ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಕಸದಿಂದ ಕರೆಂಟ್ ಉತ್ಪಾದನೆ: ಶೀಘ್ರದಲ್ಲೇ ವಿದ್ಯುತ್ ಸ್ಥಾವರಕ್ಕೆ ಚಾಲನೆ

ಬೆಂಗಳೂರಲ್ಲಿ ಕಸದಿಂದ ವಿದ್ಯುತ್ ಉತ್ಪಾದಿಸುವ ಪ್ರಾಯೋಗಿಕ ಯೋಜನೆಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ.

By ETV Bharat Karnataka Team

Published : 4 hours ago

BBMP
ಕಸದಿಂದ ಕರೆಂಟ್ (ETV Bharat)

ಬೆಂಗಳೂರು:ಕಸದಿಂದ ವಿದ್ಯುತ್ ಉತ್ಪಾದಿಸುವ ಬಿಬಿಎಂಪಿ ಹಾಗೂ ಕೆಪಿಸಿಎಲ್‌ನ ಪ್ರಾಯೋಗಿಕ ಯೋಜನೆ ಬಹುತೇಕ ಯಶಸ್ವಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಈ ಘಟಕಕ್ಕೆ ಚಾಲನೆ ಸಿಗಲಿದೆ.

ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸುವುದರ ಜೊತೆಗೆ ಹೆಚ್ಚುವರಿ ವಿದ್ಯುತ್ ಉತ್ಪಾದಿಸುವ ಉದ್ದೇಶದಿಂದ ಘನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಸಾಹಸಕ್ಕೆ ಕೈಹಾಕಲಾಗಿತ್ತು. ಇದೀಗ ಈ ಸಾಹಸದಲ್ಲಿ ಯಶಸ್ವಿಯಾಗಿದ್ದು, ಘಟಕವನ್ನು ಉದ್ಘಾಟಿಸಲು ಎರಡೂ ಸಂಸ್ಥೆಗಳು ಮುಂದಾಗಿವೆ.

ನಿತ್ಯ 11.6 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ: ಸದ್ಯ ಘಟಕದಲ್ಲಿ ನಿತ್ಯ 11.6 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಇದರಿಂದಾಗಿ ತ್ಯಾಜ್ಯ ಸಂಸ್ಕರಣೆಯ ಸಮಸ್ಯೆಗೆ ಪರಿಹಾರ ಸಿಗುವ ಜೊತೆಗೆ ಹೆಚ್ಚುವರಿ ವಿದ್ಯುತ್ ಲಭಿಸಲಿದೆ. ಈ ಹಿಂದೆ ಗೌರವ್ ಗುಪ್ತಾ ಬಿಬಿಎಂಪಿಯ ವಿಶೇಷ ಆಯುಕ್ತರಾಗಿದ್ದಾಗ ಈ ಚಿಂತನೆ ಪ್ರಾರಂಭವಾಗಿತ್ತು. ಆದರೆ ಆಗ ಹಲವು ಖಾಸಗಿ ಕಂಪನಿಗಳು ಹಿಂದೇಟು ಹಾಕಿದ್ದವು. ಬಳಿಕ ಕೆಪಿಸಿಎಲ್ ಸಹಯೋಗದಲ್ಲಿ ಈಗ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಈ ಹಿಂದೆ ಟೆಂಡರ್ ಕರೆದಾಗ ಎಂಟು ಕಂಪನಿಗಳು ಆಸಕ್ತಿ ತೋರಿದರೂ ಯಾರೂ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಲಿಲ್ಲ. ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಸ್ಥಾವರವು ಸಂಪೂರ್ಣವಾಗಿ ತ್ಯಾಜ್ಯವನ್ನು ಬಳಸಿಕೊಂಡು ಕಾರ್ಯನಿರ್ವಹಿಸಲಿದ್ದು, ನಗರದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಲಾಗುತ್ತದೆ.

ನೀಗಿದ ತ್ಯಾಜ್ಯ ವಿಲೇವಾರಿ ಸಮಸ್ಯೆ: ಸದ್ಯ ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳ ವಿಲೇವಾರಿಯೇ ಪಾಲಿಕೆಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ನಗರಾದ್ಯಂತ ದೊರೆಯುವ ಘನತ್ಯಾಜ್ಯಗಳನ್ನು ವಿಲೇವಾರಿ ಮಾಡುವುದೇ ದೊಡ್ಡ ತಲೆನೋವಾಗಿತ್ತು. ಸದ್ಯ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಯ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ತ್ಯಾಜ್ಯ ನಿರ್ವಹಣೆಯ ಭಾರ ಕಡಿಮೆಯಾಗಲಿದೆ.

300 ಕೋಟಿ ರೂ ವೆಚ್ಚದ ಸ್ಥಾವರ: ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ವಿದ್ಯುತ್ ಸ್ಥಾವರವನ್ನು ಕೆಪಿಸಿಎಲ್ ನಿರ್ಮಿಸಿದ್ದರೆ, ಸಂಸ್ಕರಿಸಿದ ಘನ ತ್ಯಾಜ್ಯವನ್ನು ನೀಡುವ ಜವಾಬ್ದಾರಿಯನ್ನು ಬಿಬಿಎಂಪಿ ಹೊತ್ತಿದೆ. ಈ ಸ್ಥಾವರದಿಂದ ನಿತ್ಯ 600 ಟನ್ ಸಂಸ್ಕರಿಸಿದ ತ್ಯಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವಿರುವುದರಿಂದ, ಘಟಕಕ್ಕೆ ಬೇಕಿರುವ ತ್ಯಾಜ್ಯವನ್ನು ಪಾಲಿಕೆ ಒದಗಿಸಲಿದೆ.

ಬಿಡದಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರವೇ ಉದ್ಘಾಟಿಸಲಿದ್ದಾರೆ. ಇದರಿಂದ ವಿದ್ಯುತ್ ಸಮಸ್ಯೆ ಮಾತ್ರವಲ್ಲ, ತ್ಯಾಜ್ಯ ವಿಲೇವಾರಿ ಸಮಸ್ಯೆಯೂ ಕಡಿಮೆಯಾಗಲಿದೆ - ಇಂಧನ ಸಚಿವ ಕೆ.ಜೆ.ಜಾರ್ಜ್

ಇದನ್ನೂ ಓದಿ:ಅರಬ್ಬಿ ಸಮುದ್ರದಲ್ಲಿ ಚಂಡಮಾರುತ: ರಾಜ್ಯದ 12 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

ABOUT THE AUTHOR

...view details