ಕರ್ನಾಟಕ

karnataka

ETV Bharat / state

ಕಿತ್ತೂರು ಇತಿಹಾಸ ಸಾರುತ್ತಿದೆ ಇಂದಿರಾ ಗಾಂಧಿ ಉದ್ಘಾಟಿಸಿದ್ದ ರಾಣಿ ಚೆನ್ನಮ್ಮ ವಸ್ತು ಸಂಗ್ರಹಾಲಯ

ಮಾಜಿ ಮುಖ್ಯಮಂತ್ರಿ ಎಸ್.ಆರ್.ಕಂಠಿ ಅವರ ವಿಶೇಷ ಆಸಕ್ತಿಯಿಂದ ತಲೆ ಎತ್ತಿರುವ ರಾಣಿ ಚೆನ್ನಮ್ಮ ವಸ್ತು ಸಂಗ್ರಹಾಲಯ ವೀಕ್ಷಿಸಲು ರಾಜ್ಯ, ಹೊರ ರಾಜ್ಯಗಳಿಂದ ದಿನನಿತ್ಯ ಆಗಮಿಸುವ ನೂರಾರು ಜನರು ಕಿತ್ತೂರು ಇತಿಹಾಸವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ‌.

By ETV Bharat Karnataka Team

Published : 7 hours ago

CHENNAMMA MUSEUM
ರಾಣಿ ಚೆನ್ನಮ್ಮ ವಸ್ತು ಸಂಗ್ರಹಾಲಯ (ETV Bharat)

ಬೆಳಗಾವಿ: ವೀರರಾಣಿ ಕಿತ್ತೂರು ಚೆನ್ನಮ್ಮನ ಶೌರ್ಯ, ಸಾಹಸ, ಪರಾಕ್ರಮ, ಕಿತ್ತೂರು ಸಂಸ್ಥಾನದ ಇತಿಹಾಸ ಸಾರುವ ವಸ್ತು ಸಂಗ್ರಹಾಲಯ ಈಗ ನೋಡುಗರ ಗಮನ ಸೆಳೆಯುತ್ತಿದೆ. ಅಲ್ಲದೇ ಆಗಿನ ಕಾಲಕ್ಕೆ ವೀಕ್ಷಕರನ್ನು ಕೊಂಡೊಯ್ಯುತ್ತಿದೆ. ಹೇಗಿದೆ ವಸ್ತು ಸಂಗ್ರಹಾಲಯ ಎಂಬ ಕುತೂಹಲವೇ? ಅದರ ವಿಶೇಷ ವರದಿ ಇಲ್ಲಿದೆ.

ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಸೊಕ್ಕಿನಿಂದ ಮೆರೆಯುತ್ತಿದ್ದ ಆಂಗ್ಲರಿಗೆ, ಮೊಟ್ಟ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದ್ದು ಕಿತ್ತೂರಿನ ಪುಟ್ಟ ಸಂಸ್ಥಾನದ ದಿಟ್ಟ ಕಲಿಗಳು. ಚೆನ್ನಮ್ಮಾಜಿ ನೇತೃತ್ವದಲ್ಲಿ ಬ್ರಿಟಿಷರಿಗೆ ಮಣ್ಣು ಮುಕ್ಕಿಸಿದ್ದಕ್ಕೆ ದ್ವಿಶತಮಾನದ ಸಂಭ್ರಮ. 200ನೇ ವಿಜಯೋತ್ಸವ ನಿಮಿತ್ತ ಇದೇ ಅಕ್ಟೋಬರ್ 23, 24 ಮತ್ತು 25ರಂದು ಮೂರು‌ ದಿನ‌ ಅದ್ಧೂರಿ ಕಿತ್ತೂರು ಉತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.

ರಾಣಿ ಚೆನ್ನಮ್ಮ ವಸ್ತು ಸಂಗ್ರಹಾಲಯ (ETV Bharat)

ಇನ್ನು ಚೆನ್ನಮ್ಮ ಕಿತ್ತೂರಿನ ಕೋಟೆ ಆವರಣದಲ್ಲಿರುವ "ಕಿತ್ತೂರು ರಾಣಿ ಚೆನ್ನಮ್ಮ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯ" ಕಿತ್ತೂರು ಸಂಸ್ಥಾನದ ಘತವೈಭವವನ್ನು ಹಿಡಿದಿಟ್ಟುಕೊಂಡಿದೆ. 1967 ಜನವರಿ 10ರಂದು ಅಂದಿನ‌ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರೇ ಸ್ವತಃ ಕಿತ್ತೂರಿಗೆ ಆಗಮಿಸಿ ತಮ್ಮ‌ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಿರುವ ಈ ವಸ್ತು ಸಂಗ್ರಹಾಲಯವನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ವಹಣೆ ಮಾಡುತ್ತಿದೆ. ರಾಜ್ಯ, ಹೊರ ರಾಜ್ಯಗಳಿಂದ ದಿನನಿತ್ಯ ಆಗಮಿಸುವ ಸಾವಿರಾರು ಜನರು ಕಿತ್ತೂರು ಇತಿಹಾಸವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ‌.

ಮಾಜಿ ಮುಖ್ಯಮಂತ್ರಿ ಎಸ್.ಆರ್.ಕಂಠಿ ಅವರ ವಿಶೇಷ ಆಸಕ್ತಿಯಿಂದ ತಲೆ ಎತ್ತಿರುವ ಈ ವಸ್ತು ಸಂಗ್ರಹಾಲಯವು ನಾಲ್ಕು ಗ್ಯಾಲರಿಗಳನ್ನು ಹೊಂದಿದ್ದು, ಒಂದರಲ್ಲಿ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ವಸ್ತುಗಳಿದ್ದರೆ, ಮತ್ತೊಂದರಲ್ಲಿ ಚೆನ್ನಮ್ಮನ ವರ್ಣಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಇನ್ನೆರಡು ಗ್ಯಾಲರಿಗಳಲ್ಲಿ ಶಿಲ್ಪಗಳನ್ನು ಕಾಣಬಹುದಾಗಿದೆ. ಇನ್ನು‌ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಅರಮನೆಯ ಸಾಗವಾನಿ ಕಟ್ಟಿಗೆಯ ಬಾಗಿಲು-ಕಿಟಕಿ, ಆಗಿನ ಕಾಲದ ನೈಜ ಖಡ್ಗ, ಕತ್ತಿ-ಗುರಾಣಿಗಳು, ಚೀಲಕತ್ತು, ಸೈನಿಕರ ಉಡುಪುಗಳು, ಹಳೆ ಕಾಲದ ಕೀಲಿಗಳು, ಫಿರಂಗಿ-ಗುಂಡುಗಳು, ಮಡಿಕೆಗಳು, ಕಿತ್ತೂರು ರಾಜರ ವಂಶಾವಳಿ ನೋಡುಗರನ್ನು ಆಕರ್ಷಿಸುತ್ತಿವೆ.

ಇಂದಿರಾ ಗಾಂಧಿ ಉದ್ಘಾಟಿಸಿದ್ದ ರಾಣಿ ಚೆನ್ನಮ್ಮ ವಸ್ತು ಸಂಗ್ರಹಾಲಯ (ETV Bharat)

ವಿಶೇಷ ವರ್ಣಚಿತ್ರಗಳು:ಕಲ್ಮಠದ ಶ್ರೀಗಳ ವ್ಯಾಖ್ಯಾನ, ರಾಣಿ ಚೆನ್ನಮ್ಮ ಹಾಗೂ ಮಲ್ಲಸರ್ಜರ ಪ್ರಥಮ ಭೇಟಿ ದೃಶ್ಯ, ಯುದ್ಧಕ್ಕೆ ಹೊರಟ ರಾಣಿ ಚೆನ್ನಮ್ಮಳ ಜೊತೆ ಸಂಗೊಳ್ಳಿ ರಾಯಣ್ಣ ಮತ್ತು ಅಮಟೂರು ಬಾಳಪ್ಪನ ವರ್ಣಚಿತ್ರ, ರಣರಂಗದಲ್ಲಿ ಮಹಾದಂಡನಾಯಕ ಸರ್ದಾರ್ ಗುರುಸಿದ್ದಪ್ಪನೊಂದಿಗೆ ರಾಣಿ ಚೆನ್ನಮ್ಮ ದೃಶ್ಯ, ಯುದ್ಧಕ್ಕೆ ನಿಂತ ಬ್ರಿಟಿಷ್ ಸೇನೆಯೊಂದಿಗೆ ರಾಣಿ ಚೆನ್ನಮ್ಮ ಹಾಗೂ ಕಿತ್ತೂರಿನ ಸೇನೆ, ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾಗಿರುವ ದೃಶ್ಯ, ಬ್ರಿಟಿಷ್ ಸೈನಿಕರನ್ನು ಬಂಧಿಸಿ ಕರೆದೊಯ್ಯತ್ತಿರುವ ದೃಶ್ಯ, ಬ್ರಿಟಿಷ್ ಮಕ್ಕಳೊಂದಿಗೆ ಅರಮನೆಯಲ್ಲಿ ಆಟವಾಡುತ್ತಿರುವ ರಾಣಿ ಚೆನ್ನಮ್ಮಳ ದೃಶ್ಯಗಳು ನೋಡುಗರಿಗೆ ಮನಮೋಹಕವಾಗಿವೆ. ಅದೇ ರೀತಿ ಪ್ರಭಾವತಿ ವಿ. ಹೆದ್ದೂರಶೆಟ್ಟಿ ಅವರು 1958 ರಲ್ಲಿ ಎಂಬ್ರಾಯ್ಡರಿಯಲ್ಲಿ ರಚಿಸಿದ ರಾಣಿ ಚೆನ್ನಮ್ಮಳ ಚಿತ್ರವೂ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ.

ಶಿಲ್ಪಗಳ ಗ್ಯಾಲರಿಯಲ್ಲಿ ಚಾಲುಕ್ಯರಿಂದ ವಿಜಯನಗರೋತ್ತರ ಕಾಲದವರೆಗಿನ ವಿವಿಧ ಶೈಲಿಯ ಹಾಗೂ ಧಾರ್ಮಿಕ, ಲೌಕಿಕ ಶಿಲ್ಪಗಳು ಮತ್ತು ಶಾಸನಗಳು ಇಲ್ಲಿವೆ. ಕಿತ್ತೂರಿನ ಇತಿಹಾಸ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಕಿತ್ತೂರಿನ ಕೊಡುಗೆಯನ್ನು ವಸ್ತು ಸಂಗ್ರಹಾಲಯವು ಸಾರುತ್ತಿದೆ. ಆನಂದ ತಾಂಡವ ನಾಟ್ಯ ಶಿಲ್ಪ, ಮಹಿಷ ಮರ್ದಿನಿ, ಮದನಿಕ ಶಿಲ್ಪ, ತೀರ್ಥಂಕರ ಪಾರ್ಶ್ವನಾಥ ಮೂರ್ತಿಗಳು, ವೀರರ ತ್ಯಾಗಕ್ಕೆ ಸಂಕೇತವಾದ ವೀರಗಲ್ಲುಗಳು, ಮಹಾಸತಿ ಕಲ್ಲುಗಳು ಶಿಲ್ಪ ಕಲೆಗೆ ಹಿಡಿದ ಕೈಗನ್ನಡಿಯಾಗಿವೆ. ಅದೇ ರೀತಿ ಸಪ್ತಮಾತ್ರಿಕೆಯರ ಶಿಲ್ಪಗಳು, ಸರಸ್ವತಿ, ದುರ್ಗೆ ಸೇರಿ ಮತ್ತಿತರ ಶಿಲ್ಪಗಳನ್ನು ಇಲ್ಲಿ ನೋಡಬಹುದಾಗಿದೆ. ಇಲ್ಲಿಗೆ ಆಗಮಿಸಿದ ಜನರಿಗೆ ಅದ್ಭುತ ಅನುಭವ ಆಗುವುದರಲ್ಲಿ ಸಂಶಯ ಇಲ್ಲ ಎಂದು ಕ್ಯುರೇಟರ್ ರಾಘವೇಂದ್ರ ಈಟಿವಿ ಭಾರತಕ್ಕೆ ವಿವರಿಸಿದರು.

ರಾಣಿ ಚೆನ್ನಮ್ಮ ವಸ್ತು ಸಂಗ್ರಹಾಲಯ ಕಣ್ತುಂಬಿಕೊಳ್ಳುತ್ತಿರುವ ವೀಕ್ಷಕರು (ETV Bharat)

ಕ್ಯೂರೇಟರ್ ರಾಘವೇಂದ್ರ ಅವರ ನೇತೃತ್ವದಲ್ಲಿ ಉತ್ತಮವಾಗಿ ವಸ್ತು ಸಂಗ್ರಹಾಲಯ ನಿರ್ವಹಣೆ ಆಗುತ್ತಿದ್ದು, ಸುತ್ತಲೂ ಹಚ್ಚ ಹಸಿರಿನ ವಾತಾವರಣವಿದೆ. ಇಬ್ಬರು ಖಾಯಂ, ಹೊರ ಗುತ್ತಿಗೆಯಲ್ಲಿ 6 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ವಾರದ ಎಲ್ಲಾ ದಿನಗಳಲ್ಲಿ ಬೆಳಗ್ಗೆ 10ರಿಂದ ಸಾಯಂಕಾಲ 5.30ರವರೆಗೂ ವಸ್ತು ಸಂಗ್ರಹಾಲಯ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ವಸ್ತು ಸಂಗ್ರಹಾಲಯ ವೀಕ್ಷಣೆಗೆ‌ ಕಳೆದ ವರ್ಷದಿಂದ ಪ್ರವೇಶ ಶುಲ್ಕ‌ ನಿಗದಿಪಡಿಸಲಾಗಿದ್ದು, ಮಕ್ಕಳಿಗೆ 5 ರೂ., ವಯಸ್ಕರರಿಗೆ 10 ರೂ. ಪ್ರತಿ ತಿಂಗಳು ಸರಾಸರಿ 60 ಸಾವಿರ ರೂ. ಹಣ ಸಂಗ್ರಹವಾಗುತ್ತಿದೆ. 2023ರ ಜುಲೈನಿಂದ 2024ರ ಜುಲೈವರೆಗೆ ಒಟ್ಟು 6,45,435ರೂ. ಹಣ ವೀಕ್ಷಕರ ಪ್ರವೇಶ ಶುಲ್ಕದಿಂದ ಸಂಗ್ರಹವಾಗಿದ್ದು, 65 ಸಾವಿರ ಜನ ಭೇಟಿ ಕೊಟ್ಟಿದ್ದಾರೆ.

ವೀಕ್ಷಕ ಶರಣಬಸವ ವಾಲಿ ಮಾತನಾಡಿ, ಕಿತ್ತೂರು ಸಂಸ್ಥಾನದ ಕಾಲಘಟ್ಟದ ಹಲವಾರು ವಸ್ತುಗಳನ್ನು ತುಂಬಾ ಅಚ್ಚು ಕಟ್ಟಾಗಿ ಸಂಗ್ರಹಿಸಿಟ್ಟಿದ್ದನ್ನು ನೋಡಿ ತುಂಬಾ ಖುಷಿ ಆಯಿತು. ಚೆನ್ನಮ್ಮನ‌ ಸಮಗ್ರ ಇತಿಹಾಸವನ್ನು ಕಟ್ಟಿ ಕೊಡಲು ವಸ್ತು ಸಂಗ್ರಹಾಲಯ ಮತ್ತಷ್ಟು ಅಭಿವೃದ್ಧಿಪಡಿಸಬೇಕು. ಅದೇ ರೀತಿ ಬೆಳಗಾವಿ ಜಿಲ್ಲೆಯ ಧಾರ್ಮಿಕ ಐತಿಹಾಸಿಕ ಕ್ಷೇತ್ರಗಳಾಗಿರುವ ಸವದತ್ತಿ ಯಲ್ಲಮ್ಮಗುಡ್ಡ, ಮಲ್ಲಮ್ಮನ ಬೆಳವಡಿ, ಕ್ರಾಂತಿವೀರ ರಾಯಣ್ಣನ ಸಂಗೊಳ್ಳಿ ಮಾರ್ಗವಾಗಿ ಚೆನ್ನಮ್ಮನ ಕಿತ್ತೂರು ಮುಂದೆ ರಾಯಣ್ಣನ ಗಲ್ಲಿಗೇರಿಸಿರುವ ನಂದಗಡವರೆಗೆ ನೇರ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸಿದರೆ ಪ್ರವಾಸಿಗರಿಗೆ ತುಂಬಾ ಅನುಕೂಲ‌ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಣಿ ಚೆನ್ನಮ್ಮ ವಸ್ತು ಸಂಗ್ರಹಾಲಯ (ETV Bharat)

ವಸ್ತು ಸಂಗ್ರಹಾಲಯದಲ್ಲಿ ಏನಾಗಬೇಕು‌‌?

  • ಓರ್ವ ಕ್ಯುರೇಟರ್, ಇಬ್ಬರು ಸಿಬ್ಬಂದಿ ಮಾತ್ರ ಖಾಯಂ ಇದ್ದಾರೆ. ಹಾಗಾಗಿ, ವಸ್ತು ಸಂಗ್ರಹಾಯ ನಿರ್ವಹಣೆ ಕಷ್ಟವಾಗುತ್ತಿದೆ. ಸಿಬ್ಬಂದಿ ಹೆಚ್ಚಿಸಬೇಕು ಮತ್ತು ಖಾಯಂಗೊಳಿಸಬೇಕಿದೆ.
  • ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಮತ್ತಷ್ಟು ವಸ್ತು ಮತ್ತು ದಾಖಲೆಗಳನ್ನು ಸಂಗ್ರಹಿಸಿ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಬೇಕಿದೆ.
  • ರಾಣಿ ಚೆನ್ನಮ್ಮ ಮತ್ತು ಕಿತ್ತೂರಿನ ಇತಿಹಾಸಕ್ಕೆ ಸಂಬಂಧಪಟ್ಟ ಪುಸ್ತಕಗಳ ಗ್ರಂಥಾಲಯ‌ ನಿರ್ಮಿಸಬೇಕು.
  • ಪ್ರವೇಶ ಶುಲ್ಕ ಹಣ ಪುರಾತತ್ವ ಇಲಾಖೆಗೆ ಹೋಗುವ ಬದಲು ವಸ್ತು ಸಂಗ್ರಹಾಲಯದ ಅಭಿವೃದ್ಧಿಗೆ ಬಳಕೆ ಆದರೆ ಉತ್ತಮ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಇದನ್ನೂ ಓದಿ: ಕಿತ್ತೂರು ಚೆನ್ನಮ್ಮ ವಿಜಯೋತ್ಸವಕ್ಕೆ 200 ವರ್ಷಗಳು ಪೂರ್ಣ: ಉತ್ಸವ ಆಚರಣೆಗೆ ಏರ್ ಶೋ ಆಯೋಜನೆಗೆ ಚಿಂತನೆ - Kittur Chennamma vijayotsava

ABOUT THE AUTHOR

...view details