ಕರ್ನಾಟಕ

karnataka

ETV Bharat / state

ಯಕ್ಷಗಾನ 'ಹಾಸ್ಯರಾಜ' ಬಂಟ್ವಾಳ ಜಯರಾಮ ಆಚಾರ್ಯ ಹೃದಯಾಘಾತದಿಂದ ನಿಧನ

ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಬಂಟ್ವಾಳದ ಜಯರಾಮ ಆಚಾರ್ಯ ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.

By ETV Bharat Karnataka Team

Published : 4 hours ago

Updated : 4 hours ago

jayarama acharya
ಜಯರಾಮ ಆಚಾರ್ಯ (ETV Bharat)

ಬಂಟ್ವಾಳ (ದಕ್ಷಿಣ ಕನ್ನಡ): ಯಕ್ಷಗಾನದ 'ಹಾಸ್ಯರಾಜ' ಎಂದೇ ಹೆಸರುವಾಸಿಯಾಗಿದ್ದ, ಶುದ್ಧ ಹಾಸ್ಯದ ಮೂಲಕ ಪ್ರೇಕ್ಷಕರ ಮನರಂಜಿಸುತ್ತಿದ್ದ ಬಂಟ್ವಾಳ ಜಯರಾಮ ಆಚಾರ್ಯ (67) ಅವರು ಸೋಮವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ತೆರಳಿದ್ದ ಅವರು ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

ಯಕ್ಷಗಾನ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡವು ಇಂದಿನಿಂದ ಬೆಂಗಳೂರಿನಲ್ಲಿ ನಡೆಸಿಕೊಡಬೇಕಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಯರಾಮ ಆಚಾರ್ಯರು ತೆರಳಿದ್ದರು. ಅದಕ್ಕಾಗಿ ಭಾನುವಾರ ಬೆಳಗ್ಗೆಯೇ ಬೆಂಗಳೂರಿನ ಆರ್.ಕೆ.ಭಟ್ಟರ ಮನೆಯಲ್ಲಿ ಉಳಿದುಕೊಂಡಿದ್ದ ಅವರಿಗೆ ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ತೀವ್ರತರವಾದ ಹೃದಯನೋವು ಕಾಣಿಸಿಕೊಂಡಿದೆ. ಅವರೊಂದಿಗಿದ್ದ ಇತರ ಕಲಾವಿದರು ತಕ್ಷಣ ಆಸ್ಪತ್ರೆಗೆ ಸೇರಿಸಿದರೂ, ಅವರು ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ.

ಜಯರಾಮ ಆಚಾರ್ಯ (ETV Bharat)

ಬೆಂಗಳೂರಿನ ಆಸ್ಪತ್ರೆಯಲ್ಲಿರುವ ಬಂಟ್ವಾಳ ಜಯರಾಮ ಆಚಾರ್ಯರ ಪಾರ್ಥಿವ ಶರೀರವನ್ನು ಆರ್.ಕೆ.ಭಟ್ಟರ ಮನೆಗೆ ತಂದು ಅಂತಿಮ ದರ್ಶನಕ್ಕಿರಿಸಿ, ಬಳಿಕ ಆ್ಯಂಬುಲೆನ್ಸ್ ಮೂಲಕ ಊರಿಗೆ ಕರೆತರುವ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಬಂಟ್ವಾಳ ಬೈಪಾಸ್‌ನಲ್ಲಿರುವ ಮನೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಬಳಿಕ ಅಂತ್ಯಕ್ರಿಯೆ ನಡೆಯಲಿದೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಜಯರಾಮ ಆಚಾರ್ಯರು ಬಂಟ್ವಾಳದಲ್ಲಿ 1957, ಅಕ್ಟೋಬರ್ 12ರಂದು ಬಂಟ್ವಾಳ ಗಣಪತಿ ಆಚಾರ್ಯ ಹಾಗೂ ಭವಾನಿ ಅವರ ಪುತ್ರರಾಗಿ ಜನಿಸಿದ್ದರು. ಬಂಟ್ವಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಬೋರ್ಡ್ ಶಾಲೆ) ವಿದ್ಯಾಭ್ಯಾಸ ಮುಗಿಸಿ, ತಂದೆಯವರ ಪ್ರೇರಣೆಯಿಂದ ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ಹಲವಾರು ಕಡೆಗಳಲ್ಲಿ ವೇಷ ಮಾಡಿದ್ದರು. ಸರಳ, ಸಜ್ಜನ, ವಿನಯವಂತ ಹಾಸ್ಯಗಾರರಾದ ಆಚಾರ್ಯರು ಪ್ರಸ್ತುತ ಹನುಮಗಿರಿ ಮೇಳದ ಕಲಾವಿದರಾಗಿದ್ದರು.

ಜಯರಾಮ ಆಚಾರ್ಯ (ETV Bharat)

50 ವರ್ಷಗಳ ಕಲಾ ಸೇವೆ: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ 'ಲಲಿತ ಕಲಾ ಕೇಂದ್ರ'ಕ್ಕೆ ಸೇರಿ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು. ಅದಾದ ಬಳಿಕ ಕಟೀಲು ಮೇಳದಲ್ಲಿ 4 ವರ್ಷ, ಪುತ್ತೂರು ಮೇಳ, ಕದ್ರಿ ಮೇಳ ಹಾಗೂ ಕುಂಬಳೆ ಮೇಳಗಳ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಕದ್ರಿ ಮೇಳದ ತುಳುಪ್ರಸಂಗದಲ್ಲಿ ವೈವಿಧ್ಯಮಯ ಹಾಸ್ಯವನ್ನು ಮಾಡಿ ಪ್ರೇಕ್ಷಕರನ್ನು ರಂಜಿಸಿದರು. ಮತ್ತೆ ಕಟೀಲು ಮೇಳ, ಎಡನೀರು ಮೇಳ, ಹೊಸನಗರ ಮೇಳದಲ್ಲಿ 9 ವರ್ಷ, ಬಳಿಕ ಹನುಮಗಿರಿ ಮೇಳ ಹೀಗೆ ಸುಮಾರು 50 ವರ್ಷಗಳ ಕಾಲ ಯಕ್ಷಗಾನದ ಹಾಸ್ಯಗಾರ ಪಾತ್ರವಲ್ಲದೇ, ಅಗತ್ಯವಿದ್ದಾಗ ಇತರ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಸದಾ ಅಧ್ಯಯನಶೀಲನಾಗಿ, ಕಲಾಸೇವೆಯನ್ನು ಮಾಡುತ್ತಾ ಹಾಸ್ಯಗಾರರಾಗಿ ರಂಜಿಸಿದವರು.

ಬಂಟ್ವಾಳ ಶಾಸಕರಿಂದ ಸಂತಾಪ:ಜಯರಾಮ ಆಚಾರ್ಯ ಅವರ ನಿಧನಕ್ಕೆ ಬಂಟ್ವಾಳ ಶಾಸಕ ರಾಜೇಶ್​ ನಾಯ್ಕ್ ಸಂತಾಪ ವ್ಯಕ್ತಪಡಿಸಿದ್ದಾರೆ. ''ತೆಂಕು ತಿಟ್ಟಿನ ಹಿರಿಯ ಹಾಸ್ಯ ಕಲಾವಿದ ಶ್ರೀ ಜಯರಾಮ ಆಚಾರ್ಯ ಬಂಟ್ವಾಳ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರ ಅಕಾಲಿಕ ಮರಣ ವಿಷಾದನೀಯ ಸಂಗತಿ. ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಲಿ. ಹಾಗೂ ಕುಟುಂಬ ವರ್ಗಕ್ಕೆ, ಅಭಿಮಾನಿ‌ ಬಳಗಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ. ಓಂ ಶಾಂತಿಃ'' ಎಂದು ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ:ಸುದೀಪ್ ತಾಯಿ ಅಂತಿಮ ದರ್ಶನ ಪಡೆದ ಚಿತ್ರರಂಗದ ತಾರೆಯರು, ರಾಜಕೀಯ ಗಣ್ಯರು

Last Updated : 4 hours ago

ABOUT THE AUTHOR

...view details