ಕರ್ನಾಟಕ

karnataka

ರಾಷ್ಟ್ರೀಯ ಅಂಗಾಂಗ ದಾನ ದಿನ: ಸತ್ತ ನಂತರ ಮಣ್ಣಾಗುವುದಕ್ಕಿಂತ: ಅಂಗಾಂಗ ದಾನ ಮಾಡಿ, 8 ಜನರಿಗೆ ಜೀವ ಕೊಡಿ - National Organ Donation Day

By ETV Bharat Karnataka Team

Published : Aug 3, 2024, 11:46 AM IST

Updated : Aug 3, 2024, 1:53 PM IST

ಇಂದು ರಾಷ್ಟ್ರೀಯ ಅಂಗಾಂಗ ದಾನ‌ ದಿನ ನಿಮಿತ್ತ ಶ್ರೀ ಬಿ‌.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣವರ ಅವರು ಈಟಿವಿ ಭಾರತ ನಡೆಸಿದ ಸಂದರ್ಶನದಲ್ಲಿ ಹಲವು ಮಾಹಿತಿ ಹಂಚಿಕೊಂಡಿದ್ದಾರೆ.

Dr. Mahanthesha Ramannavara
ಡಾ.ಮಹಾಂತೇಶ ರಾಮಣ್ಣವರ (ETV Bharat)

ಬೆಳಗಾವಿ: "ಕೊಟ್ಟರೆ ಧನ್ಯನಾಗುವೆ ಜೀವಿತರಲ್ಲಿ, ಇಟ್ಟರೆ ಬೋಧಕರಾಗುವ ವೈದ್ಯರಿಗೆ, ಸುಟ್ಟರೆ ಬೂದಿಯಾಗಿ ಹೋಗುವೆ ಭುವಿಗೆ, ಹೂತರೆ ನೀನ್ಯಾರಿಗಾದೆಯೋ ಎಲೆ ಮಾನವ. ಜೀವ ಇರುವಾಗ ರಕ್ತದಾನ, ಜೀವ ಹೋದ ಮೇಲೆ ದೇಹದಾನ, ಜೀವ ಹೋಗುವಾಗ ಅಂಗಾಂಗ ದಾನ ಮಾಡಿ ಸಾರ್ಥಕ ಮಾಡಿಕೊಳ್ಳಿ ನಿಮ್ಮ ಜೀವನ." ಇದು ತಮ್ಮ ತಂದೆ ಡಾ.ಬಿ.ಎಸ್. ರಾಮಣ್ಣವರ ಮರಣಾನಂತರ‌ ಅವರ ಮೃತದೇಹವನ್ನು ಛೇದಿಸಿ ವೈದ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಇತಿಹಾಸ ದಾಖಲಿಸಿದ ಡಾ.ಮಹಾಂತೇಶ ರಾಮಣ್ಣವರ ಸಂದೇಶ.

ಡಾ.ಮಹಾಂತೇಶ ರಾಮಣ್ಣವರ (ETV Bharat)

ಇಂದು ಆಗಸ್ಟ್ 3 ರಾಷ್ಟ್ರೀಯ ಅಂಗಾಂಗ ದಾನ‌ ದಿನ ನಿಮಿತ್ತ ಈಟಿವಿ ಭಾರತ ನಡೆಸಿದ ಸಂದರ್ಶನದಲ್ಲಿ ಕೆಎಲ್ಇ ಸಂಸ್ಥೆಯ ಶ್ರೀ ಬಿ‌.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಮುಖ್ಯಸ್ಥ ಹಾಗೂ ಡಾ.ರಾಮಣ್ಣವರ ಚಾರಿಟಬಲ್​ ಟ್ರಸ್ಟ್ ಬೈಲಹೊಂಗಲ ಕಾರ್ಯದರ್ಶಿಯೂ ಆಗಿರುವ ಡಾ.ಮಹಾಂತೇಶ ರಾಮಣ್ಣವರ, ನಮ್ಮ ದೇಹದಲ್ಲಿನ ಯಾವ ಅಂಗಾಂಗಗಳನ್ನು ದಾನ ಮಾಡಬಹುದು ಎಂಬುದನ್ನು ಸ್ವತಃ ವ್ಯಕ್ತಿಯೊಬ್ಬರ ವಿವಿಧ ಅಂಗಾಂಗಗಳನ್ನು ತೋರಿಸುವ ಮೂಲಕ ವಿವರಿಸಿದರು.

ಅಂಗಾಂಗ ದಾನ ಮಾಡಿ 8 ಜೀವ ಉಳಿಸಿ:"ಸತ್ತ ನಂತರ ದೇಹ ಮಣ್ಣಲ್ಲಿ ಮಣ್ಣಾಗಿ ಕೊಳೆತು ಹೋಗುತ್ತದೆ‌. ಹಾಗಾಗಿ, ಮರಣಾನಂತರ ಇಲ್ಲವೇ ಜೀವಿತಾವಧಿಯಲ್ಲೇ ಒಬ್ಬ ವ್ಯಕ್ತಿ ತನ್ನ 8 ಅಂಗಾಂಗಗಳನ್ನು ದಾನ ಮಾಡುವ ಮೂಲಕ 8 ಜನರ ಜೀವವನ್ನು ಬದುಕಿಸಬಹುದು. ಹೃದಯ, ಲೀವರ್, 2 ಕಿಡ್ನಿ, 2 ಲಂಗ್ಸ್(ಪುಪ್ಪುಸಗಳು), ಮೇದೋಜೀರಕ ಗ್ರಂಥಿ, ಸಣ್ಣ ಕರಳು, 2 ಕಣ್ಣುಗಳು, ಚರ್ಮವನ್ನೂ‌ ದಾನ ಮಾಡಬಹುದು‌. ಜೀವಿತಾವಧಿ ಮತ್ತು ಮರಣಾನಂತರ ಎರಡು ಪ್ರಕಾರಗಳಲ್ಲಿ ಅಂಗಾಂಗ ದಾನಗಳಿವೆ. ಮೆದುಳು ನಿಷ್ಕ್ರಿಯಗೊಂಡು ಜೀವವೇ ಅಂತ್ಯವಾಗುವ ಹಂತದಲ್ಲಿರುವ ವ್ಯಕ್ತಿ ಅಂಗಾಂಗ ದಾನ ಪ್ರಕ್ರಿಯೆಗೆ ಒಳಗಾಗಬಹುದು.

ಶ್ರೀ ಬಿ‌.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸಂಗ್ರಹಿಸಿಟ್ಟಿರುವ ಅಂಗಾಂಗ (ETV Bharat)

ಬ್ರೈನ್ ಡೆಡ್​​ ಅಥವಾ ಮೆದುಳು ಸಾವು ಸಂಭವಿಸಿದಲ್ಲಿ ವ್ಯಕ್ತಿ ಮೃತರಾದಂತೆಯೇ. ಮೃತ ವ್ಯಕ್ತಿಯ ಅಂಗಾಂಗಳನ್ನು ಕುಟುಂಬದವರ ಒಪ್ಪಿಗೆಯ ಮೇರೆಗೆ ಅಥವಾ ವ್ಯಕ್ತಿ ದಾನಿಯಾಗಿದ್ದ ಸಂದರ್ಭದಲ್ಲಿ ಅಂಗಾಂಗಗಳನ್ನು ದಾನ ಮಾಡಬಹುದು. ಇನ್ನು ರೋಗಿಯು ಮನೆಯಲ್ಲಿ ಮೃತರಾದರೆ ಅಂಗಾಂಗಗಳನ್ನು ದಾನ ಮಾಡಲು ಬರುವುದಿಲ್ಲ‌. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾಗ ಮಾತ್ರ ಸಾಧ್ಯವಾಗುತ್ತದೆ. ಅಂಗಾಂಗ ದಾನ ಕಾರ್ಯಕ್ರಮ ಕರ್ನಾಟಕದಲ್ಲಿ ಜೀವ ಸಾರ್ಥಕತೆ ಅಡಿ ನಡೆಯುತ್ತಿದೆ" ಎಂದು ಡಾ. ಮಹಾಂತೇಶ ರಾಮಣ್ಣವರ ಸಮಗ್ರವಾಗಿ ವಿವರಿಸಿದರು.

ಅಂಗಾಗ ದಾನ - 2ನೇ ಸ್ಥಾನದಲ್ಲಿ ಕರ್ನಾಟಕ:"ಅಂಗಾಂಗ ದಾನದಲ್ಲಿ ದೇಶದಲ್ಲೇ ಕರ್ನಾಟಕ 2ನೇ ಸ್ಥಾನದಲ್ಲಿದೆ. ಇನ್ನು ನಮ್ಮ ತಂದೆಯವರ ದೇಹದಾನದಿಂದ ಪ್ರೇರೇಪಿತರಾಗಿ ಅಥಣಿ ತಾಲ್ಲೂಕಿನ ಶೇಗುಣಸಿ ಗ್ರಾಮದಲ್ಲಿ ಕೂಡಲಸಂಗಮದ ಬಸವ ಧರ್ಮ ಪೀಠದ ಪ್ರಥಮ ಮಹಿಳಾ ಜಗದ್ಗುರು ಡಾ.ಮಾತೆ ಮಹಾದೇವಿ ನೇತೃತ್ವದಲ್ಲಿ 185ಕ್ಕೂ ಹೆಚ್ಚು ಜನರು ನೇತ್ರ, ಚರ್ಮ, ಅಂಗಾಂಗ ಮತ್ತು ದೇಹದಾನಕ್ಕೆ ವಾಗ್ದಾನ ಮಾಡಿದ್ದು ಹೆಮ್ಮೆಯ ವಿಷಯ." ಎಂದು ಹೇಳುತ್ತಾರೆ.

ಶ್ರೀ ಬಿ‌.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸಂಗ್ರಹಿಸಿಟ್ಟಿರುವ ಅಂಗಾಂಗ (ETV Bharat)

ವೃತ್ತಿಯ ಜೊತೆಗೆ ಇಡೀ ರಾಜ್ಯ ಸುತ್ತಿ ದೇಹದಾನ ಮತ್ತು ಅಂಗಾಂಗ ದಾನಗಳ ಮಹತ್ವವನ್ನು ಸಾರುತ್ತಿರುವ ಡಾ. ಮಹಾಂತೇಶ ರಾಮಣ್ಣವರ ಈವರೆಗೆ ಸಾವಿರಾರು ಜನರನ್ನು ಪ್ರೇರೇಪಿಸಿದ್ದು, ಅವರೆಲ್ಲರು ದೇಹದಾನ ಮತ್ತು ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡಿರುವುದು ಶ್ಲಾಘನೀಯ.

"ಬೆಳಗಾವಿ ಕೆಎಲ್ಇ ಡಾ. ಪ್ರಭಾಕರ್ ಕೋರೆ ಆಸ್ಪತ್ರೆಯಲ್ಲಿ ಈವರೆಗೆ 13 ಯಶಸ್ವಿ ಹೃದಯ ಕಸಿ, 13 ಲೀವರ್(ಯಕೃತ್ತ) ಕಸಿ, 90 ಕಿಡ್ನಿ ಕಸಿ, 2 ಲಂಗ್ಸ್ ಕಸಿ ಮಾಡುವ ಮೂಲಕ ಸಾಧನೆ ಮೆರೆಯಲಾಗಿದೆ. ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಉದಾರ ಮನಸ್ಸಿನಿಂದ ಅತೀ ಹೆಚ್ಚು ಜನರು ಅಂಗಾಂಗ ದಾನಕ್ಕೆ ವಾಗ್ದಾನ ಮಾಡುತ್ತಿದ್ದಾರೆ. ವಿಶೇಷವಾಗಿ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಅವರು ಕೂಡ ದೇಹದಾನ ಘೋಷಿಸಿದ್ದಾರೆ. ಬರುವ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಬೆಳಗಾವಿ ಅಂಗಾಂಗ ದಾನಿಗಳಲ್ಲಿ ನಂ.1 ಸ್ಥಾನ ಪಡೆಯುವುದರಲ್ಲಿ ಸಂಶಯವೇ ಇಲ್ಲ" ಎಂದು ಡಾ‌. ಮಹಾಂತೇಶ ರಾಮಣ್ಣವರ ವಿಶ್ವಾಸ ವ್ಯಕ್ತಪಡಿಸಿದರು.

ದಿ. ಡಾ. ಬಿ.ಎಸ್.ರಾಮಣ್ಣವರ ದೇಹದಾನ ಮಾಡಿದ ಬಳಿಕ‌ ಅವರ ಮೃತದೇಹವನ್ನು ಪುತ್ರ ಡಾ. ಮಹಾಂತೇಶ ರಾಮಣ್ಣವರ ಬಿ‌.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲೇ ಸಂಗ್ರಹಿಸಿಟ್ಟಿದ್ದು, ವೈದ್ಯ ವಿದ್ಯಾರ್ಥಿಗಳು ಹಾಗೂ ದಾನಿಗಳಿಗೆ ಪ್ರೇರಣೆಯಾಗಿದೆ. ಡಾ‌.‌ಮಹಾಂತೇಶ ತಂದೆಯನ್ನು ಚಿರಸ್ಥಾಯಿಯಾಗಿಸಿದ್ದಾರೆ.

ಅಂಗಾಂಗ ದಾನಕ್ಕೆ ನೋಂದಣಿ ಹೇಗೆ?:ಕರ್ನಾಟಕ ಸರ್ಕಾರದ www.jeevasarthakathe.karnataka.gov.in ವೆಬ್ ಸೈಟ್ ಮೂಲಕ ಅಂಗಾಂಗ ದಾನಿಗಳು ನೋಂದಣಿ ಮಾಡಿಕೊಳ್ಳಬಹುದು. ಆ ವೆಬ್ ಸೈಟ್ ಓಪನ್ ಆದ ಮೇಲೆ ತಮ್ಮ ಹೆಸರು, ರಕ್ತದ ಗುಂಪು, ವಿಳಾಸ ಸೇರಿ ಮತ್ತಿತರ ವಿವರಗಳನ್ನು ಭರ್ತಿ ಮಾಡಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಡಾ.ಮಹಾಂತೇಶ ರಾಮಣ್ಣವರ, ಮೊ.ಸಂ.9242496497 ಸಂಪರ್ಕಿಸಬಹುದು.

ಇದನ್ನೂ ಓದಿ:ಅಪಘಾತದಲ್ಲಿ ಸಾವನ್ನಪ್ಪಿದ ಪುತ್ರಿ; ಅಂಗಾಂಗ ದಾನ ಮಾಡಿ 6 ಮಕ್ಕಳಿಗೆ ನೆರವಾದ ಅಪ್ಪ-ಅಮ್ಮ - ORGANS DONATED

Last Updated : Aug 3, 2024, 1:53 PM IST

ABOUT THE AUTHOR

...view details