ಕರ್ನಾಟಕ

karnataka

ETV Bharat / state

ಮೈಸೂರು ದಸರಾ: ಶ್ರೇಯಾ ಘೋಷಾಲ್​ ಹಾಡಿಗೆ ಯುವಪಡೆ ಫಿದಾ, ಬಾನಂಗಳದಲ್ಲಿ ಡ್ರೋನ್ ಚಿತ್ತಾರ - Yuva Dasara Drone Show

ಭಾನುವಾರ ಯುವ ದಸರಾಗೆ ಚಾಲನೆ ದೊರಕಿದ್ದು ಉತ್ತನಹಳ್ಳಿಯಲ್ಲಿ ಯುವಹಬ್ಬವೇ ನಡೆಯಿತು. ಖ್ಯಾತ ಗಾಯಕಿಯ ಗಾನಸುಧೆಗೆ ನೆರೆದಿದ್ದ ಜನತೆ ಹುಚ್ಚೆದ್ದು ಕುಣಿದರು. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಡ್ರೋನ್ ಪ್ರದರ್ಶನ ಜನಮನ ಸೆಳೆಯಿತು.

By ETV Bharat Karnataka Team

Published : 4 hours ago

ಯುವ ದಸರಾ ಮೈಸೂರು-2024
ಮೈಸೂರು ಯುವ ದಸರಾ (ETV Bharat)

ಮೈಸೂರು:‌ಮೈಸೂರಿನ ಸುತ್ತಲಿನ ರಸ್ತೆಗಳೆಲ್ಲಾ ಉತ್ತನಹಳ್ಳಿ ಕಡೆ ಮುಖ ಮಾಡಿದ್ದವು. ಈ ನಡುವೆ ಸುರಿದ ಹದ ಮಳೆಗೆ ರಸ್ತೆಗಳೆಲ್ಲಾ ವಾಹನಗಳಿಗೆ ಕುಷನ್​ನಂತೆ ಸಹಕರಿಸುತ್ತಿದ್ದವು. ಮುಂಭಾಗದ ಸೀಟುಗಳನ್ನು ಹಿಡಿಯಲು ಧಾವಂತದಿಂದ ಹೆಜ್ಜೆ ಹಾಕುತ್ತಿರುವ ಜನ. ಮಹಿಳೆಯರು, ಮಕ್ಕಳೆನ್ನದೆ ಎಲ್ಲರಿಗೂ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುವ ಧಾವಂತ. ಅಪಾರ ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರಿಂದ ಹರಸಾಹಸ.

ಇದೆಲ್ಲ ಕಂಡುಬಂದಿದ್ದು, ಮೈಸೂರಿನ ಯುವ ದಸರಾ ಸಂಭ್ರಮದಲ್ಲಿ. ದಸರಾ ಮಹೋತ್ಸವ ಕಾರ್ಯಕ್ರಮಗಳಲ್ಲಿ ಒಂದಾದ ಯುವ ದಸರಾಗೆ ಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾನುವಾರ ರಾತ್ರಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಗಾನಸುಧೆ ಹರಿಸಿದರರು. ಮೈಸೂರಿನ ಹೊರವಲಯದ ಉತ್ತನಹಳ್ಳಿ ಬಳಿಯ ತ್ರಿಪುರಸುಂದರಿ ಜ್ವಾಲಾಮುಖಿ ದೇವಸ್ಥಾನದ ಸಮೀಪದ ಮೈದಾನದಲ್ಲಿ 6 ದಿನಗಳ ಯುವ ದಸರಾ ಆರಂಭಗೊಂಡಿತು.

ಯುವ ದಸರಾದಲ್ಲಿ ನಡೆದ ಗಾನಸುಧೆ (ETV Bharat)

ಶ್ರೇಯಾ ಘೋಷಾಲ್​ ಅವರ ಸ್ವರ ಮಾಧುರ್ಯಕ್ಕೆ ಸಂಗೀತಾಸಕ್ತರ ಮನ ತುಂಬಿದರೆ, ಯುವ ಸಮೂಹ ಹುಚ್ಚೆದ್ದು ಕುಣಿಯಿತು. ವಾಸುಕಿ ವೈಭವ್ ಅವರ ತಂಡದ ಮನಸಿಂದ ಯಾರೂನು ಕೆಟ್ಟೋವ್ರಲ್ಲ ಹಾಡು, ಮಾನ್ವಿತಾ ಹರೀಶ್ ತಂಡದ ಹಿತಲಕ ಕರೀಬ್ಯಾಡ ಮಾವ ನೃತ್ಯ ಸೊಗಸಾಗಿತ್ತು. ಮೈದಾನದಲ್ಲಿ ಕಿಕ್ಕಿರಿದು ಸೇರಿದ್ದ ಜನ ಸಮೂಹದಿಂದ ಶಿಳ್ಳೆ, ಕೇಕೆ, ಕರತಾಡನ ಮೊಳಗಿತು.

ಡ್ರೋನ್ ಪ್ರದರ್ಶನದ ಸಣ್ಣ ಝಲಕ್​. (ETV Bharat)

ಬಾನಂಗಳದಲ್ಲಿ ಚಿತ್ತಾರ ಬಿಡಿಸಿದ ಡ್ರೋನ್​: ದಸರಾ ಅಂಗವಾಗಿ ನಡೆದ ಡ್ರೋನ್​​ ಪ್ರದರ್ಶನ ಸಾಂಸ್ಕೃತಿಕ ನಗರಿ ಮೈಸೂರಿನ ಬಾನಂಗಳದಲ್ಲಿ ಚಿತ್ತಾರ ಬಿಡಿಸುವ ಮೂಲಕ ಕಣ್ಮನ ಸೆಳೆಯಿತು. ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಭಾನುವಾರ ರಾತ್ರಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ವತಿಯಿಂದ ದಸರಾ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಡ್ರೋನ್ ಪ್ರದರ್ಶನ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಬಳಿಕ ನಡೆದ ಡ್ರೋನ್ ಪ್ರದರ್ಶನದಲ್ಲಿ 1,500 ಡ್ರೋನ್​ಗಳು ಏಕಕಾಲದಲ್ಲಿ ಆಗಸದ ಎತ್ತರಕ್ಕೆ ಹಾರಿ ಹಲವು ಬಗೆಯ ಕಲಾಕೃತಿಗಳನ್ನು ರಚಿಸಿದವು.

ಡ್ರೋನ್ ಶೋ (ETV Bharat)

ಬಾಟ್ ಲ್ಯಾಬ್​​ ಡೈನಾಮಿಕ್ಸ್ ಸಂಸ್ಥೆ ಸಹಯೋಗದೊಂದಿಗೆ ಈ ಡ್ರೋನ್​ ಪ್ರದರ್ಶನ ನಡೆಯಿತು. ರಾತ್ರಿ 8:45ರ ಸುಮಾರಿಗೆ ಆರಂಭವಾದ ಡ್ರೋನ್ ಪ್ರದರ್ಶನದಲ್ಲಿ ರಾಷ್ಟ್ರಧ್ವಜ, ಚಂದ್ರಯಾನ, ವಿಶ್ವಭೂಪಟ, ಸೈನಿಕ, ಕರ್ನಾಟಕ ಭೂಪಟ, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿಮರ, ತಿಮಿಂಗಿಲ, ಚಾಮುಂಡೇಶ್ವರಿ ಸೇರಿದಂತೆ 15ಕ್ಕೂ ಹೆಚ್ಚು ವಿನ್ಯಾಸಗಳನ್ನು ರಚಿಸುವ ಮೂಲಕ ನೆರೆದಿದ್ದ ಜನರಿಗೆ ನಿರೀಕ್ಷೆಗೂ ಮೀರಿದ ಅನುಭವ ನೀಡಿತು. ಡ್ರೋನ್ ಪ್ರದರ್ಶನದ ಆಕರ್ಷಣೆ ಕಣ್ತುಂಬಿಕೊಳ್ಳುವ ಸಲುವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಕಿಕ್ಕಿರಿದು ತುಂಬಿದ್ದರು.

ಡ್ರೋನ್ ಶೋ (ETV Bharat)

ರಾಜೇಶ್ ಕೃಷ್ಣನ್​ ಹಾಡಿನ ಮೋಡಿ: ಡ್ರೋನ್ ಪ್ರದರ್ಶನ ಆರಂಭಕ್ಕೂ ಮುನ್ನ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ತಮ್ಮ ಸುಮಧುರ ಕಂಠದಿಂದಲೇ‌ ಕನ್ನಡಿಗರ ಮನಗೆದ್ದಿರುವ ರಾಜೇಶ್ ಕೃಷ್ಣನ್, "ಉಸಿರೇ ಉಸಿರೇ, ಜೊತೆಯಲಿ ಜೊತೆ ಜೊತೆಯಲಿ, ಯಾರೋ ಕಣ್ಣಲ್ಲಿ ಕಣ್ಣನಿಟ್ಟು, ಕುಚಿಕ್ಕು ಕುಚ್ಚಿಕು, ಕೂರಕ್ ಕುಕ್ಕರಹಳ್ಳಿ ಕೆರೆ" ಸೇರಿದಂತೆ ಹಲವು ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಡ್ರೋನ್ ಶೋ (ETV Bharat)

ಇದನ್ನೂ ಓದಿ:ಯುವದಸರಾಗೆ ಇಂದು ಅಶ್ವಿನಿ ಪುನೀತ್ ರಾಜ್‌ಕುಮಾರ್​ ಚಾಲನೆ, ಶ್ರೇಯಾ ಘೋಷಲ್​ ಗಾನಸುಧೆ - Yuva Dasara

ABOUT THE AUTHOR

...view details