ಕರ್ನಾಟಕ

karnataka

ETV Bharat / state

ನಾವು ನಿರ್ಮಾಣ, ನಿರ್ದೇಶನ ಮಾಡಲ್ಲ, ರಾಮನಗರ ಅಭಿವೃದ್ಧಿಗಾಗಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ: ಡಿ.ಕೆ. ಸುರೇಶ್

ರಾಮನಗರ ಜಿಲ್ಲೆಯವರಾದ ಕಾರಣ ಡಿ.ಕೆ.ಶಿವಕುಮಾರ್ ಕೈ ಬಲಪಡಿಸಿ, ರಾಮನಗರ ಜಿಲ್ಲೆ ಹಾಗೂ ಚನ್ನಪಟ್ಟಣ ತಾಲೂಕಿನ ಅಭಿವೃದ್ಧಿಗೆ ಸಂಪೂರ್ಣ ಸಹಕಾರವಿರುವುದಾಗಿ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್​ ಸೇರಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.

yogeshwar joins congress
ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ (DK Suresh X Post)

By ETV Bharat Karnataka Team

Published : 4 hours ago

ಬೆಂಗಳೂರು:''ರಾಮನಗರ ಜಿಲ್ಲೆ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುವ ಉದ್ದೇಶದಿಂದ ಸಿ.ಪಿ. ಯೋಗೇಶ್ವರ್ ಅವರು ಇಂದು ಕಾಂಗ್ರೆಸ್ ತತ್ವ, ಸಿದ್ಧಾಂತ, ನಾಯಕತ್ವ ಒಪ್ಪಿ ಸ್ವಇಚ್ಛೆಯಿಂದ ಪಕ್ಷ ಸೇರಿದ್ದಾರೆ'' ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಯೋಗೇಶ್ವರ್ ಪಕ್ಷ ಸೇರ್ಪಡೆ ಕಾರ್ಯಕ್ರಮದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ''ಪಕ್ಷಕ್ಕೆ ಯಾರೇ ಬಂದರೂ ಮುಕ್ತ ಮನಸ್ಸಿನಿಂದ ಸ್ವಾಗತಿಸುವುದಾಗಿ ಹೇಳಿದ್ದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಾಯಕತ್ವವನ್ನು ಒಪ್ಪಿ, ಅವರ ಮೇಲೆ ವಿಶ್ವಾಸವಿಟ್ಟು ಯೋಗೇಶ್ವರ್ ಸ್ವಇಚ್ಛೆಯಿಂದ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಮನೆಗೆ ಬಂದ ಅತಿಥಿಯನ್ನು ನಾವು ಸ್ವಾಗತ ಮಾಡಿದ್ದೇವೆ'' ಎಂದ ಅವರು, ಅತಿಥಿಯು ಉಪಚುನಾವಣೆ ಅಭ್ಯರ್ಥಿಯಾಗುತ್ತಾರಾ ಎಂದು ಕೇಳಿದಾಗ, ''ಅದನ್ನು ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯ ನಾಯಕರು ತೀರ್ಮಾನಿಸಲಿದ್ದಾರೆ' ಎಂದು ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಸಿ.ಪಿ. ಯೋಗೇಶ್ವರ್ ಅನಿವಾರ್ಯವಾದರೇ ಎಂಬ ಪ್ರಶ್ನೆಗೆ, ''ಕಾಂಗ್ರೆಸ್ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ತತ್ವ, ಸಿದ್ಧಾಂತ, ನಾಯಕತ್ವ ಒಪ್ಪಿ ಯಾರೇ ಬಂದರೂ ನಾವು ಮುಕ್ತವಾಗಿ ಸ್ವಾಗತ ಮಾಡುತ್ತೇವೆ. ಯೋಗೇಶ್ವರ್ ಅವರು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಆರಂಭಿಸಿದವರು'' ಎಂದು ತಿಳಿಸಿದರು.

ಯೋಗೇಶ್ವರ್ ಬುಧವಾರ ತಡರಾತ್ರಿವರೆಗೂ ಬಿಜೆಪಿ ಟಿಕೆಟ್​ಗಾಗಿ ಕಾಯುತ್ತಿದ್ದರು ಎಂದು ಕೇಳಿದಾಗ, ''ಯೋಗೇಶ್ವರ್ ಇಂದು ಬೆಳಗ್ಗೆ 8 ಗಂಟೆಗೆ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದಾಗ, ನಾನು ಅಲ್ಲಿಗೆ ಹೋಗಿ ಸ್ವಾಗತ ಮಾಡಿದೆ. ಅವರು ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಕಾರ್ಯಕರ್ತನಂತೆ ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ನಂತರ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲ ಅವರ ಗಮನಕ್ಕೆ ತಂದು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ'' ಎಂದರು.

ರಾಮನಗರ ರಾಜಕಾರಣದಿಂದ ಕುಮಾರಸ್ವಾಮಿ ಅವರನ್ನು ದೂರವಿಡುವ ಪ್ರಯತ್ನ ನಡೆಯುತ್ತಿದೆಯೇ ಎಂದು ಕೇಳಿದಾಗ, ''ನೀವು ಕುಮಾರಸ್ವಾಮಿ ಅವರನ್ನು ರಾಮನಗರದ ನಾಯಕ ಎಂದಷ್ಟೇ ಪರಿಗಣಿಸಿದರೆ ನನ್ನ ಅಭ್ಯಂತರವಿಲ್ಲ. ಮುಂದಿನ ತೀರ್ಮಾನ ನಿಮಗೆ ಬಿಡುತ್ತೇವೆ'' ಎಂದು ಉತ್ತರಿಸಿದರು.

ನೀವು ಹೇಳಿದ ಅಚ್ಚರಿ ಅಭ್ಯರ್ಥಿ ಯೋಗೇಶ್ವರ್ ಅವರೇನಾ ಎಂಬ ಪ್ರಶ್ನೆಗೆ, ''ನಾನು ಚುನಾವಣೆ ಸೋತ ಬಳಿಕ ಚನ್ನಪಟ್ಟಣದಲ್ಲಿ ಕಾರ್ಯಕರ್ತರಿಗೆ ಅಭಿನಂದನಾ ಸಭೆಯಲ್ಲೇ ಅಚ್ಚರಿ ಅಭ್ಯರ್ಥಿ ನೀಡುವುದಾಗಿ ತಿಳಿಸಿದ್ದೆ' ಎಂದರು. ಯೋಗೇಶ್ವರ್ ವಿರುದ್ಧ ನೀವು ಈ ಹಿಂದೆ ಮಾಡಿದ ಆರೋಪಗಳಿಗೆ ಬದ್ಧರಾಗಿರುತ್ತೀರಾ ಎಂದು ಕೇಳಿದಾಗ, ''ಅವರು ಉತ್ತಮ ನಿರ್ಮಾಪಕರು ನಟರು, ಸ್ನೇಹಿತರು'' ಎಂದು ಪ್ರತಿಕ್ರಿಯಿಸಿದರು.

ಮೆಗಾ ಸಿಟಿ ಕಳ್ಳ ಎಂದು ಆರೋಪ ಮಾಡಿದ್ದೀರಿ ಎಂಬ ಪ್ರಶ್ನೆಗೆ, ''ನಾನು ಅವರನ್ನು ಕಳ್ಳ ಎಂದು ಯಾವತ್ತೂ ಟೀಕೆ ಮಾಡಿಲ್ಲ. ಮಾಡಿದ್ದರೆ ನನಗೆ ನೆನಪಿಸಿ'' ಎಂದು ಹೇಳಿದರು. ಈಗ ನೀವು ನಿರ್ಮಾಪಕರಾಗುತ್ತೀರಲ್ಲವೇ ಎಂದು ಕೇಳಿದಾಗ, ''ನಾವು ಯಾವುದೇ ಪ್ರೊಡಕ್ಷನ್ ಇಟ್ಟುಕೊಂಡಿಲ್ಲ. ನಿರ್ಮಾಣ, ನಿರ್ದೇಶನ ಮಾಡುವುದಿಲ್ಲ. ಜಿಲ್ಲೆಯ ಅಭಿವೃದ್ಧಿ, ಚನ್ನಪಟ್ಟಣ ತಾಲೂಕಿನ ಜನರು, ರೈತರ ಬವಣೆ ನೀಗಿಸಲು, ಸುಭದ್ರ ಆಡಳಿತ ನೀಡಲು ಈ ನಿರ್ಣಯಕ್ಕೆ ಬಂದಿದ್ದೇವೆ'' ಎಂದರು.

''ನಾವು ಸಾಮಾನ್ಯ ಜನ, ಸಾಮಾನ್ಯ ಕಾರ್ಯಕರ್ತರು. ನಾವು ಪ್ರಧಾನಮಂತ್ರಿ ಕುಟುಂಬದವರಲ್ಲ. ಯಾರಿಗೂ ಸವಾಲೆಸೆಯಲು ಹೋಗುವುದಿಲ್ಲ. ನಾವು ಜನರ ಭಾವನೆ ಅರಿತು ಅವರ ಸಮಸ್ಯೆ ಬಗೆಹರಿಸಬೇಕಿದೆ. ಅವರ ಬದುಕು ಸುಧಾರಿಸಲು ನಮ್ಮ ಪಕ್ಷ ಬದ್ಧವಾಗಿದೆ'' ಎಂದು ಈ ನಿರ್ಣಯ ಕುಮಾರಸ್ವಾಮಿಗೆ ಡಿ.ಕೆ. ಸಹೋದರರು ಹಾಕುತ್ತಿರುವ ಸವಾಲಾ ಎಂಬ ಪ್ರಶ್ನೆಗೆ ಉತ್ತರಿಸಿದರು.

ಇದನ್ನೂ ಓದಿ:'ಚನ್ನಪಟ್ಟಣ ನನ್ನ ಕ್ಷೇತ್ರ ಎಂಬ ಪ್ರತಿಷ್ಠೆ ಬಿಟ್ಟು ಕಾಂಗ್ರೆಸ್ ಎದುರಿಸಬೇಕು': ಹೆಚ್​ಡಿಕೆಗೆ ಪ್ರೀತಂ ಗೌಡ ಟಕ್ಕರ್​

ABOUT THE AUTHOR

...view details