ಕರ್ನಾಟಕ

karnataka

ETV Bharat / state

ತಜ್ಞರ ತಂಡದ ವಿರುದ್ಧ ಸಿಡಿದೆದ್ದ ರೈತರು; ಕೆಆರ್‌ಎಸ್‌ ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಸ್ಫೋಟ​​ ತಾತ್ಕಾಲಿಕ ಸ್ಥಗಿತ - Mining

ಕನ್ನಂಬಾಡಿ ಅಣೆಕಟ್ಟೆ ಸಮೀಪ ಪರೀಕ್ಷಾರ್ಥ ಸ್ಫೋಟಕ್ಕೆ ರೈತರು ಸೇರಿದಂತೆ ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸ್ಫೋಟ ಕೆಲಸ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.

ರೈತರ ಗೋ ಬ್ಯಾಕ್​ ಚಳುವಳಿ
ರೈತರ ಗೋ ಬ್ಯಾಕ್​ ಚಳುವಳಿ

By ETV Bharat Karnataka Team

Published : Mar 6, 2024, 12:50 PM IST

Updated : Mar 6, 2024, 1:30 PM IST

ಕೆಆರ್‌ಎಸ್‌ ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಸ್ಫೋಟ​​ ತಾತ್ಕಾಲಿಕ ಸ್ಥಗಿತ

ಮಂಡ್ಯ:ರೈತರ ಜೀವನಾಡಿ ಕನ್ನಂಬಾಡಿ ಬಳಿಯ ಪರೀಕ್ಷಾರ್ಥ ಸ್ಫೋಟ ವಿಚಾರ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ನಡುವೆಯೂ ಸರ್ಕಾರ ಮತ್ತು ಜಿಲ್ಲಾಡಳಿತ ಪರೀಕ್ಷಾರ್ಥ ಸ್ಫೋಟ ನಡೆಸಲು ಸಜ್ಜಾಗಿತ್ತು. ಸೋಮವಾರ ಜಾರ್ಖಂಡ್​ನಿಂದ ಬಂದಿದ್ದ ತಜ್ಞರ ತಂಡ ಮಂಗಳವಾರ ಪರೀಕ್ಷಾರ್ಥ ಸ್ಫೋಟಕ್ಕಾಗಿ ಸ್ಥಳ ಪರಿಶೀಲನೆಗೆ ತಯಾರಾಗಿತ್ತು. ಆದರೆ ಇದಕ್ಕೆ ರೈತರು, ಹೋರಾಟಗಾರರು ಮತ್ತು ಬಿಜೆಪಿ ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸಿದರು. ಈ ಹೋರಾಟಕ್ಕೆ ತಾತ್ಕಾಲಿಕ ಫಲ ಸಿಕ್ಕಿದೆ.

ಪ್ರಸಿದ್ದ ಪ್ರವಾಸಿ ತಾಣ ಹಾಗು ಕನ್ನಡಿಗರ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟೆ. ಈ ಅಣೆಕಟ್ಟೆಯನ್ನು ನಂಬಿಕೊಂಡು ಲಕ್ಷಾಂತರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಅಣೆಕಟ್ಟೆ ಸುತ್ತಮುತ್ತ ಹಲವು ಕಡೆ ಕಲ್ಲು ಗಣಿಗಾರಿಕೆ ನಡೆಯುತ್ತಲೇ ಇತ್ತು. ಗಣಿಗಾರಿಕೆಯಿಂದ ಅಣೆಕಟ್ಟೆಗೆ ತೊಂದರೆಯಾಗುತ್ತದೆ ಎಂದು ಹಲವಾರು ಹೋರಾಟಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಗಣಿ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು. ಹಾಗಾಗಿ ತಜ್ಞರು ಸ್ಥಳ ಪರಿಶೀಲಿಸುವಂತೆ ಸೂಚಿಸಿ ಕೋರ್ಟ್ ಆದೇಶ ಹೊರಡಿಸಿತ್ತು.

ಸೋಮವಾರ ರಾತ್ರಿ ಬೆಂಗಳೂರಿಗೆ ಬಂದಿಳಿದ ತಜ್ಞರ ತಂಡ, ರಾತ್ರಿ 9 ಗಂಟೆಗೆ ಅಣೆಕಟ್ಟು ಬಳಿಗೆ ಬಂದಿದೆ. ಮಂಗಳವಾರ ಬೆಳಗ್ಗೆ ಈ ತಂಡ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸಭೆ ಸೇರಿದ್ದಾರೆ. ಇತ್ತ ಟ್ರಯಲ್​ ಬ್ಲಾಸ್ಟ್​ ವಿರೋಧಿಸಿ ರೈತರು, ರೈತ ಸಂಘ ಹಾಗೂ ಬಿಜೆಪಿ ಕಾರ್ಯಕರ್ತರು ಬೃಂದಾವನದ ಉತ್ತರ ಗೇಟ್ ಬಳಿ ಗೋ ಬ್ಯಾಕ್ ಚಳುವಳಿ ನಡೆಸಿದರು. ರಸ್ತೆಯಲ್ಲೇ ಕುಳಿತು ರೈತ ಸಂಘದ ಕಾರ್ಯಕರ್ತರು ಪ್ರತಿಭಟಿಸಿದರೆ, ಒಳ ನುಗ್ಗಲೆತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು. ನಂತರ ರೈತ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಸಭೆಗೆ ಆಹ್ವಾನಿಸಲಾಯಿತು.

ವಿಪರ್ಯಾಸವೆಂದರೆ, ಪರೀಕ್ಷಾರ್ಥ ಸ್ಫೋಟಕ್ಕೆ ಕೋರ್ಟ್ ಅನುಮತಿಯನ್ನೇ ಕೊಟ್ಟಿಲ್ಲ. ಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಗಿದೆ. ಈ ಸಂಗತಿಯನ್ನು ಅಧಿಕಾರಿಗಳು ಹಾಗೂ ತಜ್ಞರ ತಂಡಕ್ಕೆ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇದ್ರ ಮನದಟ್ಟು ಮಾಡಿಕೊಟ್ಟಿದ್ದಾರೆ. ಇದನ್ನರಿತ ಸಭೆ ಟ್ರಯಲ್ ಬ್ಲಾಸ್ಟ್‌ನಿಂದ ಹಿಂದೆ ಸರಿಯಿತು. ಟ್ರಯಲ್​ ಬ್ಲಾಸ್ಟ್​ ಮುಂದೂಡಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್ ಪಡೆದರು.

ಈಗಾಗಲೇ ಅಣೆಕಟ್ಟೆ ಉಳಿವಿಗಾಗಿ ಹಲವಾರು ಸಂಘಟನೆಗಳು ಹೋರಾಟ ನಡೆಸುತ್ತಿವೆ. ಇನ್ನೊಂದೆಡೆ ಗಣಿ ಮಾಲೀಕರು ಕೂಡ ಹೋರಾಟಕ್ಕಿಳಿದಿದ್ದಾರೆ. ಸರ್ಕಾರ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಕೆಆರ್​ಎಸ್​ ಡ್ಯಾಂ ಸುತ್ತಮುತ್ತ ಗಣಿಗಾರಿಕೆ ನಿಷೇಧ: ಹೈಕೋರ್ಟ್ ಆದೇಶ ಸ್ವಾಗತಿಸಿದ ಸಂಸದೆ ಸುಮಲತಾ, ಹೋರಾಟಗಾರರು

Last Updated : Mar 6, 2024, 1:30 PM IST

ABOUT THE AUTHOR

...view details