ಕರ್ನಾಟಕ

karnataka

ETV Bharat / state

2ನೇ ಮಗು ಪಡೆಯಲು ಅಡ್ಡಿಯಾದ ಬಾಡಿಗೆ ತಾಯ್ತನ ಕಾಯಿದೆಯ ಸೆಕ್ಷನ್‌ಗಳ​ ರದ್ದತಿಗೆ ಅರ್ಜಿ: ಸರ್ಕಾರಕ್ಕೆ ನೋಟಿಸ್​ - SURROGACY ACT

ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ-2021ರ ವಿವಿಧ ಸೆಕ್ಷನ್‌ಗಳನ್ನು​ ರದ್ದು ಮಾಡುವಂತೆ ಕೋರಿ ಸಲ್ಲಿಕೆಯಾದ ಅರ್ಜಿ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್​ ಜಾರಿ ಮಾಡಿದೆ.

HIGH COURT
ಹೈಕೋರ್ಟ್ (ETV Bharat)

By ETV Bharat Karnataka Team

Published : Jan 9, 2025, 8:12 AM IST

ಬೆಂಗಳೂರು: ಎರಡನೇ ಮಗುವಿಗಾಗಿ ಬಾಡಿಗೆ ತಾಯ್ತನದ ಚಿಕಿತ್ಸೆ ಪಡೆಯಲು ಅವಕಾಶ ನೀಡದ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ-2021ರ ವಿವಿಧ ಸೆಕ್ಷನ್​ಗ​ಳ ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿದೆ.

ಕಾಯಿದೆಯ ಸೆಕ್ಷನ್ 4 (iii) ಸಿ (II) ರದ್ದುಪಡಿಸುವಂತೆ ಕೋರಿ ಎರಡನೇ ಮಗು ಪಡೆದುಕೊಳ್ಳಲು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಆಂಧ್ರ ಮೂಲದ ಬೆಂಗಳೂರಿನ ದಂಪತಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಜ್ಯ ಆರೋಗ್ಯ ಇಲಾಖೆಯ ಬಾಡಿಗೆ ತಾಯ್ತನ ಕಾಯ್ದೆಗೆ ಸಂಬಂಧಿಸಿದ ಕರ್ನಾಟಕ ರಾಜ್ಯ ಸಕ್ಷಮ ಪ್ರಾಧಿಕಾರ, ಬೆಂಗಳೂರು ಜಿಲ್ಲಾ ವೈದ್ಯಕೀಯ ಮಂಡಳಿಗೆ ನೋಟಿಸ್ ಜಾರಿಗೊಳಿಸಿತು. ಆಕ್ಷೇಪಣೆ ಸಲ್ಲಿಸಲು ಕೇಂದ್ರ ಸರ್ಕಾರದ ಪರ ವಕೀಲರು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಿತು.

ಅರ್ಜಿದಾರರ ಮನವಿ:ದಂಪತಿ 2016ರಲ್ಲಿ ಮದುವೆಯಾಗಿ, 2017ರಲ್ಲಿ ಸಹಜ ಗರ್ಭಧಾರಣೆ ಮೂಲಕ ಅವರಿಗೆ ಗಂಡು ಮಗು ಜನಿಸಿತ್ತು. ವೈದ್ಯಕೀಯ ಕಾರಣಗಳಿಂದಾಗಿ ಎರಡನೇ ಗರ್ಭಧಾರಣೆ ಸಾಧ್ಯವಾಗಿಲ್ಲ. 2019ರಲ್ಲಿ ಗರ್ಭಪಾತವಾಗಿತ್ತು. 2021ರ ಜೂನ್‌ನಲ್ಲಿ ಬಾಡಿಗೆ ತಾಯ್ತನದ ಚಿಕಿತ್ಸೆ ಆರಂಭಿಸಿದ್ದರು. ಅದಕ್ಕಾಗಿ ಅಗತ್ಯ ವೈದ್ಯಕೀಯ ತಪಾಸಣೆಗಳು ಮತ್ತಿತರ ಪ್ರಕ್ರಿಯೆಗಳನ್ನು ಪೂರೈಸಿ ಹಣ ಸಹ ಪಾವತಿಸಿದ್ದರು.

2021ರ ಡಿಸೆಂಬರ್‌ಗೆ ಎಲ್ಲಾ ಪ್ರಕ್ರಿಯೆಗಳು ಮಗಿಸಲಾಗಿದೆ. ಈ ನಡುವೆ ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆ-2021 ಅಧಿಕೃತವಾಗಿ 2022ರ ಜ.25ರಿಂದ ಜಾರಿಗೆ ಬಂದಿದೆ. ಅದರಲ್ಲಿ ಎರಡನೇ ಮಗುವಿಗಾಗಿ ಬಾಡಿಗೆ ತಾಯ್ತನ ಚಿಕಿತ್ಸೆಗೆ ಅವಕಾಶ ಇಲ್ಲ. ಆದರೆ, ಕಾಯ್ದೆ ಜಾರಿಗೆ ಬರುವುದಕ್ಕೆ ಮೊದಲೇ ನಾವು ಚಿಕಿತ್ಸೆಯನ್ನು ಅಳವಡಿಸಿಕೊಂಡಿದ್ದೇವೆ ಎಂದು ದಂಪತಿ ಅರ್ಜಿಯಲ್ಲಿ ವಿವರಿಸಿದ್ದರು.

ಆದ್ದರಿಂದ ಎರಡನೇ ಮಗುವಿಗಾಗಿ ಬಾಡಿಗೆ ತಾಯ್ತನದ ಚಿಕಿತ್ಸೆ ಪಡೆಯಲು ಅವಕಾಶ ನೀಡದ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ-2021ರ ಸೆಕ್ಷನ್ 4 (iii) ಸಿ (II) ರದ್ದುಪಡಿಸಬೇಕು. ಅಲ್ಲದೆ, ಕಾಯ್ದೆಯ ನಿಯಮಗಳನ್ನು ಪಾಲಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಬಾಡಿಗೆ ತಾಯ್ತನ ಪ್ರಮಾಣಪತ್ರ ಹಾಗೂ ಇತರೆ ಅರ್ಹತಾ ಪ್ರಮಾಣಪತ್ರಗಳನ್ನು ಒದಗಿಸುವಂತೆ ಸಕ್ಷಮ ಪ್ರಾಧಿಕಾರ ಹಾಗೂ ಜಿಲ್ಲಾ ವೈದ್ಯಕೀಯ ಮಂಡಳಿಗೆ ನಿರ್ದೇಶನ ನೀಡಬೇಕು. ಎರಡನೇ ಮಗು ಪಡೆದುಕೊಳ್ಳಲು ಬಾಡಿಗೆ ತಾಯ್ತನ ಚಿಕಿತ್ಸೆಗೆ ಒಳಗಾಗಲು ತಮಗೆ ಅವಕಾಶ ಮಾಡಿಕೊಡಬೇಕು ಎಂದು ಅರ್ಜಿದಾರ ದಂಪತಿ ಮನವಿ ಮಾಡಿದ್ದರು.

ಇದನ್ನೂ ಓದಿ:ಕದ್ದ ಚಿನ್ನಾಭರಣ ಅಡಮಾನ; ಪರಿಣಾಮ, ಕ್ರಿಮಿನಲ್ ಪ್ರಕ್ರಿಯೆಗೆ ಮಾರ್ಗಸೂಚಿ ರಚಿಸಲು ಹೈಕೋರ್ಟ್ ಮನವಿ

ABOUT THE AUTHOR

...view details