ಕರ್ನಾಟಕ

karnataka

ಅಪಘಾತ: ರಾಮನಗರದಲ್ಲಿ ಟಿಪ್ಪರ್​ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮೂವರ ಸಾವು, ಮಂಗಳೂರಲ್ಲಿ ಇಬ್ಬರು ಮೃತ - Accident In Ramanagara

By ETV Bharat Karnataka Team

Published : Sep 6, 2024, 3:31 PM IST

ರಾಜ್ಯದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಐವರು ಮೃತಪಟ್ಟಿದ್ದಾರೆ. ರಾಮನಗರಲ್ಲಿ ಬೈಕ್​ಗೆ ಟಿಪ್ಪರ್ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದು, ಮಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಯುವಕರು ಕೊನೆಯುಸಿರೆಳೆದಿದ್ದಾರೆ.

Etv Bharat
ಬೈಕ್​ಗೆ ಟಿಪ್ಪರ್ ಡಿಕ್ಕಿ (ETV Bharat)

ರಾಮನಗರ:ಶುಕ್ರವಾರ ಬೆಳ್ಳಂಬೆಳಗ್ಗೆ ಟಿಪ್ಪರ್ ಲಾರಿ ಹಾಗೂ ಬೈಕ್​ ನಡುವೆ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ಓರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ರಾಮನಗರ ತಾಲೂಕಿನ ಮಾಯಗಾನಹಳ್ಳಿ ಬಳಿ ಸಂಭವಿಸಿದೆ. ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ಹೈವೇಯ ಸರ್ವೀಸ್ ರಸ್ತೆಯಲ್ಲಿ ಅವಘಡ ಸಂಭವಿಸಿದೆ.

ಮೃತರನ್ನು ಗುರುಮೂರ್ತಿ (39), ಶೇಕ್ ಅಫೀಸ್ (45) ಹಾಗೂ ವೆಂಕಟೇಶ್ (50) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಗಾರೆ ಕೆಲಸದವರಾಗಿದ್ದಾರೆ. ಘಟನೆಯಲ್ಲಿ ಹನುಮಂತ ಎಂಬಾತ ಗಂಭೀರವಾಗಿ ಗಾಯಗೊಂಡು, ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೈವೇ ಸರ್ವೀಸ್ ರಸ್ತೆಯಲ್ಲಿ ರಾಮನಗರದಿಂದ ಬಿಡದಿ ಕಡೆಗೆ ಹೋಗುತ್ತಿದ್ದ ಬೈಕ್​ಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಗಾರೆ ಕೆಲಸಕ್ಕೆ ಒಂದೇ ಬೈಕ್​ನಲ್ಲಿ ನಾಲ್ವರು ಪ್ರಯಾಣ ಮಾಡುತ್ತಿದ್ದರು. ಈ ವೇಳೆ, ಟಿಪ್ಪರ್ ಅಡ್ಡ ಬಂದ ಪರಿಣಾಮ ಅಪಘಾತವಾಗಿದೆ. ಅವಘಡದಲ್ಲಿ ಬೈಕ್​ನಲ್ಲಿದ್ದವರು, ಟಿಪ್ಪರ್​ ಕೆಳಗಡೆ ಸಿಲುಕಿದ್ದರು.

ಸ್ಥಳಕ್ಕೆ ಎಎಸ್​​ಪಿ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮನಗರ ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:20 ಅಡಿ ಮೇಲಿನಿಂದ ಕೆಳಗೆ ಬಿದ್ದ ಗೂಡ್ಸ್ ವಾಹನ: ನಾಲ್ವರು ಗಾಯ

ಪ್ರತ್ಯೇಕ ಅಪಘಾತ, ಇಬ್ಬರು ಸಾವು:ಮಂಗಳೂರಿನ ಯೆಯ್ಯಾಡಿ ಹರಿಪದವು ಎಂಬಲ್ಲಿ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಯುವಕರಿಬ್ಬರು ಮೃತಪಟ್ಟಿದ್ದಾರೆ. ಉಪ್ಪಿನಂಗಡಿಯ ಚೇತನ್ (24) ಹಾಗೂ ಕೋಡಿಕಲ್‌ನ ಕಾಶೀನಾಥ್ (17) ಸಾವನ್ನಪ್ಪಿದವರು.

ಅಪಘಾತಗೊಂಡ ಬೈಕ್​ (ETV Bharat)

ಯುವಕರಿಬ್ಬರು ಶಕ್ತಿನಗರದ ಚಾಲುಕ್ಯ ಬಾರ್‌ನ ಸಿಬ್ಬಂದಿ‌ಯಾಗಿದ್ದರು. ಇಬ್ಬರೂ ಕೆಲಸ ಮುಗಿಸಿ ತಡರಾತ್ರಿ ಮನೆಯ ಕಡೆ ಬೈಕ್‌ನಲ್ಲಿ ಬರುತ್ತಿದ್ದರು. ಬೈಕ್ ಯೆಯ್ಯಾಡಿಯ ಹರಿಪದವಿಗೆ ಬರುತ್ತಿದ್ದಂತೆ ಲಾರಿಯೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ನಿಯಂತ್ರಣ ಕಳೆದುಕೊಂಡು ಬೈಕ್‌ನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ‌. ಪರಿಣಾಮ ಗಂಭೀರವಾಗಿ ಗಾಯಗೊಂಡ ಇಬ್ಬರೂ ಬಿದ್ದು ಮೃತಪಟ್ಟಿದ್ದಾರೆ‌.

ಇದನ್ನೂ ಓದಿ:ಮುದ್ದೇಬಿಹಾಳ: ಜಾತ್ರೆ ವೇಳೆ ಬೈಕ್ ಹಾಯ್ದು ಅಪಘಾತ, ಮೂವರು ಯುವಕರು ಸಾವು - Muddebihal Bike Accident

ABOUT THE AUTHOR

...view details