ಮೈಸೂರು:ಜಾತಿ ಮರೆತು ಸಮುದಾಯಗಳು ಒಂದಾದ ಪರಿಣಾಮ 11 ವರ್ಷಗಳ ನಂತರ ದೇವಾಲಯದ ಬಾಗಿಲು ತೆರೆದು ಮಾರಮ್ಮನಿಗೆ ಶುಕ್ರವಾರ ಸಂಜೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮೈಸೂರು ತಾಲೂಕಿನ ಜಯಪುರ ಹೋಬಳಿಯ ಮಾರ್ಬಳ್ಳಿ ಗ್ರಾಮದಲ್ಲಿ, ಮೈಸೂರು ತಾಲೂಕು ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ಐವರು ಮುಖಂಡರೊಂದಿಗೆ ಯಶಸ್ವಿಯಾಗಿ ಶಾಂತಿಸಭೆ ನಡೆಸಲಾಯಿತು. ಬಳಿಕ ಗ್ರಾಮದಲ್ಲಿ 11 ವರ್ಷಗಳ ನಂತರ ಸಂತಸ ಮನೆ ಮಾಡಿದೆ.
ಈ ಮಾರಮ್ಮ ದೇವಾಲಯಕ್ಕೆ ಹಿಂದೆ ದಲಿತರ ಪ್ರವೇಶಕ್ಕೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಭಾರಿ ವಿವಾದ ಉಂಟಾಗಿ, ಬಾಗಿಲು ಮುಚ್ಚಲಾಗಿತ್ತು.
ಜಾತಿ ಮರೆತು ಒಂದಾದ ಜನ, 11 ವರ್ಷದ ಬಳಿಕ ದೇವಾಲಯದಲ್ಲಿ ಪೂಜೆ (ETV Bharat) 11 ವರ್ಷಗಳಿಂದ ದೇವಸ್ಥಾನದಲ್ಲಿ ನಡೆದಿಲ್ಲ ಪೂಜೆ: ಕಳೆದ 11ವರ್ಷದಿಂದ ಮಾರಮ್ಮನ ದೇವಾಲಯದಲ್ಲಿ ಯಾವುದೇ ಪೂಜೆ ಪುನಸ್ಕಾರಗಳು ನಡೆದಿರಲಿಲ್ಲ. ದೇವಾಲಯದ ಬಾಗಿಲು ತೆರೆಸಲು ಸಾಕಷ್ಟು ಬಾರಿ ಸಂಧಾನ ಸಭೆಗಳು ನಡೆದಿತ್ತು. ಆದರೂ ಗ್ರಾಮದಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಇದೀಗ ತಹಸೀಲ್ದಾರ್ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ಶಾಂತಿ ಸಭೆ ಕರೆಯಲಾಗಿತ್ತು.
11 ವರ್ಷದ ಬಳಿಕ ದೇವಾಲಯದಲ್ಲಿ ಪೂಜೆ (ETV Bharat) ಎಲ್ಲ ಕೋಮಿನ 5 ಮುಖಂಡರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಸುಧೀರ್ಘ ಚರ್ಚೆ ನಂತರ ಮಾರಮ್ಮ ದೇವಾಲಯ ಬಾಗಿಲು ಮತ್ತೆ ತೆರೆಯುವ ನಿರ್ಧಾರಕ್ಕೆ ಬರಲಾಯಿತು. ಶುಕ್ರವಾರ ಸಂಜೆ ಎಲ್ಲಾ ಸಮುದಾಯದ ಮುಖಂಡರು ಹಾಗೂ ತಹಸೀಲ್ದಾರ್ ಸಮ್ಮುಖದಲ್ಲಿ ದೇವಾಲಯದ ಬೀಗ ತೆರೆದು ಒಳ ಪ್ರವೇಶಿಸಿ ಗ್ರಾಮದ ದೇವತೆಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ವಿವಾದಕ್ಕೆ ಅಂತ್ಯ ಹಾಡಲಾಗಿದೆ.
ಎಲ್ಲಾ ಸಮುದಾಯದ ಮುಖಂಡರು ಹಾಗೂ ತಹಸೀಲ್ದಾರ್ ಸಮ್ಮುಖದಲ್ಲಿ ತೆರೆದ ದೇವಾಲಯ. (ETV Bharat) "11 ವರ್ಷಗಳ ಹಿಂದೆ ಮಾಚ್೯ ತಿಂಗಳಿನಲ್ಲಿ ಮಾರಮ್ಮನ ಹಬ್ಬ ಸಂಭ್ರಮದಿಂದ ನಡೆಯುತ್ತಿತ್ತು. ದೇವಾಲಯಕ್ಕೆ ದಲಿತರು ಬಂದು ಪೂಜೆ ಮಾಡಿಸಿದರು ಎಂಬ ಕಾರಣಕ್ಕೆ ಸವರ್ಣಿಯರು, ಹಬ್ಬದ ವೇಳೆ ದೇವಸ್ಥಾನದ ಬಾಗಿಲು ಮುಚ್ಚಿದ್ದರು. ಇದಾದ ಬಳಿ ಹಲವು ಬಾರಿ ಮನವಿ ಮಾಡಿದ್ದರೂ, ಪ್ರಯೋಜನವಾಗಿರಲಿಲ್ಲ. ಈಗ ತಹಶೀಲ್ದಾರ್ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ದೇವಾಲಯ ಬಾಗಿಲು ತೆರೆದು ಪೂಜೆ ಸಲ್ಲಿಸಲಾಗಿದೆ" ಎಂದು ಅಲ್ಲಿನ ರೈತ ಮುಖಂಡ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮೈಸೂರು: ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ 2 ಗಿನ್ನಿಸ್ ವಿಶ್ವ ದಾಖಲೆ