ಬೆಂಗಳೂರು :ಕೃಷಿ ಇಲಾಖೆಯ ವತಿಯಿಂದ ಜನವರಿ 23 ರಿಂದ 25ರ ವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ, ಸಾವಯವ ಮತ್ತು ಸಿರಿಧಾನ್ಯ ಮೇಳ -2025ನ್ನು ಆಯೋಜಿಸಲಾಗಿದೆ.
ಖಾಸಗಿ ಹೋಟೆಲ್ನಲ್ಲಿ ಇಂದು ಸಂಜೆ ಮಾಧ್ಯಮಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ, ಜನವರಿ 23ರಂದು ಬೆಳಿಗ್ಗೆ 11 ಗಂಟೆಗೆ ಅರಮನೆ ಮೈದಾನ ತ್ರಿಪುರನಿವಾಸಿನಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಳದ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು.
ಸರ್ಕಾರವು ಸುಮಾರು ಎರಡು ದಶಕಗಳಿಂದ ಸಾವಯವ ಕೃಷಿಯನ್ನು ಉತ್ತಮ ಪರ್ಯಾಯ ಪದ್ಧತಿಯಾಗಿ ಉತ್ತೇಜಿಸಲು ಪ್ರಾರಂಭಿಸಿದೆ. 2017ರಲ್ಲಿ ಆಯೋಜಿಸಿದ್ದ ಮೊದಲ ಆವೃತ್ತಿಯ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳದ ಮೂಲಕ ರಾಜ್ಯವು ಸಾವಯವ ಮತ್ತು ಸಿರಿಧಾನ್ಯಗಳ ಪ್ರಚಾರದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ.
ಈ ಮೇಳವು ರೈತರು, ರೈತ ಗುಂಪುಗಳು, ದೇಶೀಯ ಮತ್ತು ಅಂತಾರಾಷ್ಟ್ರೀಯ ಕಂಪನಿಗಳು ಸಾವಯವ ಮತ್ತು ಸಿರಿಧಾನ್ಯ ವಲಯದ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳನ್ನು ಒಗ್ಗೂಡಿಸುವುದರ ಜೊತೆಗೆ ಹೊಸ ಹೊಸ ಅವಕಾಶಗಳನ್ನು ಅನ್ವೇಷಿಸುವ ಮತ್ತು ಪರಿಣಾಮಕಾರಿಯಾಗಿ ಮಾರುಕಟ್ಟೆ ಸಂಪರ್ಕಗಳನ್ನು ಕಲ್ಪಿಸುವ ವೇದಿಕೆಯಾಗಲಿದೆ. ಸಾವಯವ ಮತ್ತು ಸಿರಿಧಾನ್ಯಗಳನ್ನು ಭವಿಷ್ಯದ ಪೀಳಿಗೆಯನ್ನು ಪೋಷಿಸುವ ಸಾಂಪ್ರದಾಯಿಕ ಪ್ರಜ್ಞಾವಂತ ಆಹಾರ ಎಂದು ಜನಪ್ರಿಯಗೊಳಿಸುವುದು ಮತ್ತು ಭವಿಷ್ಯಕ್ಕಾಗಿ ಪಾರಂಪರಿಕ ದೇಶೀ ತಳಿಗಳನ್ನು ಬೆಳೆಸಿ ಸಂರಕ್ಷಿಸುವುದು ಸರ್ಕಾರದ ಧ್ಯೇಯವಾಗಿದೆ. ರಾಜ್ಯದಲ್ಲಿ ರೈತ ಸಿರಿ ಯೋಜನೆಯಲ್ಲಿ ಒಟ್ಟು 106 ಕೋಟಿ ರೂ. ಸಹಾಯಧನ ನೀಡಲಾಗಿದೆ ಎಂದರು.
ಸಾವಯವ ಮತ್ತು ಸಿರಿಧಾನ್ಯಗಳ ಪ್ರೋತ್ಸಾಹಕ್ಕೆ ಬೆಂಗಳೂರಿನ ಹೆಬ್ಬಾಳದಲ್ಲಿ "ಸಾವಯವ ಮತ್ತು ಸಿರಿಧಾನ್ಯ ಹಬ್" ಅನ್ನು 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ. 23 ರಂದು ಶಂಕುಸ್ಥಾಪನೆ ನೆರವೇರಿಸುವರು ಎಂದು ಹೇಳಿದರು.
ಮೂರು ದಿನದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ 300ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುವುದು ಹಾಗೂ 30ಕ್ಕಿಂತ ಹೆಚ್ಚು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಖ್ಯಾತ ಉಪನ್ಯಾಸಕರು ಮಾಹಿತಿ ನೀಡಲಿದ್ದಾರೆ ಎಂದರು.
ಪ್ರಸ್ತುತ ರಾಜ್ಯದ ಒಟ್ಟು ಸಿರಿಧಾನ್ಯ ಪ್ರದೇಶ - 18.37 ಲಕ್ಷ ಹೆಕ್ಟೇರ್, ಪ್ರಮುಖ ಸಿರಿಧಾನ್ಯಗಳು - 18.06 ಲಕ್ಷ ಹೆಕ್ಟೇರ್ (ರಾಗಿ - 8.27 ಲಕ್ಷ ಹೆಕ್ಟೇರ್, ಜೋಳ - 8.11 ಲಕ್ಷ ಹೆಕ್ಟೇರ್ ಮತ್ತು ಸಜ್ಜೆ 1.68 ಲಕ್ಷ ಹೆಕ್ಟೇರ್) ಹಾಗೂ ಕಿರು/ಸಿರಿಧಾನ್ಯಗಳು - 0.31 ಲಕ್ಷ ಹೆಕ್ಟೇರ್ (ನವಣೆ, ಸಾಮೆ, ಕೊರಲೆ, ಹಾರಕ, ಬರಗು ಮತ್ತು ಊದಲು). ಸಾವಯವ ಮತ್ತು ಸಿರಿಧಾನ್ಯಗಳ ಪ್ರೋತ್ಸಾಹಕ್ಕೆ ರಾಜ್ಯ ಸರ್ಕಾರವು ಕೈಗೊಂಡಿರುವ ಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಲು ಪೂರ್ವಭಾವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.
ಮೇಳದಲ್ಲಿ 9 ದೇಶಗಳ ಪ್ರತಿನಿಧಿಗಳು : ಮೇಳದಲ್ಲಿ ಜರ್ಮನಿ, ಸ್ಪಿಟ್ಟರ್ಲ್ಯಾಂಡ್, ಸ್ಪೇನ್, ಆಸ್ಟ್ರೇಲಿಯಾ, ಕೀನ್ಯಾ, ತಾಂಜೇನಿಯ, ಇಟಲಿ, ಇಂಗ್ಲೆಂಡ್, ಪೆರು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದ ಸಚಿವರು, ಇಲಾಖೆಯ ಅಧಿಕಾರಿಗಳ ತಂಡ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿ ಮೇಳದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. 25 ರಾಜ್ಯಗಳು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದು, ಇನ್ನೂ 2-3 ರಾಜ್ಯಗಳು ಭಾಗವಹಿಸುವ ನಿರೀಕ್ಷೆಯಿರುತ್ತದೆ. ಅಲ್ಲದೇ, 8 ಹೊರ ರಾಜ್ಯಗಳ ಕೃಷಿ ಸಚಿವರು ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದು, ಇನ್ನೂ ಒಂದಿಬ್ಬರು ಸಚಿವರು ಭಾಗವಹಿಸುವ ನಿರೀಕ್ಷೆಯಿರುತ್ತದೆ. ರಾಜ್ಯ, ಹೊರರಾಜ್ಯ ಹಾಗೂ ಅಂತಾರಾಷ್ಟ್ರೀಯ ಸಿರಿಧಾನ್ಯ/ಸಾವಯವ ಉತ್ಪನ್ನಗಳ ಸಂಸ್ಥೆಗಳು, ಇಲಾಖೆಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಮೇಳದಲ್ಲಿ ಭಾಗವಹಿಸಲಿದ್ದು, ಹೊರರಾಜ್ಯಗಳ 17 ಇಲಾಖೆಗಳು ಮತ್ತು 7 ಸಂಸ್ಥೆಗಳು ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಿರಿಧಾನ್ಯ ಓಟ/ನಡಿಗೆ, ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಆಯೋಜಿಸಲಾಗಿರುತ್ತದೆ. ಮೂರು ದಿನದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳವು ಈ ಕೆಳಗಿನ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.
ಸಿರಿಧಾನ್ಯಗಳ ಮಳಿಗೆ : 300ಕ್ಕೂ ಹೆಚ್ಚು ಹವಾನಿಯಂತ್ರಿತ ಸಾವಯವ ಮತ್ತು ಸಿರಿಧಾನ್ಯಗಳ ಮಳಿಗೆಗಳು.
ವಸ್ತುಪ್ರದರ್ಶನ : ಸಾವಯವ ಮತ್ತು ಸಿರಿಧಾನ್ಯಗಳ ಸಂಸ್ಥೆಗಳು, ಮಾರುಕಟ್ಟೆದಾರರು, ರಫ್ತುದಾರರು, ಚಿಲ್ಲರೆ ಮಾರಾಟಗಾರರು, ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಸಾವಯವ ಪರಿಕರಗಳ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ.
ಅಂತಾರಾಷ್ಟ್ರೀಯ ಸಮ್ಮೇಳನ :ಸಮ್ಮೇಳನದಲ್ಲಿ 30ಕ್ಕಿಂತ ಹೆಚ್ಚು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಖ್ಯಾತ ಉಪನ್ಯಾಸಕರು ಮಾಹಿತಿ ನೀಡಲಿದ್ದಾರೆ.