ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಔಟ್ ಗೋಯಿಂಗ್ ಮುಖ್ಯಮಂತ್ರಿ, ಹೋಗುವಾಗ ವಿಧಾನಸೌಧ ಅಡ ಇಟ್ಟು ಹೋಗಬಹುದು: ಆರ್.ಅಶೋಕ್ - R ASHOK

ಸಿದ್ದರಾಮಯ್ಯ ಔಟ್ ಗೋಯಿಂಗ್ ಮುಖ್ಯಮಂತ್ರಿ, ಹೋಗುವಾಗ ವಿಧಾನಸೌಧ ಅಡ ಇಟ್ಟು ಹೋಗಬಹುದು ಎಂದು ಸಿಎಂ ವಿರುದ್ಧ ಪ್ರತಿ ಪಕ್ಷದ ನಾಯಕ ಆರ್.ಅಶೋಕ್ ಆರೋಪ ಮಾಡಿದರು.

CHIEF MINISTER  SIDDARAMAIAH  VIDHANA SAUDHA  BENGALURU
ಆರ್.ಅಶೋಕ್ (ETV Bharat)

By ETV Bharat Karnataka Team

Published : Jun 16, 2024, 3:01 PM IST

ಬೆಂಗಳೂರು:ಸಿದ್ದರಾಮಯ್ಯ out going ಮುಖ್ಯಮಂತ್ರಿ. ಹೋಗುವಾಗ ಸಿದ್ದರಾಮಯ್ಯ ವಿಧಾನಸೌಧ ಅಡ ಇಟ್ಟು ಹೋಗಬಹುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.

ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಜನ ಕಾಂಗ್ರೆಸ್​ಗೆ ವೋಟ್ ಹಾಕಿಲ್ಲ ಅಂತ ದರ ಹೆಚ್ಚಳ ಮಾಡಿದ್ದಾರೆ. ಮಾನ ಮರ್ಯಾದೆ ಇದ್ದರೆ ಕೂಡಲೇ ದರ ಏರಿಕೆ ವಾಪಸ್ ಪಡೆಯಬೇಕು. ಸರ್ಕಾರ ಪಾಪರ್ ಆಗಿದೆ. ಕಮಿಷನ್ ಹೊಡೆಯೋಕು ದುಡ್ಡು ಇಲ್ಲ. ಕಾರ್ಪೋರೇಷನ್ ವಾರ್ಡ್ ಆಫೀಸ್ ಅಡ ಇಡಲು ನೀಲಿ ನಕ್ಷೆ ರೆಡಿಯಾಗ್ತಿದೆ. ಈ ಸರ್ಕಾರ ಇನ್ನೊಂದು ವರ್ಷ ಇದ್ರೆ, ವಿಧಾನಸೌಧ ಅಡ ಇಡಬಹುದು ಎಂದು ವಾಗ್ದಾಳಿ ನಡೆಸಿದರು.

ದರ ಏರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಜನರು ಸಹ ಈ ಪ್ರತಿಭಟನೆಯಲ್ಲಿ ಭಾಗಿಯಾಗಬೇಕು ಎಂದು ಒತ್ತಾಯ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯಗೆ ಶ್ವೇತ ಪತ್ರ ಹೊರಡಿಸಿ ಎಂದು ಬಹಳಷ್ಟು ಸಾರಿ ಕೇಳಿದ್ದೇವೆ. ಆರ್ಥಿಕ ಇಲಾಖೆ ಸಂಪೂರ್ಣವಾಗಿ ದಿವಾಳಿ ಆಗಿದೆ. ಡಿ. ಕೆ‌. ಶಿವಕುಮಾರ್ ಕಾಂಗ್ರೆಸ್ ಶಾಸಕರಿಗೆ ಅವಾಜ್ ಹಾಕಿದ್ದಾರೆ. ಬಾಯಿ ಮುಚ್ಕೊಂಡು ಇರಬೇಕು ಅಂತ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಹೀಗೆ ಮಾಡಿದ್ರೆ, ಜಿಲ್ಲಾ ಹಾಗೂ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಚೊಂಬು ಕೊಡ್ತಾರೆ. ಈ ಸರ್ಕಾರ ಇನ್ನೊಂದು ವರ್ಷ ಇದ್ರೆ, ಈ ವಿಧಾನಸೌಧವನ್ನೂ ಅಡ ಇಡ್ತಾರೆ. ಈ ಸರ್ಕಾರ ದಿವಾಳಿಯಾಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ಬಂದ ಒಂದು ವರ್ಷದಲ್ಲಿ ಎಲ್ಲಾ ಬೆಲೆ ಏರಿಕೆ‌ ಭಾಗ್ಯ ನೀಡಿದೆ. ದೌರ್ಜನ್ಯ ಮಾಡ್ತಿದ್ದಾರೆ. ಹಾಲು, ಹಾಲ್ಕೋಹಾಲ್, ಸ್ಟ್ಯಾಂಪ್ ಡ್ಯೂಟಿ, ಗೈಡೆನ್ಸ್ ವ್ಯಾಲ್ಯೂ, ಆಸ್ತಿ ತೆರಿಗೆ, ಎಲೆಕ್ಟ್ರಿಕ್‌ ಬಿಲ್ ಜಾಸ್ತಿ ಮಾಡಿದ್ದಾರೆ. ವರ್ಷಕ್ಕೆ ಮೂರು ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹಕ್ಕೆ ರಾಜ್ಯ ಸರ್ಕಾರ ದರೋಡೆಗೆ ಮುಂದಾಗಿದೆ. ಬಿಜೆಪಿ ಅವಧಿಯಲ್ಲಿ ಒಂದು ರೂಪಾಯಿ ದರ ಹೆಚ್ಚಳ ಆಗಿದ್ದಕ್ಕೆ ಬೈಕ್ ಶವಯಾತ್ರೆ ಮಾಡಿದ್ರು. ಆಗ ಸಿದ್ದರಾಮಯ್ಯ ಅವರು, ಎಲ್ಲದರ ದರ ಹೆಚ್ಚಾಗುತ್ತೆ, ಬಿಜೆಪಿ ಅವರಿಗೆ ಮಾನ ಮರ್ಯಾದೆ ಇದೆಯಾ ಅಂತ ವಾಗ್ದಾಳಿ ನಡೆಸಿದ್ದರು. ಸಿದ್ದರಾಮಯ್ಯ ಅವರೇ ನಿಮಗೆ ಮಾನ ಮರ್ಯಾದೆ ಇದೆಯಾ?. ನಮ್ಮ ಸರ್ಕಾರ ಇದ್ದಾಗ ದರ ಕಡಿಮೆ ಮಾಡಿ ಅಂದ್ರು. ಇವರು ಮಾತ್ರ ದರ‌ ಹೆಚ್ಚಳ ಮಾಡಿದ್ರು ಎಂದು ಟೀಕಿಸಿದರು.

ನೆರೆಯ ರಾಜ್ಯದಲ್ಲಿ ನಮಗಿಂತ ದರ ಕಡಿಮೆ ಇದೆ ಅಂತ ಸಚಿವ ಎಂ.ಬಿ. ಪಾಟೀಲ್ ಹೇಳ್ತಾರೆ. ನಿಮಗೆ ನಾಚಿಕೆ ಆಗಲ್ವಾ?. ನೆರೆಯ ರಾಜ್ಯದ ದರ ಪಟ್ಟಿ ನೋಡಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದ ರಾಜ್ಯ ನಮ್ಮದು. ನಮ್ಮ ತೆರಿಗೆ, ನಮ್ಮ‌ ಹಕ್ಕು ಅಂದ್ರಿ. ಸಂಪದ್ಭರಿತ ರಾಜ್ಯ ಅಂದ್ರಿ, ಯಾವುದಕ್ಕೆ ಹೋಲಿಕೆ ಮಾಡಿಕೊಳ್ಳಬೇಕು. ಕೇರಳ ರಾಜ್ಯದಲ್ಲಿ ಬ್ಯಾಂಕ್ರಪ್ಟ್ ಆಗಿದೆ. ಕರ್ನಾಟಕದಲ್ಲಿ ಕೂಡ ಬ್ಯಾಂಕ್ರಪ್ಟ್ ಆಗಲಿದೆ. ಬ್ಯಾಂಕಲ್ಲಿ ಲೋನ್‌ ಪಡೆಯುವ ಪರಿಸ್ಥಿತಿ ನಿಮಗೆ ಬಂದಿದೆ ಎಂದು ಆರೋಪಿಸಿದರು.

ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮಾಡಬೇಕು. ರೈತರಿಗೆ ಹಾಲಿನ ಪ್ರೋತ್ಸಾಹ ದನ ನೀಡಿಲ್ಲ. ಇನ್ನೂ ಮಕ್ಕಳಿಗೆ ಪಠ್ಯಪುಸ್ತಕ ನೀಡಿಲ್ಲ. ತರಕಾರಿ ಬೆಲೆ ಏರಿದೆ, ಟಿ-ಕಾಫಿ ಬೆಲೆ ಏರಿಕೆ ಆಗಲಿದೆ. ನಾಳೆಯಿಂದಲೇ ಆಟೋದವರು, ಗೂಡ್ಸ್ ವೆಹಿಕಲ್ ದರ ಹೆಚ್ಚಳ ಮಾಡ್ತಾರೆ. ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ಮಾಡಿದ್ರೆ ಬೆಲೆ ಹೆಚ್ಚಳ ಆಗುತ್ತೆ ಅಂತ ಗೊತ್ತಿಲ್ಲವಾ ನಿಮಗೆ?. ಸಿದ್ದರಾಮಯ್ಯ ನಿಮಗೆ ಜ್ಞಾನ ಇಲ್ಲವಾ?. ಅಶೋಕ್‌ಗೆ ಬಜೆಟ್ ಗೊತ್ತಿಲ್ಲ ಅಂದ್ರು. ನಿಮಗೆ ಈಗ ಗೊತ್ತಿದೆಯಾ?. ದರ ಹೆಚ್ಚಳ ಮಾಡೋದಾದ್ರೆ, ಬಜೆಟ್‌ನಲ್ಲೇ ಹೆಚ್ಚಳ ಮಾಡಬೇಕಿತ್ತು. ಅದು ನಿಜವಾದ ಧರ್ಮ. ಹಳ್ಳಿಗಾಡು, ನಗರ ಪ್ರದೇಶದ ಜನರ ಮೇಲೆ ಸೇಡು ತೀರಿಸಿಕೊಳ್ತೀರಾ ಎಂದು ಪ್ರಶ್ನಿಸಿದರು.

ZP, TP, BBMP ಚುನಾವಣೆಯಲ್ಲಿ ಇವರಿಗೆ ಬುದ್ಧಿ ಕಲಿಸಬೇಕು. ಈ ಮೋಸಗಾರ ಕಾಂಗ್ರೆಸ್‌ಗೆ ಬುದ್ಧಿ ಕಲಿಸಬೇಕು. ನಿಮ್ಮ ಸ್ವಂತ ಅಣ್ಣ ತಮ್ಮ ನಿಂತಿದ್ರೂ, ಕಾಂಗ್ರೆಸ್‌ಗೆ ಮತ ಹಾಕಬೇಡಿ. 15 ಬಾರಿ ಬಜೆಟ್ ಮಂಡನೆ ಮಾಡಿದೆ ಅಂದ್ರಿ. ನಿಮ್ಮ ಬಜೆಟ್ ಪಾಪರ್ ಆಗಿದೆ. ಯಾವ ಪುರುಷಾರ್ಥಕ್ಕೆ‌ ಬಜೆಟ್ ಮಂಡಿಸಿದ್ರಿ. ಮುಂದಿನ ತಿಂಗಳು ಸಂಬಳ‌ ಕೊಡೋಕೆ‌ ಹಣ ಇಲ್ಲ ಅಂತ ಆರ್ಥಿಕ ಇಲಾಖೆ ತಿಳಿಸಿತು. ಅದಕ್ಕೆ ರಾತ್ರೋರಾತ್ರಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿದ್ದಾರೆ. 140 ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಗೆದ್ದಿದೆ. ಇದು ಅವರ ಹೊಟ್ಟೆಗೆ ಹಸಿರು ಮೆಣಸಿನಕಾಯಿ ಕಿವುಚಿದಂತಾಗಿದೆ. ಅದಕ್ಕೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿದ್ದಾರೆ. ಈ ಸರ್ಕಾರ ಬಿದ್ರೆ, ಅವರ ಶಾಸಕರೇ ಕಾರಣ. ಬಾಯಿ ಮುಚ್ಕೊಂಡಿರಿ ಅಂದ್ರೆ ಯಾರು ಸಹಿಸ್ತಾರೆ ಎಂದು ವಾಗ್ದಾಳಿ ನಡೆಸಿದರು.

ನಾಳೆ ವಿಜಯೇಂದ್ರ ಹಾಗೂ ನನ್ನ ನೇತೃತ್ವದಲ್ಲಿ ಫ್ರೀಡಂ ಪಾರ್ಕಿನಲ್ಲಿ ಬೆಳಗ್ಗೆ 11.30ಕ್ಕೆ ಪ್ರತಿಭಟನೆ ಮಾಡುತ್ತೇವೆ. ದರ ಹೆಚ್ಚಳ ಆದಾಗ ಜನ ಬಾಯಿಗೆ ಬಂದಂತೆ ಬೈತಿದ್ರು. ಟಕಾ ಟಕ್ ಅಂತ ಹಣ ಹಾಕ್ತೀವಿ ಅಂದ್ರು. ರಾಹುಲ್ ಗಾಂಧಿಗೆ ನಾಚಿಕೆ ಆಗಬೇಕು. ಯಾವ ಮುಖ‌ ಇಟ್ಟುಕೊಂಡು ಇಲ್ಲಿಗೆ ಬರ್ತಾರೋ?. ಕರ್ನಾಟಕದಲ್ಲಿ ಕಾಂಗ್ರೆಸ್ ಶನಿ ಸಂತಾನ ಆಗಿದೆ. ಸಿದ್ದರಾಮಯ್ಯ ದ್ವೇಷ ರಾಜಕಾರಣ ಮಾಡ್ತಿದ್ದಾರೆ. ಮತದಾರ ಪ್ರಭು ಮತದಾನ ಮಾಡಿಲ್ಲ ಅಂತ ಕರ್ನಾಟಕ ಜನರ ಮೇಲೆ ದ್ವೇಷ ಮಾಡ್ತಿದ್ದಾರೆ. ಹಿಂದೆ ನಮ್ಮ‌ ಸರ್ಕಾರ ದರ ಹೆಚ್ಚಳ‌ ಆದಾಗ ತೆರಿಗೆ ಕಡಿಮೆ ಮಾಡಿದ್ದೆವು. ನೀವೂ ಕೂಡ ದರ ಕಡಿಮೆ ಮಾಡಬೇಕು ಅಂತ‌ ಆಗ್ರಹ ಮಾಡ್ತೀವಿ. ಕರ್ನಾಟಕದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಹೋಗಿದೆ ಎಂದು ದೂರಿದರು.

ಬಿಡಿಎ ಕಮರ್ಷಿಯಲ್ ಕಾಂಪ್ಲೆಕ್ಸ್ ಮೂಲಕ ಆದಾಯ ಬರಲು‌ ಕಾಂಪ್ಲೆಕ್ಸ್ ಕಟ್ಟಿದ್ರು. ಅದನ್ನ ಮಾರಾಟ ಮಾಡಲು ಹೊರಟಿದ್ದಾರೆ. ಕಮೀಷನ್ ಹೊಡೆಯಲು ದುಡ್ಡಿಲ್ಲ. ಬಿಬಿಎಂಪಿಗೆ ನಾಲ್ಕು ಸಾವಿರ ಕೋಟಿ ಸಾಲ ಮಾಡ್ತಿದ್ದಾರೆ. ಕಾರ್ಪೊರೇಷನ್ ಬಿಲ್ಡಿಂಗ್, ಯುಟಿಲಿಟಿ ಬಿಲ್ಡಿಂಗ್, ವಾರ್ಡ್ ಆಫೀಸ್ ಅಡ ಇಡೋಕೆ ನೀಲಿ ನಕ್ಷೆ ತಯಾರು ಮಾಡ್ತಿದ್ದಾರೆ. ವರ್ಲ್ಡ್ ಬ್ಯಾಂಕ್ ಅಥವಾ ನ್ಯಾಷನಲ್ ಬ್ಯಾಂಕಿಗೆ ಅಡ ಇಡೋಕೆ ರೆಡಿಯಾಗಿದ್ದಾರೆ. BWSSB ಕೂಡ ಒಂದು ಸಾವಿರ ಕೋಟಿ ಸಾಲ ಮಾಡಲು ಹೊರಟಿದೆ. ಎಲ್ಲವನ್ನೂ ಅಡ ಇಡೋಕೆ ತಯಾರಿ ಮಾಡಿಕೊಂಡಿದ್ದಾರೆ. ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸರ್ವನಾಶಕ್ಕೆ ಸಿದ್ದರಾಮಯ್ಯ ದಾರಿ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಹಳೆ ವಿಡಿಯೋ ಬಿಡುಗಡೆ ಮಾಡಿದ ಅಶೋಕ್: ನಾವು ಅಧಿಕಾರಕ್ಕೆ ಬಂದ್ರೆ ಗೊಬ್ಬರ ಬೆಲೆ, ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡೋದಾಗಿ ಹೇಳಿ ಭಾಷಣ ಮಾಡಿದ್ದ ಸಿದ್ದರಾಮಯ್ಯ ಅವರ ವಿಡಿಯೋ ಬಿಡುಗಡೆ ಮಾಡಿದರು. ಪೆಟ್ರೋಲ್ ದರ ಹೆಚ್ಚಳವಾದಾಗ ಸಿದ್ದರಾಮಯ್ಯ ಮಾಡಿದ್ದ ಭಾಷಣದ ವಿಡಿಯೋ ದಾಖಲೆ ಕೂಡ ಬಿಡುಗಡೆ ಮಾಡಿದ ವಿಪಕ್ಷ ನಾಯಕ‌ ಅಶೋಕ್, ಬೈಕ್ ಶವಯಾತ್ರೆ ಮಾಡಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ‌.ಶಿವಕುಮಾರ್ ಅವರ ಫೋಟೋ ರಿಲೀಸ್ ಮಾಡಿದರು.

ಓದಿ:'ಅವು ಯಾರೂ ಪರಿಶೀಲಿಸಲಾಗದ ಕಪ್ಪು ಪೆಟ್ಟಿಗೆಗಳು': ಇವಿಎಂ ವಿರುದ್ಧ ರಾಹುಲ್ ಗಾಂಧಿ ಕಿಡಿ - Rahul Gandhi Criticize EVM

ABOUT THE AUTHOR

...view details