ಕರ್ನಾಟಕ

karnataka

ETV Bharat / state

ಪ್ರಯಾಣಿಕರ ಗಮನಕ್ಕೆ: ದೀಪಾವಳಿ ಪ್ರಯುಕ್ತ ಮಂಗಳೂರು - ಬೆಂಗಳೂರು ನಡುವೆ ವಿಶೇಷ ರೈಲು ಓಡಾಟ

ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಹಬ್ಬಕ್ಕೆ ಊರುಗಳಿಗೆ ತೆರಳಲು ಜನರಿಗೆ ಅನುಕೂಲವಾಗಲಿ ಎಂದು ನೈರುತ್ಯ ರೈಲ್ವೆ ಎರಡು ವಿಶೇಷ ರೈಲು ಸೇವೆ ಒದಗಿಸುತ್ತಿದೆ.

By ETV Bharat Karnataka Team

Published : 5 hours ago

ರೈಲು ನಿಲ್ದಾಣ
ರೈಲು ನಿಲ್ದಾಣ (IANS)

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ):ನೈರುತ್ಯ ರೈಲ್ವೆ ವಲಯ ದೀಪಾವಳಿ ಹಬ್ಬದ ಪ್ರಯುಕ್ತ ಹುಬ್ಬಳ್ಳಿಯಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಬೆಂಗಳೂರು ಮಾರ್ಗವಾಗಿ ಹುಬ್ಬಳ್ಳಿಗೆ ವಿಶೇಷ ರೈಲು ಸೇವೆ ಆರಂಭಿಸುತ್ತಿದೆ.

ದಿನಾಂಕ 02/11/2024 ಶನಿವಾರ 07311 ಸಂಖ್ಯೆಯ ಹುಬ್ಬಳ್ಳಿ-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ರೈಲು ನಿಲ್ದಾಣದಿಂದ ಸಂಜೆ 4:00ಕ್ಕೆ ಹೊರಟು ಅದೇ ದಿನ ರಾತ್ರಿ 11:25ಕ್ಕೆ ಬೆಂಗಳೂರಿನ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣ ತಲುಪಲಿದೆ. ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11:55ಕ್ಕೆ ಹೊರಟು ಮರುದಿನ ಅಂದರೆ 03/11/2024 ಭಾನುವಾರ ಬೆಳಗ್ಗೆ 11:45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ಅದೇ ದಿನ ಅಂದರೆ ದಿನಾಂಕ 03/11/2024 ಭಾನುವಾರ 07312 ಸಂಖ್ಯೆಯ ಮಂಗಳೂರು ಜಂಕ್ಷನ್-ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 1:00ಕ್ಕೆ ಹೊರಟು ರಾತ್ರಿ 10 ಗಂಟೆಗೆ ಯಶವಂತಪುರ ಜಂಕ್ಷನ್ ತಲುಪಲಿದೆ. ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 10:30ಕ್ಕೆ ಹೊರಟು ಮರುದಿನ ಅಂದರೆ 04/11/2024 ಸೋಮವಾರ ಬೆಳಗ್ಗೆ 7:00ಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ತಲುಪಲಿದೆ.

ಯಾವೆಲ್ಲಾ ಸ್ಟೇಷನ್​ನಲ್ಲಿ ರೈಲು ನಿಲುಗಡೆ:ಈ ರೈಲಿಗೆ ಮಂಗಳೂರು ಜಂಕ್ಷನ್ ಹಾಗೂ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ನಡುವೆ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್(ನೆಟ್ಟಣ), ಸಕಲೇಶಪುರ, ಹಾಸನ ಜಂಕ್ಷನ್, ಚನ್ನರಾಯಪಟ್ಟಣ, ಕುಣಿಗಲ್, ಯಶವಂತಪುರ ಜಂಕ್ಷನ್, ತುಮಕೂರು, ಅರಸೀಕೆರೆ, ಬಿರೂರು, ದಾವಣಗೆರೆ, ಹರಿಹರ, ಮಲ್ಲಾರ ಮಹಾದೇವಪ್ಪ ಹಾವೇರಿ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ.

ಈ ರೈಲಿನಲ್ಲಿ 2 ಜನರಲ್ ಕೋಚ್, 5 ಸ್ಲೀಪರ್ ಕ್ಲಾಸ್, 3 ತೃತೀಯ ದರ್ಜೆಯ ಎಸಿ, 2 ದ್ವಿತೀಯ ದರ್ಜೆಯ ಎಸಿ, 1 ಪ್ರಥಮ ದರ್ಜೆ/ಕ್ಯಾಬಿನ್ ಎಸಿ ಕೋಚುಗಳು ಇರಲಿದೆ.

ಈಗಾಗಲೇ ನೈರುತ್ಯ ರೈಲ್ವೆ ವಲಯ 30/10/2024ರಂದು ಬೆಂಗಳೂರಿನಿಂದ ಮಂಗಳೂರಿಗೆ ರೈಲು ಸಂಖ್ಯೆ 06565 ಯಶವಂತಪುರ ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ರೈಲು ಹಾಗು 31/10/2024ರಂದು ಮಂಗಳೂರಿನಿಂದ ಬೆಂಗಳೂರಿಗೆ ರೈಲು ಸಂಖ್ಯೆ 06566 ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್ ವಿಶೇಷ ರೈಲು ಓಡಿಸುತ್ತಿದೆ. ಇದರ ಜೊತೆಗೆ ಅದೇ ದಿನ ಬೆಂಗಳೂರು ಹಾಗೂ ಕಾರವಾರ ಮಧ್ಯೆ ಪಡೀಲು ಬೈಪಾಸ್ ಮಾರ್ಗವಾಗಿ ರೈಲು ಸಂಖ್ಯಿ 06597/98 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಕಾರವಾರ ವಿಶೇಷ ರೈಲು ಓಡಿಸುತ್ತಿದೆ.

ಹೀಗಾಗಿ ದೀಪಾವಳಿ ಹಬ್ಬಕ್ಕೆ ಊರಿಗೆ ಬರುವವರು ಈ ರೈಲುಗಳಲ್ಲಿ ಬಂದು ಮರಳಿ ರೈಲು ಸಂಖ್ಯೆ 07312 ಮಂಗಳೂರು ಜಂಕ್ಷನ್-ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಗಳೂರಿಗೆ ಹಾಗೂ ಅರಸೀಕೆರೆ, ದಾವಣಗೆರೆ ಹಾಗೂ ಹುಬ್ಬಳ್ಳಿ ಕಡೆಗೆ ಪ್ರಯಾಣ ಬೆಳೆಸಬಹುದು.

ಟಿಕೆಟ್​ ಬುಕ್ಕಿಂಗ್ ಆರಂಭ:ಈಗಾಗಲೇ 07311 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್‌ ಶ್ರೀ ಸಿದ್ಧಾರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ರೈಲಿನ ಟಿಕೆಟ್​ ಬುಕ್ಕಿಂಗ್ ಆರಂಭಗೊಂಡಿದೆ. ಶೀಘ್ರದಲ್ಲಿ ರೈಲು ಸಂಖ್ಯೆ 07312 ಮಂಗಳೂರು ಜಂಕ್ಷನ್-ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಟಿಕೆಟ್​ ಬುಕ್ಕಿಂಗ್ ಕೂಡ ಆರಂಭವಾಗಲಿದೆ.

ಇದನ್ನೂ ಓದಿ:ದೀಪಾವಳಿ ಪ್ರಯುಕ್ತ ಕರಾವಳಿ ಜಿಲ್ಲೆಗಳಿಗೆ 2 ವಿಶೇಷ ರೈಲು ಓಡಾಟ

ABOUT THE AUTHOR

...view details