ಕರ್ನಾಟಕ

karnataka

ETV Bharat / state

ಬೇಲೆಕೇರಿ ಅದಿರು ನಾಪತ್ತೆ ಕೇಸ್​: 'ತೀರ್ಪು ನ್ಯಾಯಾಂಗದ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಿಸುವಂತದ್ದು': ಸಂತೋಷ್​ ಹೆಗ್ಡೆ

ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆ ಪ್ರಕಟಗೊಂಡಿರುವ ಬಗ್ಗೆ ಕೇಸ್​ನ ತನಿಖೆ ಕೈಗೊಂಡಿದ್ದ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್​​ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದಾರೆ.

santosh hegde
ಸಂತೋಷ್​ ಹೆಗ್ಡೆ (ETV Bharat)

By ETV Bharat Karnataka Team

Published : 4 hours ago

ಬೆಂಗಳೂರು: ''ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿರುವುದು ತಡವಾಗಿರಬಹುದು. ಆದರೆ ತಡವಾಗಿ ಶಿಕ್ಷೆ ದೊರೆತಾಗ ಅದನ್ನು ಅನುಭವಿಸುವುದೂ ಸಹ ಅಷ್ಟೇ ಕಷ್ಟಕರವಾಗಿರುತ್ತದೆ'' ಎಂದು ಈ ಪ್ರಕರಣದ ತನಿಖೆ ಕೈಗೊಂಡಿದ್ದ ಅಂದಿನ ಲೋಕಾಯುಕ್ತ ನ್ಯಾ. ಸಂತೋಷ್​​ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿದ ಅವರು, ''ಸಮಾಜದಲ್ಲಿ ಜನಸಾಮಾನ್ಯರೇ ಆಗಲಿ, ಜನನಾಯಕರೇ ಆಗಲಿ, ಕಾನೂನು ಎಲ್ಲರಿಗೂ ಒಂದೇ ಆಗಿದೆ. ಈ ಪ್ರಕರಣದ ತೀರ್ಪು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸುವಂತದ್ದು. ಮತ್ತು ಈ ತೀರ್ಪಿನ ಕುರಿತು ಸಂತಸವಿದೆ. ಮುಂದಿನ ದಿನಗಳಲ್ಲಿಯೂ ಸಹ ಯಾರೇ ತಪ್ಪಿತಸ್ಥರಾಗಿದ್ದರೂ, ಸಹ ಕಾನೂನಿನ ಅನ್ವಯ ಶಿಕ್ಷಾರ್ಹರಾಗಿರುತ್ತಾರೆ ಎಂಬುದನ್ನು ಮೊದಲೇ ಅರಿತಿರಬೇಕಾಗುತ್ತದೆ'' ಎಂದು ತಿಳಿಸಿದರು.

2009-10ರಲ್ಲಿ ನಡೆದಿದ್ದ ಪ್ರಕರಣವನ್ನು ಅಕ್ರಮ ಗಣಿಗಾರಿಕೆ ತನಿಖೆಯ ವೇಳೆ ಬೆಳಕಿಗೆ ತಂದಿದ್ದ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಸಮಗ್ರ ತನಿಖೆ ನಡೆಸಿ, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ನ್ಯಾಯಾಲಯದ ತೀರ್ಪು ಏನು?:ಪ್ರಕರಣ ಸಂಬಂಧ ಶನಿವಾರ (ಅ.26) ತೀರ್ಪು ಪ್ರಕಟಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ ಹಾಗೂ ಇತರರಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ಅಪರಾಧಿಗಳಿಗೆ ವಂಚನೆ ಪ್ರಕರಣದಲ್ಲಿ 7 ವರ್ಷ, ಒಳಸಂಚು ಪ್ರಕರಣದಲ್ಲಿ 5 ವರ್ಷ ಮತ್ತು ಕಳ್ಳತನ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈಗಾಗಲೇ ಜೈಲಿನಲ್ಲಿ ಕಳೆದಿರುವ ಶಿಕ್ಷೆ ಪ್ರಮಾಣವನ್ನು ಹೊರತುಪಡಿಸಿ, ಉಳಿದ ಶಿಕ್ಷೆಯನ್ನು ದೋಷಿತರು ಅನುಭವಿಸಬೇಕಿದೆ.

ಕಾಂಗ್ರೆಸ್ ಶಾಸಕ ಸತೀಶ್ ಸೈಲ್, ಡೆಪ್ಯೂಟಿ ಫೋರ್ಟ್ ಕನ್ಸರ್ವೇಟರ್ ಅಧಿಕಾರಿ ಮಹೇಶ್ ಬಿಳಿಯೆ, ಲಾಲ್ವುಹಲ್ ಕಂಪನಿಯ ಮಾಲೀಕ ಪ್ರೇಮಚಂದ್ ಗರ್ಗ್, ಶ್ರೀಲಕ್ಷ್ಮಿ ವೆಂಕಟೇಶ್ವರ ಟ್ರೇಡರ್ಸ್ ಮಾಲೀಕ ಖಾರದಪುಡಿ ಮಹೇಶ್, ಸ್ವಸ್ತಿಕ್ ಕಂಪನಿಯ ಮಾಲೀಕ ಕೆ. ವಿ. ನಾಗರಾಜ್ ಮತ್ತು ಗೋವಿಂದರಾಜು, ಆಶಾಪುರ ಕಂಪನಿಯ ಮಾಲೀಕ ಚೇತನ್ ಹಾಗೂ ಐಎಲ್‌ಸಿ ಕಂಪೆನಿಯ ಮಾಲೀಕ ಸೋಮಶೇಖರ್ (ಮೃತಪಟ್ಟಿದ್ದಾರೆ) ಎಂಬುವರಿಗೆ ಶಿಕ್ಷೆ ವಿಧಿಸಲಾಗಿದೆ.

ಇದೇ ವೇಳೆ, ಎಲ್ಲಾ ದೋಷಿತರ ವಿರುದ್ಧದ 6 ಪ್ರಕರಣಗಳ ಸಂಬಂಧ ಒಟ್ಟಾರೆ 40 ಕೋಟಿ ರೂ.ಗೂ (6 ಕೋಟಿ ರೂ., 9 ಕೋಟಿ ರೂ., 9 ಕೋಟಿ ರೂ., 9.52 ಕೋಟಿ ರೂ., 9.25 ಕೋಟಿ ರೂ. ಹಾಗೂ 90 ಲಕ್ಷ ರೂ.) ಅಧಿಕ ದಂಡವನ್ನು ಸಹ ನ್ಯಾಯಾಲಯ ವಿಧಿಸಿದೆ. ಜೊತೆಗೆ, ದಂಡದ ಹಣವನ್ನು ಜಪ್ತಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್​ ಆದೇಶಿಸಿದೆ.

ಇದನ್ನೂ ಓದಿ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಶಾಸಕ ಸತೀಶ್ ಸೈಲ್‌ ಸೇರಿ ಏಳು ಮಂದಿಗೆ 7 ವರ್ಷ ಜೈಲೇ ಗತಿ

ABOUT THE AUTHOR

...view details