ಚಿಕ್ಕೋಡಿ:ಸಾಮಾನ್ಯವಾಗಿ ಎಲ್ಲ ಜಾತ್ರೆಗಳಲ್ಲಿ ರಥೋತ್ಸವ, ವಿವಿಧ ಉತ್ಸವ ಕಾರ್ಯಕ್ರಮ ನೋಡಿದ್ದೇವೆ, ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಮಠದಲ್ಲಿ ಈ ವರ್ಷ ವಿಭಿನ್ನ ರೀತಿ ಜಾತ್ರೆ ಆಚರಿಸಿದ್ದು, ಇದು ಇಂಡಿಯಾ ಸ್ಟಾರ್ ವರ್ಲ್ಡ್ ರೆಕಾರ್ಡ್ ಬುಕ್ನಲ್ಲಿ ದಾಖಲಾಗಿದೆ. ಅಜ್ಜನ ರೊಟ್ಟಿ ಬುತ್ತಿ ಜಾತ್ರೆ ಎಂದು ಪ್ರಸಿದ್ಧಿ ಪಡೆದಿರುವ ಮುಗಳಖೋಡ ಜಾತ್ರೆಯಲ್ಲಿ ಈ ಬಾರಿ ಭಕ್ತರು ಅಜ್ಜನ ಪುಣ್ಯಸ್ಮರಣೆಯೊಂದಿಗೆ ದೇಶ ಪ್ರೇಮವನ್ನು ಮೆರೆದಿದ್ದಾರೆ.
ಹೌದು, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಲಿಂಗೈಕ್ಯ ಶ್ರೀ ಯಲ್ಲಾಲಿಂಗ ಮಹಾರಾಜರ 38ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಒಂದು ವಾರ ಕಾಲ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪುಣ್ಯ ಸ್ಮರಣೆಯಲ್ಲಿ ಗ್ರಾಮೀಣ ಭಾಗದ ರೈತರು ಮಠಕ್ಕೆ ಅನ್ನ ಸಮರ್ಪಣೆ ಮಾಡುವುದು ವಾಡಿಕೆ. ಪ್ರತಿ ವರ್ಷವೂ ರೈತ ಮಹಿಳೆಯರು ನೂರಾರು ರೊಟ್ಟಿ ಮಾಡಿಕೊಂಡು ಮಠಕ್ಕೆ ಅರ್ಪಿಸಿ ತಮ್ಮ ಭಕ್ತಿ ಮೆರೆಯುತ್ತಾರೆ.
ಭಕ್ತಿಯ ಜೊತೆ ದೇಶಪ್ರೇಮ ಮೆರೆದ ಭಕ್ತರು:ಆದರೆ ಈ ವರ್ಷ ಭಕ್ತರು ಅಜ್ಜನ ಜಾತ್ರೆಯಲ್ಲಿ ಭಕ್ತಿಯ ಜೊತೆ ದೇಶಪ್ರೇಮ ಮೆರೆದಿದ್ದಾರೆ. ರೊಟ್ಟಿಯ ಬುಟ್ಟಿಗಳ ಮೇಲೆ ರಾಷ್ಟ್ರಧ್ವಜ ಪ್ರತಿಬಿಂಬಿಸುವ ಕೇಸರಿ, ಬಿಳಿ, ಹಸಿರು ಮೂರು ಬಣ್ಣದ ಬುತ್ತಿಯ ಗಂಟನ್ನು ತಲೆಯ ಮೇಲೆ ಹೊತ್ತುಕೊಂಡು ಬಂದು ಎಲ್ಲರ ಗಮನ ಸೆಳೆದಿದ್ದಾರೆ. ಸುಕ್ಷೇತ್ರ ಮುಗಳಖೋಡ ಮಠದ ಜಾತ್ರೆಗೆ ವಿವಿಧ ಜಿಲ್ಲೆ, ತಾಲೂಕುಗಳಿಂದ ಬಂದಿದ್ದ ಸರಿಸುಮಾರು 10 ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಅಜ್ಜನವರ ಪುಣ್ಯಸ್ಮರಣೆಯಲ್ಲಿ ಭಾಗಿಯಾದರು.
ರೊಟ್ಟಿ ಬುತ್ತಿ ಹೊತ್ತು ಮಹಿಳೆಯರಿಂದ ಪಾದಯಾತ್ರೆ:ಮುಗಳಖೋಡ ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣ ಮನೆ ಮಾಡಿತ್ತು. ಭಕ್ತಿಯೊಂದಿಗೆ ರಾಷ್ಟ್ರ ಪ್ರೇಮವೂ ಕಂಡುಬಂತು. ಸುಮಾರು ಎರಡು ಕಿಲೋ ಮೀಟರ್ ರೊಟ್ಟಿ ಬುತ್ತಿ ಹೊತ್ತುಕೊಂಡು ಮಹಿಳೆಯರು ಪಾದಯಾತ್ರೆ ನಡೆಸಿದರು. ದಾರಿ ಉದ್ದಕ್ಕೂ ದೇಶಪ್ರೇಮ ಹಾಗೂ ಭಕ್ತಿ ಗೀತೆಗಳು ಮೆರವಣಿಗೆಗೆ ಮೆರುಗು ತಂದವು. ಅಜ್ಜನ ಜಾತ್ರೆಯಲ್ಲಿ ದೇಶದ ತಿರಂಗ ಪ್ರದರ್ಶಿಸುವುದೊಂದಿಗೆ ಗ್ರಾಮಸ್ಥರು ಸಂಭ್ರಮಿಸಿದರು.