ಕರ್ನಾಟಕ

karnataka

ETV Bharat / state

ಧಾರವಾಡ ಜಿಲ್ಲೆಯಲ್ಲಿ ಹಿಂಗಾರು ಮಳೆ ಅಬ್ಬರ: ಈರುಳ್ಳಿ, ಶೇಂಗಾ, ಹತ್ತಿ ಬೆಳೆ ಮಣ್ಣುಪಾಲು - CROP LOSS

ಮಳೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಬೆಳೆದಿದ್ದ ಹತ್ತಿ, ಮೆಕ್ಕೆಜೋಳ, ಭತ್ತ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಇದರಿಂದ ರೈತರು ಕಂಗಾಲಾಗಿದ್ದು, ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ಶೇಂಗಾ, ಹತ್ತಿ ಬೆಳೆ ನಾಶ
ಶೇಂಗಾ, ಹತ್ತಿ ಬೆಳೆ ನಾಶ (ETV Bharat)

By ETV Bharat Karnataka Team

Published : Oct 21, 2024, 5:00 PM IST

ಹುಬ್ಬಳ್ಳಿ:ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಈರುಳ್ಳಿ, ಶೇಂಗಾ, ಮೆಕ್ಕೆಜೋಳ ಹಾಗೂ ವಿವಿಧ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಟಿ. ಹುಬ್ಬಳ್ಳಿ ತಾಲೂಕಿನ ಹಳ್ಯಾಳ,‌ ಕಡಪಟ್ಟಿ, ನವಲಗುಂದ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಮಳೆಯಾಶ್ರಿತ ಮತ್ತು ನೀರಾವರಿ ಆಶ್ರಿತ 945.7 ಹೆಕ್ಟೇರ್‌ ಭೂಮಿಯಲ್ಲಿ 2,384 ರೈತರು ಬೆಳೆದಿದ್ದ ಹತ್ತಿ, ಮೆಕ್ಕೆಜೋಳ, ಭತ್ತ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಹಿಂಗಾರು ಮಳೆಯಿಂದ ಬೆಳೆ ಹಾನಿ (ETV Bharat)

375 ಹೆಕ್ಟೇರ್‌ ತೋಟಗಾರಿಕೆ ಬೆಳೆ ನಾಶ:ಸತತ ಒಂದು ತಿಂಗಳು ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ 375 ಹೆಕ್ಟೇರ್‌ ತೋಟಗಾರಿಕಾ ಬೆಳೆ ನೆಲ ಕಚ್ಚಿದೆ. ಸುಮಾರು 1 ಕೋಟಿ 11 ಲಕ್ಷ ರೂ. ಮೌಲ್ಯದ ತರಕಾರಿ ಬೆಳೆ, ಬಾಳೆ, ಶುಂಠಿ ಕೊಳೆತು ಹೋಗಿದೆ.

"ಬೆಣ್ಣೆ ಹಳ್ಳ ಹಾಗೂ ನರಕನಹಳ್ಳಗಳು ತುಂಬಿ ಹರಿದಿದ್ದರಿಂದ ನೀರು ಜಮೀನಿಗೆ ನುಗ್ಗಿ ಶೇಂಗಾ, ಮೆಣಸಿನಕಾಯಿ, ಹತ್ತಿ ಬೆಳೆಗಳು ನಾಶವಾಗಿವೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ‌ಕಾರಣ. ಪ್ರತಿವರ್ಷ ಅಧಿಕಾರಿಗಳು ಬಂದು ಹಳ್ಳ ನೋಡಿಕೊಂಡು ಹೋಗುತ್ತಾರೆ. ಆದರೆ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗಿಲ್ಲ. ಈಗ ಹಾನಿಯಾದ ಬೆಳೆಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು" ಎಂದು ರೈತ ಬಸವರಾಜ್ ಯೋಗಪ್ಪನವರ್ ಆಗ್ರಹಿಸಿದರು.

ರೈತ ಮಂಜುನಾಥ ‌ಮಲ್ಲಿಗೌಡರ ಮಾತನಾಡಿ, "ರೈತರು ಕಷ್ಟ ಪಟ್ಟು ಬೆಳೆದ ಹತ್ತಿ, ಈರುಳ್ಳಿ, ಮೆಣಸಿನಕಾಯಿ, ಹೆಸರುಕಾಳು ಬೆಳೆ ಹಾನಿಯಾಗಿದೆ. ಸರ್ಕಾರ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ನೀಡಬೇಕು" ಎಂದು ಒತ್ತಾಯಿಸಿದರು.

ಇದನ್ನೂ ಓದಿ:ದಾವಣಗೆರೆಯಲ್ಲಿ ತಡರಾತ್ರಿ ಭಾರಿ ಮಳೆ: ಮನೆ, ರಸ್ತೆ, ತೋಟಗಳು ಜಲಾವೃತ

ABOUT THE AUTHOR

...view details