ಕರ್ನಾಟಕ

karnataka

ಬೆಂಗಳೂರು: ಮಾಲೀಕರ ಕಣ್ತಪ್ಪಿಸಿ ವಜ್ರ, ಚಿನ್ನ, ನಗದು ಕದ್ದ ಕೆಲಸದಾಕೆ ಸೆರೆ - Theft Case

By ETV Bharat Karnataka Team

Published : May 3, 2024, 3:27 PM IST

Updated : May 3, 2024, 8:11 PM IST

ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ್ದ ಮಹಿಳೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

THEFT CASE
ಮನೆ ಕೆಲಸದವಳ ಬಂಧನ (Etv Bharat)

ಮನೆಗಳ್ಳತನ ಪ್ರಕರಣ (Etv Bharat)

ಬೆಂಗಳೂರು:ಕೆಲಸ ಮಾಡುತ್ತಿದ್ದ ಮನೆಯ ಮಾಲೀಕರ ಕಣ್ತಪ್ಪಿಸಿ ಕಳ್ಳತನ ಮಾಡಿದ್ದ ಕೆಲಸದಾಕೆಯನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಮೂಲದ ಮಂಜುಳಾ ಬಂಧಿತ ಆರೋಪಿ. ಜೆ.ಪಿ.ನಗರ 1ನೇ ಹಂತದಲ್ಲಿನ ಅಪಾರ್ಟ್​​ಮೆಂಟ್​​ವೊಂದರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ವಜ್ರ, ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದಳು.

ಮನೆ ಮಾಲೀಕ ದಂಪತಿ ಹಿರಿಯ ನಾಗರಿಕರಾಗಿದ್ದು, ಅವರ ಇಬ್ಬರೂ ಮಕ್ಕಳು ವಿದೇಶದಲ್ಲಿದ್ದಾರೆ. ಅದೇ ಮನೆಯಲ್ಲಿ 8 ವರ್ಷಗಳಿಂದ ಮಂಜುಳಾ ಮನೆಗೆಲಸ ಮಾಡಿಕೊಂಡಿದ್ದಳು. ಮಾರ್ಚ್ 27ರಂದು ಮೊಮ್ಮಗನ ನಾಮಕರಣ ಮುಗಿಸಿದ್ದ ದಂಪತಿ, ಬಳಿಕ ವಜ್ರ, ಚಿನ್ನದ ಒಡವೆಗಳು ಹಾಗೂ ನಗದನ್ನು ರೂಮ್‌ನಲ್ಲಿರುವ ಬೀರುವಿನಲ್ಲಿಟ್ಟಿದ್ದರು.

ಏಪ್ರಿಲ್ 4ರಂದು ಗಮನಿಸಿದಾಗ ಬೀರುವಿನಲ್ಲಿಟ್ಟಿದ್ದ ವಸ್ತುಗಳಲ್ಲಿ ವ್ಯತ್ಯಾಸವಾಗಿರುವುದು ಕಂಡು ಬಂದಿತ್ತು. ಆ ಅವಧಿಯಲ್ಲಿ ಕೆಲಸದವಳನ್ನು ಹೊರತುಪಡಿಸಿದರೆ ಮನೆಗೆ ಬೇರೆ ಯಾರೂ ಬಂದಿರಲಿಲ್ಲ. ಹೀಗಾಗಿ ಅನುಮಾನಗೊಂಡ ದಂಪತಿ ಜೆ.ಪಿ.ನಗರ ಪೊಲೀಸ್​​ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಕೆಲಸದಾಕೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನದ ವಿಚಾರ ಬಯಲಾಗಿದೆ. ಬಂಧಿತಳು ಚಿನ್ನದ ಬಳೆಗಳನ್ನು ತನ್ನ ಗಂಡನ ಮುಖಾಂತರ ಪರಿಚಯವಿರುವ ಓರ್ವ ವ್ಯಕ್ತಿಗೆ ಮಾರಾಟ ಮಾಡಿದ್ದಳು. ಅಲ್ಲದೆ, ಚಾಮರಾಜನಗರ ಜಿಲ್ಲೆಯಲ್ಲಿರುವ ತನ್ನ ತಾಯಿಯ ಮನೆಯಲ್ಲಿ ವಜ್ರ ಮತ್ತು ಚಿನ್ನಾಭರಣ ಇಟ್ಟಿದ್ದಳು. ಒಟ್ಟಾರೆ, 363 ಗ್ರಾಂ. ಚಿನ್ನ, 176 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು ಹಾಗೂ 1 ಲಕ್ಷ ನಗದುಸಹಿತ ಒಟ್ಟು 35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರತ್ಯೇಕ ಪ್ರಕರಣ-ನಕಲಿ ಕೀ ಬಳಸಿ ಕಳ್ಳತನ:ಪರಿಚಿತ ಮಹಿಳೆಯನ್ನು ಕೆಲಸದ ನಿಮಿತ್ತ ತಮ್ಮ ಮನೆಗೆ ಕರೆಸಿಕೊಂಡು, ಅದೇ ಸಂದರ್ಭದಲ್ಲಿ ಆಕೆಯ ಮನೆಯಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಕೆಂಪೇಗೌಡನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 29ರಂದು ಕೆಂಪೇಗೌಡನಗರದ ಎಂಜಿಕೆ ಮೂರ್ತಿ ಲೇಔಟಿನಲ್ಲಿರುವ ಉಮಾ ಎಂಬ ಮಹಿಳೆಯ ಮನೆಯಲ್ಲಿ ಚಿನ್ನಾಭರಣ, ಹಣ ಕಳ್ಳತನ ಮಾಡಿದ್ದ ಕಿರಣ್ (33), ಆನಂದ್ (34) ಹಾಗೂ ನಾರಾಯಣ್ (43) ಬಂಧಿತ ಆರೋಪಿಗಳು.

ಕಳ್ಳತನ ಆರೋಪಿಗಳು (Etv Bharat)

ಮೊಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಉಮಾರ ಮಗಳು ನೇತ್ರಾ ಬ್ಯೂಟೀಷಿಯನ್ ಕೆಲಸ ಮಾಡುತ್ತಿದ್ದರು. ಆರೋಪಿಗಳ ಪೈಕಿ ಕಿರನ್​​ಗೆ ನೇತ್ರಾಳ ಪರಿಚಯವಿತ್ತು. ನೇತ್ರಾಳ ಮನೆಯಲ್ಲಿ ಹಣ ಚಿನ್ನಾಭರಣ ಕಳ್ಳತನಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದ ಕಿರಣ್, ಹಲವು ದಿನಗಳ ಮುಂಚೆಯೇ ಪಿತೂರಿ ನಡೆಸಿ, ಮೇಕಪ್ ಮಾಡಿಸುವ ಸಲುವಾಗಿ ನೇತ್ರಾಳನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ನಂತರ ಆಕೆಯು ಮೇಕಪ್ ಮಾಡುವ ಸಮಯದಲ್ಲಿ ಗಮನವನ್ನು ಬೇರೆಡೆಗೆ ಸೆಳೆದಿದ್ದ ಆರೋಪಿಗಳಾದ ಆನಂದ್ ಹಾಗೂ ನಾರಾಯಣ್ ಆಕೆಯ ಪರ್ಸಿನಲ್ಲಿದ್ದ ಮನೆಯ ಬೀಗದ ಕೈಯನ್ನು ಕಳವು ಮಾಡಿದ್ದರು.

ಬಳಿಕ ಅದರಿಂದ ನಕಲಿ ಕೀ ಮಾಡಿಸಿಕೊಂಡು, ಅಸಲಿ ಕೀಯನ್ನು ಪರ್ಸಿನಲ್ಲೇ ಇಟ್ಟಿದ್ದರು. ಮಾರ್ಚ್ 29ರಂದು ಬ್ಯೂಟಿಷಿಯನ್ ಕೆಲಸದ ಸಲುವಾಗಿ ನೇತ್ರಾ ತೆರಳಿದ್ದಾಗ ನಕಲಿ ಕೀ ಬಳಸಿ ಮನೆಗೆ ನುಗ್ಗಿದ್ದ ಆರೋಪಿಗಳು ಚಿನ್ನಾಭರಣ, ನಗದು ಕದ್ದು ಪರಾರಿಯಾಗಿದ್ದರು. ಅದೇ ದಿನ ಮಧ್ಯಾಹ್ನ ನೇತ್ರಾಳ ತಾಯಿ ಉಮಾ ಮನೆಗೆ ಬಂದಾಗ ಮನೆಯಲ್ಲಿ ಕಳ್ಳತನವಾಗಿರುವುದು ತಿಳಿದಿತ್ತು. ಬಳಿಕ ಕೆಂಪೇಗೌಡನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಚಿನ್ನಾಭರಣ,‌ ನಗದುಸಹಿತ ಒಟ್ಟು ಮೌಲ್ಯ 7.70 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿಗೆ ಹೋದರೂ ಸಂಬಳ ಕಮ್ಮಿ ಎಂದು ಹೆಂಡ್ತಿಯ ಕಿರಿಕ್: ಮನೆಗಳ್ಳತನಕ್ಕಿಳಿದು ಪೊಲೀಸರ ಅತಿಥಿಯಾದ ಗಂಡ - CRIME NEWS

Last Updated : May 3, 2024, 8:11 PM IST

ABOUT THE AUTHOR

...view details