ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಭಾರಿ ಮಳೆಗೆ ಜಿಲ್ಲೆಯಾದ್ಯಂತ 353 ಹೆಕ್ಟೇರ್​ ಭತ್ತದ ಬೆಳೆ ಹಾನಿ - PADDY CROP DAMAGE

ಶಿವಮೊಗ್ಗ ಜಿಲ್ಲೆಯಲ್ಲಿ ಈ ತಿಂಗಳ ವಾಡಿಕೆ ಮಳೆಗಿಂತ ಶೇ.97ರಷ್ಟು ಹೆಚ್ಚು ಮಳೆ ಸುರಿದಿದ್ದು ಭತ್ತದ ಬೆಳೆ ನೆಲಕಚ್ಚಿದೆ.

ಭತ್ತದ ಬೆಳೆ ಹಾನಿ
ಭತ್ತದ ಬೆಳೆ ಹಾನಿ (ETV Bharat)

By ETV Bharat Karnataka Team

Published : Oct 29, 2024, 9:12 PM IST

ಶಿವಮೊಗ್ಗ: ಇತ್ತೀಚಿಗೆ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿ 353 ಹೆಕ್ಟೇರ್​ನಷ್ಟು ಭತ್ತದ ಬೆಳೆ ಹಾನಿಯಾಗಿದೆ. ಅಕ್ಟೋಬರ್‌ 1ರಿಂದ 23ರವರೆಗೆ ಜಿಲ್ಲೆಯಲ್ಲಿ ಸರಾಸರಿ 12.38 ಸೆಂ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ 26.62 ಸೆಂ.ಮೀ ಮಳೆ ಸುರಿದಿದೆ. ಅಂದರೆ, ವಾಡಿಕೆಗಿಂತ ಶೇ.97ರಷ್ಟು ಹೆಚ್ಚು ಮಳೆ ಸುರಿದಿರುವುದರಿಂದ ಹಾನಿ ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ. ಬಿರುಗಾಳಿಗೆ ಸಹಿತ ಮಳೆಯಿಂದ ಭತ್ತದ ಬೆಳೆ ನೆಲ ಕಚ್ಚಿದೆ. ಕೆಲವೇ ದಿನಗಳಲ್ಲಿ ಕಟಾವಿಗೆ ಬರುವ ಹಂತದಲ್ಲಿ ಇದ್ದ ಬೆಳೆ ಭೂಮಿ ನೀರು ಪಾಲಾಗಿದೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಜಿಲ್ಲೆಯಲ್ಲಿನ ಬೆಳೆ ನಷ್ಟದ ಪ್ರಮಾಣದ ಕುರಿತು ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಯು ಪ್ರತ್ಯೇಕ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿವೆ. ಆದರೆ ಗ್ರಾಮ ಲೆಕ್ಕಾಧಿಕಾರಿಗಳಿಂದ ನಿಖರ ಮಾಹಿತಿ ಕೋರಲಾಗಿದೆ. ಈಗ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿ ಗ್ರಾಮದಲ್ಲೂ ಸರ್ವೆ ನಡೆಸುತ್ತಿದ್ದು, ಈ ವರದಿಯನ್ನು ಸರ್ಕಾರಕ್ಕೆ ಕಳುಹಿಸಲು ಇಲಾಖೆಗಳು ಸಿದ್ಧತೆ ನಡೆಸುತ್ತಿವೆ.

ಕೃಷಿ ಜಂಟಿ ನಿರ್ದೇಶಕ ಕಿರಣ್​ ಕುಮಾರ್ (ETV Bharat)

ಈ ಕುರಿತು ಕೃಷಿ ಜಂಟಿ ನಿರ್ದೇಶಕ ಕಿರಣ್​ ಕುಮಾರ್ 'ಈಟಿವಿ ಭಾರತ' ಜೊತೆಗೆ ಮಾತನಾಡಿ, "ಶಿವಮೊಗ್ಗ ಜಿಲ್ಲೆಯಾದ್ಯಂತ ಅಕ್ಟೋಬರ್​ನಲ್ಲಿ ವಾಡಿಕೆಗಿಂತ ಶೇ.97ರಷ್ಟು ಹೆಚ್ಚು ಮಳೆಯಾಗಿದೆ. ಅ.10ರ ನಂತರ ಸುರಿದ ಮಳೆಯಿಂದ 353 ಹೆಕ್ಟೇರ್​ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಭತ್ತ ಮತ್ತು ಮುಸುಕಿನ ಜೋಳ ಬೆಳೆಗಳಿಗೆ ಹಾನಿಯಾಗಿದೆ" ಎಂದರು.

"ಮಳೆಯಿಂದ ಕೃಷಿ ಭೂಮಿಯಲ್ಲಿ ನೀರು ನಿಂತು ಬೆಳೆ ನಾಶವಾಗಿದೆ. ಕೃಷಿ ಇಲಾಖೆಯಿಂದ ಈಗಾಗಲೇ ಪ್ರಾಥಮಿಕ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಜಿಲ್ಲೆಯ ಶಿಕಾರಿಪುರ ತಾಲೂಕಿನ 255 ಹೆಕ್ಟೇರ್​ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಸೊರಬದಲ್ಲಿ 36 ಹೆಕ್ಟೇರ್​ ಹಾಗೂ ಶಿವಮೊಗ್ಗದ 60 ಹೆಕ್ಟೇರ್​, ಹೊಸನಗರದಲ್ಲಿ‌ 2 ಹೆಕ್ಟೇರ್​ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಬಗ್ಗೆ ನಿಖರ ಮತ್ತು ಸಂಪೂರ್ಣ ಮಾಹಿತಿಗಾಗಿ ಮತ್ತೆ ಸರ್ವೇ ಮಾಡಲಾಗುತ್ತಿದೆ. ಮುಸುಕಿನ ಜೋಳದ ಬೆಳೆಗೆ ಹೆಚ್ಚು ಹಾನಿಯಾಗಿಲ್ಲ. ಜಿಲ್ಲೆಯಾದ್ಯಂತ 40 ಲಕ್ಷ ಮೌಲ್ಯದ ಜೋಳ ನಾಶವಾಗಿದೆ. ಈ ಕುರಿತು ವರದಿ ಬಂದ ಕೊಡಲೇ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು" ಎಂದು ಮಾಹಿತಿ ನೀಡಿದರು.

"ಜಿಲ್ಲೆಯಲ್ಲಿ ಒಟ್ಟು 10 ಹೆಕ್ಟೇರ್‌ನಷ್ಟು ತೋಟಗಾರಿಕಾ ಬೆಳೆ ನಷ್ಟವಾಗಿದೆ. ಈ ಪೈಕಿ ಶಿಕಾರಿಪುರ ತಾಲೂಕಿನಲ್ಲಿ 7 ಹೆಕ್ಟೇರ್​, ಶಿವಮೊಗ್ಗ ತಾಲೂಕಿನಲ್ಲಿ 3 ಹೆಕ್ಟೇರ್​ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ" ಎಂದು ತೋಟಗಾರಿಕಾ ಇಲಾಖೆಯ ನಿರ್ದೇಶಕಿ ಸವಿತಾ ತಿಳಿಸಿದ್ದಾರೆ.

ಇದನ್ನೂ ಓದಿ:ಕುಂದಗೋಳದಲ್ಲಿ ಮಳೆಯಿಂದ ಮೆಣಸಿನಕಾಯಿ ಬೆಳೆ ಹಾನಿ: ಗಿಡಗಳನ್ನು ಕಿತ್ತು ಹಾಕಿದ ರೈತರು

ABOUT THE AUTHOR

...view details