ಕಾರವಾರ (ಉತ್ತರ ಕನ್ನಡ) : ಅಂಕೋಲಾದ ಬಾವಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಣಿ ಗ್ರಾಮದಲ್ಲಿ ಬಂದರು ನಿರ್ಮಾಣ ಸಂಬಂಧ ಜಿಯೋ ಟೆಕ್ನಿಕಲ್ ಇನ್ವೆಸ್ಟಿಗೇಷನ್ ವರ್ಕ್ ಕೈಗೊಂಡ ಕಾರಣ ಈ ಪ್ರದೇಶ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯ ಆದೇಶ ಹೊರಡಿಸಿದ್ದಾರೆ. ಆದರೆ ನಿಷೇಧಾಜ್ಞೆ ನಡುವೆಯೂ ಕೇಣಿ ಕಡಲ ತೀರದಲ್ಲಿ ನೂರಾರು ಜನರು ಸೇರಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
Geotechnical Investigation Work ಕಾಮಗಾರಿ ಸಂಬಂಧ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾವಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳು ಮತ್ತು ಪುರಸಭೆ ಅಂಕೋಲಾ ವ್ಯಾಪ್ತಿಗೊಳಪಟ್ಟ ಕೇಣಿ ಗ್ರಾಮದಲ್ಲಿ ಇಂದು (ಫೆ. 24) ಬೆಳಗ್ಗೆ 6 ಗಂಟೆಯಿಂದ ನಾಳೆ (ಫೆ. 25) ಸಂಜೆ 6 ಗಂಟೆಯವರೆಗೆ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಕಾಯ್ದೆ 2023 ಕಲಂ 163 ರನ್ವಯ ನಿಬಂಧನೆಗೊಳಪಟ್ಟು ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯ ಆದೇಶಿಸಿದ್ದಾರೆ.
ನಿಷೇಧಾಜ್ಞೆ ಆದೇಶ ಲೆಕ್ಕಿಸದೇ ಕಡಲತೀರದಲ್ಲಿ ಸೇರಿದ ಜನ (ETV Bharat) ಈ ಅವಧಿಯಲ್ಲಿ, ಗರಿಷ್ಠ/ಕನಿಷ್ಠ 5 ಹಾಗೂ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಒಂದೆಡೆ ಧರಣಿ ಹಾಗೂ ಪ್ರತಿಭಟನೆ ಉದ್ದೇಶಕ್ಕೆ ಸೇರುವುದನ್ನು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುವಂತೆ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿಗಳು/ಗುಂಪುಗಳು ಆಯುಧ, ದೊಣ್ಣೆ, ಕತ್ತಿ, ಈಟಿ, ಗದೆ, ಬಂದೂಕುಗಳು, ಕುಡುಗೋಲು, ಚಾಕುಗಳು, ಕೋಲುಗಳು ಅಥವಾ ಲಾಠಿಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಲಾಗಿದೆ. ಯಾವುದೇ ಕ್ಷಾರಕ ಪದಾರ್ಥ ಅಥವಾ ಸ್ಫೋಟಕಗಳನ್ನು ಒಯ್ಯುವುದನ್ನು ನಿಷೇಧಿಸಿದೆ. ಕಲ್ಲುಗಳನ್ನು ಅಥವಾ ಇತರ ಕ್ಷಿಪಣಿಗಳನ್ನು ಎಸೆಯುವ ಅಥವಾ ವೇಗದಿಂದ ಒಗೆಯುವ ಸಾಧನಗಳ ಅಥವಾ ಉಪಕರಣ ಒಯ್ಯುವಿಕೆಯನ್ನು ಶೇಖರಿಸುವುದನ್ನು ಮತ್ತು ತಯಾರಿಸುವುದನ್ನು ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಸದ್ಯ ಅಂಕೋಲಾದ ಕೇಣಿಯ ಕಡಲತೀರದಲ್ಲಿ ಜೆಎಸ್ ಡಬ್ಲ್ಯೂ ಕಂಪನಿಯಿಂದ 4119 ಕೋಟಿ ರೂ. ವೆಚ್ಚದಲ್ಲಿ ಕೇಣಿ ಗ್ರೀನ್ ಫೀಲ್ಡ್ ಬಂದರು ಯೋಜನೆಗೆ ಸರ್ವೇ ನಡೆಸಲಾಗುತ್ತಿದೆ. ಆದರೆ ಸ್ಥಳೀಯರು ಜಮಾವಣೆಗೊಂಡು 144 ಸೆಕ್ಷನ್ ಜಾರಿಗೊಳಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಕೇಣಿ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ : ಪಾಕ್ಗೆ ಮಾಹಿತಿ ಸೋರಿಕೆ ಪ್ರಕರಣ: ಕಾರವಾರ ನೌಕಾನೆಲೆಯಲ್ಲಿ ಮತ್ತಷ್ಟು ಬಿಗಿಗೊಂಡ ತಪಾಸಣೆ!