ಕರ್ನಾಟಕ

karnataka

ETV Bharat / state

ಗುತ್ತಿಗೆ ಹಗರಣ: ನ್ಯಾ.ನಾಗಮೋಹನ್​ ದಾಸ್​ ಆಯೋಗಕ್ಕೆ 6 ವಾರಗಳಲ್ಲಿ ತನಿಖೆ ಪೂರ್ಣಗೊಳಿಸಲು ಹೈಕೋರ್ಟ್​ ಸೂಚನೆ - ಗುತ್ತಿಗೆ ಕಂಪೆನಿಗಳು

ತನಿಖೆ ಕುರಿತು ವರದಿ ನೀಡಲು ಇದೇ ಕೊನೆಯ ಅವಕಾಶವಾಗಿದ್ದು, ಮತ್ತೊಂದು ಅವಕಾಶ ನೀಡಲಾಗುವುದಿಲ್ಲ ಎಂದು ಹೈಕೋರ್ಟ್​ ಏಕವ್ಯಕ್ತಿ ಆಯೋಗಕ್ಕೆ ಸೂಚನೆ ನೀಡಿದೆ.

High Court
ಹೈಕೋರ್ಟ್​

By ETV Bharat Karnataka Team

Published : Feb 13, 2024, 7:33 PM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿರುವ ಹಗರಣ ಕುರಿತಂತೆ ತನಿಖೆ ನಡೆಸಲು ಸರ್ಕಾರವು ರಚಿಸಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕವ್ಯಕ್ತಿ ಆಯೋಗದಿಂದ ತನಿಖೆ ಪೂರ್ಣಗೊಳಿಸಲು ಹೈಕೋರ್ಟ್ ಆರು ವಾರಗಳ ಕಾಲ ಕೊನೆಯ ಅವಕಾಶ ನೀಡಿದೆ.

ಗುತ್ತಿಗೆ ಕಾಮಗಾರಿ ಪೂರ್ಣಗೊಳಿಸಿದ್ದರೂ ಹಣ ಬಿಡುಗಡೆ ಮಾಡದೆ, ನಾಗಮೋಹನದಾಸ್​ ನೇತೃತ್ವದ ತನಿಖಾ ಆಯೋಗ ರಚನೆ ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಮೆರ್ಸಸ್ ನಿಕ್ಷೇಪ್ ಇನ್ಫ್ರಾ ಪ್ರಾಜೆಕ್ಟ್ಸ್ ಸೇರಿದಂತೆ ಹಲವು ಗುತ್ತಿಗೆ ಕಂಪೆನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಅರ್ಜಿಗಳ ವಿಚಾರಣೆ ನಡೆಸಿತು.

ಅಲ್ಲದೆ, ಕೆಲಸ ಮಾಡದೇ ಬಿಲ್ ನೀಡಿ ಎಂದು ಸೂಚನೆ ನೀಡುವುದು ಸರಿಯಲ್ಲ. ಆದರೆ, ಕಾಮಗಾರಿ ಪೂರ್ಣಗೊಂಡಿದ್ದರೂ ಯಾಕೆ ಬಿಲ್​ ಪಾವತಿ ಮಾಡುತ್ತಿಲ್ಲ. ಕೆಲಸ ಮಾಡಿಲ್ಲವೆಂದರೆ ಬಿಲ್​ ತಡೆಹಿಡಿದರೆ ಅರ್ಥವಿದೆ. ಕಾಮಗಾರಿ ಮುಗಿದ ಮೇಲೂ ಬಿಲ್​ ನೀಡುತ್ತಿಲ್ಲ. ಇನ್ನೂ ಎಷ್ಟು ದಿನ ತನಿಖೆ ನಡೆಯಬೇಕು ಎಂದು ಪೀಠ ಪ್ರಶ್ನೆ ಮಾಡಿತು.

ಜತೆಗೆ, ಇದೇ ಕೊನೆಯ ಅವಕಾಶವಾಗಿದ್ದು, ಮತ್ತೊಂದು ಅವಕಾಶ ನೀಡಲಾಗುವುದಿಲ್ಲ. ಒಂದು ವೇಳೆ‌ ಮುಂದಿನ ವಿಚಾರಣೆ ವೇಳೆಗೆ ವಿಚಾರಣಾ ವರದಿ ನೀಡದಿದ್ದಲ್ಲಿ ಸೂಕ್ತ ಆದೇಶ ಮಾಡಲಾಗುವುದು. ವಿಚಾರಣಾ ವರದಿ ನೀಡದಿದ್ದಲ್ಲಿ ಶೇ. 100 ಬಿಲ್‌ ಪಾವತಿಗೆ ಹೈಕೋರ್ಟ್ ಆದೇಶ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಿತು.

ವಿಚಾರಣೆ ವೇಳೆ ಹಾಜರಾಗಿದ್ದ ಅಡ್ವೋಕೇಟ್​ ಜನರಲ್​ ಶಶಿಕಿರಣ್​ ಶೆಟ್ಟಿ, "ಆರೋಪ ಇರುವ ಕಾಮಗಾರಿಗಳಲ್ಲಿ ಶೇ. 50 ಬಿಲ್ ನೀಡಲಾಗಿದೆ. ಆರೋಪ ಇಲ್ಲದ ಕಾಮಗಾರಿಗಳಲ್ಲಿ ಶೇ.75 ಬಿಲ್ ಮಂಜೂರು ಮಾಡಲಾಗಿದೆ" ಎಂದು ವಿವರಿಸಿದರು.

ಇದಕ್ಕೂ ಮುನ್ನ ಬೆಳಗ್ಗೆ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಸರ್ಕಾರದ ಅಧಿಕಾರಿಗಳು ನಿವೃತ್ತ ನ್ಯಾ. ನಾಗಮೋಹನ್ ದಾಸ್ ಅವರ ಏಕಸದಸ್ಯ ಸಮಿತಿಗೆ ವಿಳಂಬವಾಗಿ ದಾಖಲೆಗಳನ್ನು ತನಿಖೆಗಾಗಿ ಸಲ್ಲಿಸಿದ್ದಾರೆ. ಹೀಗಾದರೆ ಬಂಡವಾಳ ಹೂಡಿಕೆ ಮಾಡಿರುವ ಗುತ್ತಿಗೆದಾರರ ಸ್ಥಿತಿ ಏನಾಗಬೇಕು? ಎಂದು ಪ್ರಶ್ನಿಸಿದರು.

ದಾಖಲೆಗಳನ್ನು ಸಲ್ಲಿಸಬೇಕಾಗಿರುವ ಕರ್ತವ್ಯದಲ್ಲಿ ಲೋಪ ಎಸಗಿರುವ ನೋಡಲ್ ಅಧಿಕಾರಿ ಯಾರು? ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಅಲ್ಲದೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಕೆಲಸ ಮಾಡಲಾಗಿದೆ ಎಂಬ ಕಾರಣಕ್ಕೆ ಬಿಲ್ ಪಾವತಿ ತಡೆ ಹಿಡಿಯಲಾಗುತ್ತಿದೆಯೇ ಎಂದು ಪ್ರಶ್ನಿಸಿತು? ಇದಕ್ಕೆ ಪ್ರತಿಕ್ರಿಯಿಸಿದ ಶಶಿಕಿರಣ್ ಶೆಟ್ಟಿ, "ಹಿಂದಿನ ಸರ್ಕಾರದಲ್ಲಿ ಕೆಲಸ ಮಾಡಲಾಗಿದೆ ಎಂಬ ಕಾರಣಕ್ಕಾಗಿ ಬಿಲ್ ಪಾವತಿ ತಡೆ ಹಿಡಿಯಲಾಗಿಲ್ಲ. ಕೆಲವೊಂದು ವಿಚಾರಗಳನ್ನು ಬಹಿರಂಗವಾಗಿ ಹೇಳಲಾಗದು" ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿ, ಅರ್ಜಿದಾರ ಗುತ್ತಿಗೆದಾರ ಸಾಲ ಮಾಡಿ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ. ಪರಿಸ್ಥಿತಿ ಕೆಟ್ಟದಾಗಿದೆ ಎಂದು ತಿಳಿಸಿದರು.

ಪ್ರಕರಣದ ಹಿನ್ನೆಲೆ ಏನು?:ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿದ್ದ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್​ ದಾಸ್​ ನೇತೃತ್ವದಲ್ಲಿ ಏಕವ್ಯಕ್ತಿ ತನಿಖಾ ಆಯೋಗವನ್ನು ರಚಿಸಿ, 2023ರ ಆಗಸ್ಟ್ 5ರಂದು ಸರ್ಕಾರ ಆದೇಶಿಸಿತ್ತು. ಸರ್ಕಾರದ ಈ ಆದೇಶವನ್ನು ಮೆರ್ಸಸ್ ನಿಕ್ಷೇಪ್ ಇನ್ಫ್ರಾ ಪ್ರಾಜೆಕ್ಟ್ಸ್ ಸೇರಿದಂತೆ ಹಲವು ಗುತ್ತಿಗೆ ಕಂಪೆನಿಗಳು ಪ್ರಶ್ನಿಸಿದ್ದವು.

ಇದನ್ನೂ ಓದಿ:ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದ ಸರ್ಕಾರ: ಹೈಕೋರ್ಟ್ ಅಸಮಾಧಾನ

ABOUT THE AUTHOR

...view details