಹಾಗೂ ಹಗ್ಗದ ಸಹಾಯದಿಂದ ಎಳೆದಾಗ ಮುಂದೆ ಸಾಗುವುದನ್ನು ಎಲ್ಲ ಕಡೆ ನೋಡಿರುತ್ತೇವೆ. ಆದರೆ, ಇಲ್ಲಿ ಮಾತ್ರ ಗಬ್ಬೂರು ಬೂದಿ‌ಬಸವೇಶ್ವರ ಬೃಹತ್ ರಥ ಪೀಠಾಧಿಪತಿ ಶ್ರೀ ಬೂದಿ ಬಸವೇಶ್ವರ ಶಿವಾರ್ಚಾಯ ಸ್ವಾಮೀಜಿ ಕೈ ಸನ್ನೆ ಮಾಡಿದರೆ ಮಾತ್ರ ತೇರಿನ ಮನೆಯೊಳಗೆ ಹೋಗುತ್ತದೆ ಎನ್ನುವ ಪತ್ರೀತಿ ಇದೆ. ಹಾಗೂ ಈ ಕ್ಷೇತ್ರದ ಪವಾಡವೆಂದು ಪ್ರಸಿದ್ಧಿ ಪಡೆದುಕೊಂಡಿದೆ.

ಭರತ ಹುಣ್ಣಿಮೆಯಂದು ಬುಧವಾರ ಬೂದಿ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಠದ ಮೇಲೆ ಬಂದರು. ಇದಾದ ನಂತರ ತೇರನ್ನು ಹಗ್ಗ ಸಹಾಯದಿಂದ ಎಳೆಯಲು‌ ಮುಂದಾದರು. ಆದರೆ, ತೇರು ಮಾತ್ರ ಸ್ಥಳದಿಂದ ಅಲ್ಲಾಡಲಿಲ್ಲ. ಎಂದಿನಂತೆ ಕ್ಷೇತ್ರದ ಮಹಿಮೆಯಂತೆ‌ ಸ್ವಾಮೀಜಿ ಮಠದ ಮೇಲೆ ಹೆಜ್ಜೆ ಹಾಕಿ‌ ನಡೆದಾಗ ಭಕ್ತರು ಎಳೆಯುವ ತೇರು ಮುಂದೆ ಸಾಗಿತು. ಬಳಿಕ ತೇರು ಮುಂಭಾಗಕ್ಕೆ ಬಂದಾಗ ಸಹ ಶ್ರೀಗಳು ಕೈ ಸನ್ನೆ ಮಾಡಿದಾಗ ತೇರಿನ ಮನೆಯೊಳಗೆ ಹೋಗಿ ಮೂಲ ಸ್ಥಾನಕ್ಕೆ ಸೇರಿತು. ಇದನ್ನು ನೋಡಲು, ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿ, ಜಾತ್ರೆಯ ವಿಶೇಷತೆ  ಕಣ್ತುಂಬಿಕೊಂಡು, ಶ್ರೀಗಳ ಆರ್ಶೀವಾದ ಪಡೆದುಕೊಂಡರು.

ಮಠದ ಮುಖ್ಯಸ್ಥ ಚನ್ನಬಸಯ್ಯ ಸ್ವಾಮಿ, ಮುಖಂಡ ಲಕ್ಕಂದಿನ್ನಿ ಶರಣಗೌಡ‌ ಪಾಟೀಲ್ ಸೇರಿದಂತೆ ವಿವಿಧ ಮಠಾಧೀಶರು, ಚುನಾಯಿತ ಪ್ರತಿನಿಧಿಗಳು, ಗ್ರಾಮದ ಹಿರಿಯರು, ಅಪಾರ ಭಕ್ತ ಗಣ ನೆರೆದಿತ್ತು.

ಇದನ್ನೂ ಓದಿ: ಬೂದಿ ಬಸವೇಶ್ವರ ಮಠದ ಜಾತ್ರೋತ್ಸವ: ಹಗ್ಗ ಇಲ್ಲದೇ ಪೀಠಾಧಿಪತಿ ಆಜ್ಞೆಯಂತೆ ಚಲಿಸುವ ಮಹಾರಥ

ABOUT THE AUTHOR

...view details