ಚಿಕ್ಕೋಡಿ (ಬೆಳಗಾವಿ): "ಕೆಲವು ಸಚಿವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಪಕ್ಷದ ವರಿಷ್ಠರಿಗೆ ದೂರು ನೀಡಿರುವ ವಿಚಾರ ನನಗೆ ಗೊತ್ತಿಲ್ಲ. ನಾವು ಅವರ ವಿಚಾರದಲ್ಲಿ ಯಾವುದೇ ದೂರು ಕೊಟ್ಟಿಲ್ಲ, ಇದರ ಬಗ್ಗೆ ದೂರು ಕೊಟ್ಟವರನ್ನೇ ಕೇಳಬೇಕು. ಸುರ್ಜೇವಾಲ ಅವರೊಂದಿಗೆ ನಮ್ಮ ಸಂಬಂಧ ಚೆನ್ನಾಗಿದೆ" ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಉದ್ಯಾನಕಾಶಿಯಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎಸ್. ಎನ್. ಬೋಸರಾಜು ಅವರೊಂದಿಗೆ 15 ಕೋಟಿ ರೂ. ವೆಚ್ಚದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಮಿನಿ ಕಾರ್ಯಾಲಯ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರಿಗೆ ಗೌರವ ಕೊಡದವರು ಅವರ ಹೆಸರು ಇಟ್ಟುಕೊಂಡು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂಬ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕಿಯಿಸಿ, "ಇತ್ತೀಚಿಗೆ ಕೇಂದ್ರ ಸಚಿವ ಅಮಿತ್ ಶಾ ಅಂಬೇಡ್ಕರ್ ಬಗ್ಗೆ ಹೇಳಿಕೆ ನೀಡಿದ್ದರು. ಹೀಗಾಗಿ ಯತ್ನಾಳ್ಗೆ ಈ ಬಗ್ಗೆ ಮತನಾಡುವ ನೈತಿಕತೆ ಇಲ್ಲ" ಎಂದರು.
ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ನಿಮ್ಮ ನಡುವೆ ಶೀತಲಸಮರ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, "ಮುಸುಕಿನ ಗುದ್ದಾಟ, ಕೋಲ್ಡ್ ವಾರ್ ಎಲ್ಲಿ ನಡೆಯುತ್ತಿದೆ, ನನಗೆ ಗೊತ್ತಿಲ್ಲ" ಎಂದು ಹೇಳಿದರು.
ಇದನ್ನೂ ಓದಿ:ಮುಂದಿನ ದಿನಗಳಲ್ಲಿ ಬೆಳಗಾವಿಗೆ ವಿಶೇಷ ಕೊಡುಗೆ ಘೋಷಣೆ: ಡಿಸಿಎಂ ಡಿ.ಕೆ.ಶಿವಕುಮಾರ್