ಕರ್ನಾಟಕ

karnataka

ETV Bharat / state

ಹಿಂದಿನ ಬಿಜೆಪಿ ಸರ್ಕಾರದ ಮಾದರಿಯಲ್ಲಿ ಕಾಂಗ್ರೆಸ್ ಸರ್ಕಾರ ಸ್ಪಂದಿಸಲಿ: ವಿಜಯೇಂದ್ರ ಆಗ್ರಹ - B Y Vijayendra demand

ರಾಜ್ಯಾದ್ಯಂತ ಬಡವರು ಅತಿವೃಷ್ಟಿಯಿಂದ ಮನೆಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಬಿ.ಎಸ್​.ಯಡಿಯೂರಪ್ಪ ಅವರಂತೆಯೇ ಈಗಿನ ಮುಖ್ಯಮಂತ್ರಿ ಕೂಡ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

By ETV Bharat Karnataka Team

Published : Jul 22, 2024, 1:22 PM IST

BJP State President B Y Vijayendra
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ. ವಿಜಯೇಂದ್ರ (ETV Bharat)

ಬೆಂಗಳೂರು: "ನೆರೆಪೀಡಿತರು ಮತ್ತು ಮನೆ ಕಳೆದುಕೊಂಡವರಿಗೆ ಹಿಂದಿನ ಬಿಜೆಪಿ ಸರಕಾರ ಸ್ಪಂದಿಸಿದ ಮಾದರಿಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರವು ಹೆಚ್ಚು ಪರಿಹಾರ ಕೊಟ್ಟು ಸ್ಪಂದಿಸಬೇಕು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದರು.

ನಗರದಲ್ಲಿ ಇಂದು ಮಾಧ್ಯಮದ ಜೊತೆ ಮಾತನಾಡಿದ ಅವರು, "ಅಂಕೋಲಾ ತಾಲ್ಲೂಕಿನ ಉಳುವಾರೆ, ಶಿರೂರು ಮತ್ತಿತರ ಕಡೆ ಆದ ಮಳೆ ಹಾನಿ, ಅನಾಹುತದಿಂದ ಬಡವರು ಮನೆ ಕಳೆದುಕೊಂಡಿದ್ದಾರೆ. ಅದನ್ನು ನಾನು ವೀಕ್ಷಿಸಿ ಬಂದಿದ್ದೇನೆ. ಹಿಂದೆ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರವು ಎನ್‍ಡಿಆರ್​ಎಫ್ ನಿಯಮದ ಪ್ರಕಾರ ಮನೆ ಕಳೆದುಕೊಂಡ ಬಡವರಿಗೆ ಸುಮಾರು 1 ಲಕ್ಷ ಕೊಡಬೇಕಿತ್ತು. ಅದು ಸಾಕಾಗುವುದಿಲ್ಲ ಎಂದು 5 ಲಕ್ಷ ನೀಡುವ ನಿರ್ಧಾರವನ್ನು ಯಡಿಯೂರಪ್ಪ ಅವರು ಕೈಗೊಂಡಿದ್ದರು" ಎಂದರು.

"ಗೋಡೆ ಕುಸಿದ ಮನೆಗೆ ಎನ್‍ಡಿಆರ್​ಎಫ್ ನಿಯಮದ ಪ್ರಕಾರ 40 ಸಾವಿರ ರೂ. ಕೊಡುತ್ತಿದ್ದರು. ಅದನ್ನು ಒಂದು ಲಕ್ಷಕ್ಕೆ ಹೆಚ್ಚಿಸುವ ನಿರ್ಧಾರವನ್ನು ಯಡಿಯೂರಪ್ಪ ಅವರು ಕೈಗೊಂಡಿದ್ದರು. ರಾಜ್ಯಾದ್ಯಂತ ಬಡವರು ಅತಿವೃಷ್ಟಿಯಿಂದ ಮನೆಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಇದೇ ಮಾದರಿಯಲ್ಲಿ ಪರಿಹಾರ ಕೊಡಬೇಕು. ತಕ್ಷಣ ಈ ಸಮಸ್ಯೆಗೆ ಸ್ಪಂದಿಸಬೇಕು" ಎಂದು ಒತ್ತಾಯಿಸಿದರು.

"ಶಿರೂರು ಗುಡ್ಡ ಕುಸಿತದಲ್ಲಿ ಲಕ್ಷ್ಮಣ ನಾಯ್ಕರ ಹಾಗೂ ಹಲವರು ಮೃತರಾಗಿದ್ದು, ಕುಟುಂಬದ ಮೂವರು ಮಹಿಳೆಯರು ನಿರ್ಗತಿಕರಾಗಿದ್ದಾರೆ. ಆದರೆ, ಅವರ ಮನೆಗೆ ಶಾಸಕರು, ಸಚಿವರು ಭೇಟಿ ಕೊಟ್ಟಿಲ್ಲ" ಎಂದು ಆಕ್ಷೇಪಿಸಿದರು. "ಕಾನೂನು ಏನೇ ಇದ್ದರೂ ಪರಿಹಾರ ನೀಡಬೇಕಿತ್ತು. ನಿನ್ನೆ ಅವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದೇನೆ. ಬಡವರ ಈ ಕುಟುಂಬಕ್ಕೆ ರಾಜ್ಯ ಸರ್ಕಾರ ಕೂಡಲೇ ಸ್ಪಂದಿಸಬೇಕು; ಪರಿಹಾರ ಕೊಡಬೇಕು" ಎಂದು ವಿಜಯೇಂದ್ರ ಒತ್ತಾಯಿಸಿದರು.

ಕೇಂದ್ರ ಬಜೆಟ್​ ಕುರಿತು ಹೇಳಿದ್ದಿಷ್ಟು: "ನಿರೀಕ್ಷೆ- ಸವಾಲು ಇರುವ 7ನೇ ಕೇಂದ್ರ ಬಜೆಟ್ ಅನ್ನು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸುತ್ತಾರೆ. ಸಾಕಷ್ಟು ನಿರೀಕ್ಷೆ ಜೊತೆಗೆ ಸವಾಲು ಕೂಡ ಅವರ ಮುಂದಿದೆ. ಭಾರತವನ್ನು ಜಗತ್ತಿನ ಅಗ್ರಗಣ್ಯ ರಾಷ್ಟ್ರಗಳ ಸಾಲಿಗೆ ಒಯ್ಯಲು ಪೂರಕ ಉತ್ತಮ ಬಜೆಟ್ ಮಂಡಿಸಲಿದ್ದಾರೆ. ಯುವಕರು, ರೈತರು, ಮಧ್ಯಮವರ್ಗಕ್ಕೆ ನೆರವಾಗುವ ಹಾಗೂ ಅಭಿವೃದ್ಧಿಗೆ ಪೂರಕವಾದ ಬಜೆಟ್ ಅನ್ನು ಅವರು ಮಂಡಿಸುವ ನಿರೀಕ್ಷೆ ಇದೆ. ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನಿರೀಕ್ಷಿಸಲಾಗಿದೆ" ಎಂದು ಹೇಳಿದರು.

ಇದನ್ನೂ ಓದಿ:ಉಡುಪಿ: ಕಡಲ್ಕೊರೆತ, ನೆರೆ ಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ‌ಭೇಟಿ - lakshmi hebbalkar

ABOUT THE AUTHOR

...view details