ಕರ್ನಾಟಕ

karnataka

ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು IT ಉದ್ಯೋಗಿಗಳು ಸಾವು - BBMP Garbage Lorry Accident

By ETV Bharat Karnataka Team

Published : Jul 29, 2024, 8:57 AM IST

Updated : Jul 29, 2024, 9:09 AM IST

ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಮೃತಪಟ್ಟ ಘಟನೆ ಬೆಂಗಳೂರಲ್ಲಿ ಭಾನುವಾರ ರಾತ್ರಿ ನಡೆದಿದೆ.

ಅಪಘಾತ
ಶಿಲ್ಪಾ‌ (27), ಪ್ರಶಾಂತ್ (25) (ETV Bharat)

ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಹರಿದು ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ಭಾನುವಾರ ರಾತ್ರಿ ಕೆ.ಆರ್.ಸರ್ಕಲ್​ ಬಳಿ ನಡೆಯಿತು. ಮೃತರನ್ನು ಬಾಣಸವಾಡಿ ನಿವಾಸಿ ಪ್ರಶಾಂತ್ (25) ಹಾಗೂ ಆಂಧ್ರಪ್ರದೇಶ ಮೂಲದ ಶಿಲ್ಪಾ‌ (27) ಎಂದು ಗುರುತಿಸಲಾಗಿದೆ. ಐಟಿಪಿಎಲ್​​ನ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಹಾಗೂ ಶಿಲ್ಪಾ ನಿನ್ನೆ ಊಟಕ್ಕೆಂದು ಹೊರಗಡೆ ಬಂದಿದ್ದಾಗ ಅವಘಡ ಸಂಭವಿಸಿದೆ.

ಅಪಘಾತ ನಡೆದಿದ್ದು ಹೇಗೆ?: ರಾತ್ರಿ 8:45ರ ಸುಮಾರಿಗೆ ಮೆಜೆಸ್ಟಿಕ್‌ನಿಂದ‌ ಕೆ.ಆರ್.ವೃತ್ತದ ಕಡೆ ಬೈಕ್‌ನಲ್ಲಿ ಬರುತ್ತಿದ್ದಾಗ ಸಿಐಡಿ ಜಂಕ್ಷನ್‌ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಲಾರಿ ಇಬ್ಬರ ಮೈಮೇಲೂ ಹರಿದಿದೆ. ಗಾಯಾಳುಗಳನ್ನು ಸಮೀಪದ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆಯೇ ಇಬ್ಬರೂ ಮೃತಪಟ್ಟಿದ್ದಾರೆ.

ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹಲಸೂರು ಗೇಟ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಿಬಿಎಂಪಿ ಕಸದ ಲಾರಿ (ETV Bharat)

ಇಬ್ಬರೂ IT ಉದ್ಯೋಗಿಗಳು:ಪ್ರಶಾಂತ್ ಮತ್ತು ಶಿಲ್ಪಾ ಟೆಕ್ಕಿಗಳಾಗಿದ್ದು, ಟಿಸಿಎಸ್​ನಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಜೆ ಹಿನ್ನೆಲೆಯಲ್ಲಿ ಊಟಕ್ಕೆಂದು ಹೊರಗಡೆ ಬಂದಿದ್ದರು. ಈ ವೇಳೆ ಯಮನಂತೆ ಕಸದ ಲಾರಿ ಅಡ್ಡ ಬಂದಿದೆ. ಮೃತರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬಿಬಿಎಂಪಿ ಕಸದ ಲಾರಿ ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.

ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ: ಬಿಬಿಎಂಪಿ ಕಸದ ಲಾರಿ ಅಪಘಾತದಲ್ಲಿ ನಿನ್ನೆ ರಾತ್ರಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಬಿಬಿಎಂಪಿ ಮೃತರ ಕುಟುಂಬಗಳಿಗೆ ನೆರವು ಕೊಡಲಿದೆ. ಇದು ದುರಾದೃಷ್ಟಕರ ಘಟನೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.

ಇದನ್ನೂ ಓದಿ:ಚಾಮರಾಜನಗರ: ಮನೆಗಳ್ಳರಿಗೆ ಸಿಂಹಸ್ವಪ್ನವಾಗಿದ್ದ ಬಾಹು ನಿಧನ, ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ - Police dog Bahu dies

Last Updated : Jul 29, 2024, 9:09 AM IST

ABOUT THE AUTHOR

...view details