ಕರ್ನಾಟಕ

karnataka

ನ್ಯಾಯಬೆಲೆ ಅಂಗಡಿ ಅಕ್ಕಿ ಹೋಟೆಲ್‌ಗಳಿಗೆ ಮಾರಾಟ: ಹೈಕೋರ್ಟ್ ತೀವ್ರ ಅಸಮಾಧಾನ - High Court

By ETV Bharat Karnataka Team

Published : Jul 5, 2024, 6:45 AM IST

ಕಳ್ಳಸಾಗಣೆದಾರರನ್ನು ಪತ್ತೆಹಚ್ಚಿದಾಗ ಅವರ ವಿರುದ್ಧ ತಕ್ಕ ಕ್ರಮ ಕೈಗೊಳ್ಳುವಂತಹ ಅಧಿಕಾರ ಸ್ಥಳೀಯ ಜಿಲ್ಲಾಧಿಕಾರಿಗಳಿಗೆ ಇರುತ್ತದೆ. ಆದರೆ ಅವರನ್ನು ಬಚಾವು ಮಾಡುವಂತಹ ವ್ಯವಸ್ಥೆಯೂ ಜೊತೆಯಲ್ಲಿಯೇ ಇರುತ್ತದೆ ಎಂದು ಹೈಕೋರ್ಟ್ ಪೀಠ ಬೇಸರ ವ್ಯಕ್ತಪಡಿಸಿತು.​

HighCourt
ಹೈಕೋರ್ಟ್​ (ETV Bharat)

ಬೆಂಗಳೂರು: ಬಡತನ ರೇಖೆಗಿಂತಲೂ ಕೆಳ ವರ್ಗದವರಿಗಾಗಿ ರೂಪಿಸಲಾಗಿರುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಹೋಟೆಲ್​ಗಳಿಗೆ ಮಾರಾಟ ಮಾಡುವ ಮಾಫಿಯಾದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೊರ್ಟ್, ಈ ರೀತಿಯ ಆರೋಪಿಗಳ ವಿರುದ್ಧ ಆಯಾ ಜಿಲ್ಲಾಧಿಕಾರಿಗಳು ನಿಗಾ ವಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ತಿಳಿಸಿದೆ.

ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಈ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತಲ್ಲದೆ, ಅಕ್ಕಿ ಕಳ್ಳಸಾಗಣೆ ಮಾಡುವ ಡಾನ್​ಗಳನ್ನು ರಾಜಕಾರಣಿಗಳು ರಕ್ಷಿಸಲು ಮುಂದಾಗಿ ಅವರ ಬೆನ್ನಿಗೆ ನಿಲ್ಲುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಳ್ಳಸಾಗಣೆದಾರರು ಸರಕುಪಟ್ಟಿ, ಸಿ ಫಾರಂ ಮತ್ತು ರಸೀದಿಯಂತಹ ಅಗತ್ಯ ದಾಖಲೆಗಳಿಲ್ಲದೆ ಅಕ್ಕಿಯನ್ನು ಲಾರಿಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುತ್ತಾರೆ. ಇಂತಹವರನ್ನು ಪತ್ತೆ ಹಚ್ಚಿದಾಗ ಅವರ ವಿರುದ್ಧ ತಕ್ಕ ಕ್ರಮ ಕೈಗೊಳ್ಳುವ ಅಧಿಕಾರ ಸ್ಥಳೀಯ ಜಿಲ್ಲಾಧಿಕಾರಿಗಳಿಗೆ ಇರುತ್ತದೆ. ಆದರೆ, ಅವರನ್ನು ಬಚಾವು ಮಾಡುವಂತಹ ವ್ಯವಸ್ಥೆ ಜೊತೆಯಲ್ಲಿಯೇ ಇರಲಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಕಾನೂನನ್ನು ಎಷ್ಟೇ ಬಿಗಿಗೊಳಿಸಿದರೂ ಇಂದು ಕಳ್ಳಸಾಗಣೆದಾರರು, ನನಗೆ ನೀನು ರಕ್ಷಣೆ ಮಾಡು ನಿನ್ನನ್ನು ನಾನು ರಕ್ಷಣೆ ಮಾಡುತ್ತೇನೆ ಎನ್ನುವ ಮಟ್ಟಕ್ಕೆ ಇಳಿದಿದ್ದಾರೆ. ಅನ್ನಭಾಗ್ಯದಲ್ಲಿ ನನ್ನ ನಿಮ್ಮ ದುಡ್ಡು ಅಡಗಿರುತ್ತದೆ. ಸರ್ಕಾರ ಅದಕ್ಕೆ ಸಬ್ಸಿಡಿ ನೀಡುವ ಮೂಲಕ ಬಡವರ ಕಲ್ಯಾಣಕ್ಕೆಂದು ಯೋಜನೆ ಜಾರಿಗೊಳಿಸಿರುತ್ತದೆ. ಇದನ್ನು ಯಾರೂ ಮರೆಯಬಾರದು ಎಂದು ಪೀಠ ತಿಳಿಸಿತು.

ಕೆಲವು ಮಂದಿ ತಮ್ಮ ತಂದೆ-ತಾತ ಮಾಡಿದ ಪುಣ್ಯದಿಂದ ಇವತ್ತು ಸಮಾಜದಲ್ಲಿ ಉತ್ತಮ ಸ್ಥಾನಮಾನ ಅನುಭವಿಸುತ್ತಿದ್ದಾರೆ. ಆದರೆ, ಬಡವರಿಗೆ ಅಂತಹ ಭಾಗ್ಯ ಇರುವುದಿಲ್ಲ. ನಾವೆಲ್ಲಾ ಇಂತಹ ಬಡವರ ಪಾಲಿನ ಕಲ್ಯಾಣ ಕಾರ್ಯಕ್ರಮದ ಅಕ್ಕಿ ಕಾಳಸಂತೆಯಲ್ಲಿ ಹೋಟೆಲ್​ಗಳಿಗೆ ಹೋಗುವುದನ್ನು ನೋಡುತ್ತಾ ಕುಳಿತರೆ ಹೇಗೆ ಎಂದು ಪೀಠ ಪ್ರಶ್ನಿಸಿತು..

ಇದನ್ನೂ ಓದಿ:ಬೆಳ್ತಂಗಡಿ ವಿದ್ಯಾರ್ಥಿನಿ ಹತ್ಯೆ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್ - Belthangady Student Murder Case

ABOUT THE AUTHOR

...view details