ಕರ್ನಾಟಕ

karnataka

ETV Bharat / state

ಹೈಕೋರ್ಟ್​​, ಸುಪ್ರೀಂ ಕೋರ್ಟ್​ಗೆ ಹೋಗಲ್ಲ,​​​ ಜನಪ್ರತಿನಿಧಿಗಳ ಕೋರ್ಟ್​ನಲ್ಲೇ ಹೋರಾಟ: ಸ್ನೇಹಮಯಿ ಕೃಷ್ಣ - SNEHAMAYI KRISHNA

ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಕೋರ್ಟ್​ಗೆ ವರದಿ ಸಲ್ಲಿಸಿರುವ ಕುರಿತಂತೆ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

muda-case-complainant-snehamayi-krishna-reacts-on-lokayukta-report
ಸ್ನೇಹಮಯಿ ಕೃಷ್ಣ (ETV Bharat)

By ETV Bharat Karnataka Team

Published : Feb 20, 2025, 4:49 PM IST

ಮೈಸೂರು:''ಮುಡಾ ಪ್ರಕರಣದಲ್ಲಿಲೋಕಾಯುಕ್ತ ಅಧಿಕಾರಿಗಳು ಕೋರ್ಟ್​ಗೆ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿದ ಬಳಿಕ ನನ್ನ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇನೆ. ನಾನು ಹೈಕೋರ್ಟ್​​ಗಾಗಲಿ, ಸುಪ್ರೀಂ ಕೋರ್ಟ್​​​ಗಾಗಲಿ ಮೇಲ್ಮನವಿ ಸಲ್ಲಿಸುವುದಿಲ್ಲ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೇ ನನ್ನ ಬಳಿಯಿರುವ ಸಾಕ್ಷಿಗಳನ್ನು ಇಟ್ಟುಕೊಂಡು ಸಾಬೀತುಪಡಿಸುವತ್ತ ಹೋರಾಟ ಮಾಡುತ್ತೇನೆ'' ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಮುಡಾ ಪ್ರಕರಣದಲ್ಲಿ ಲೋಕಾಯುಕ್ತರು ಕೋರ್ಟ್​​ಗೆ ವರದಿ ಸಲ್ಲಿಸಿರುವ ಬಗ್ಗೆ ನಗರದಲ್ಲಿ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ಅವರು, ''ಸಾಕಷ್ಟು ದಾಖಲೆಗಳನ್ನು ನೀಡಿದ್ದೇನೆ. ಉಚ್ಚ ನ್ಯಾಯಾಲಯ ಈ ಹಿಂದೆ ನೀಡಿರುವ 197 ಪುಟಗಳ‌ ವಿವರವಾದ ತೀರ್ಪಿನಲ್ಲೇ ಸಾಕಷ್ಟು ಸಾಕ್ಷಿಗಳಿವೆ‌. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು‌ ಕೂಡ ನಾನು ನೀಡಿರುವ ಸಾಕ್ಷಿ ಆಧಾರಗಳನ್ನು ಪರೀಶೀಲನೆ ನಡೆಸಿದ ಬಳಿಕವೇ ತನಿಖೆಗೆ ಆದೇಶ ನೀಡಿತ್ತು. ನ್ಯಾಯಾಲಯಗಳೇ ತನಿಖೆ ಆಗಬೇಕು ಎಂದು ತೀರ್ಪು ನೀಡಿದರೂ ತನಿಖಾಧಿಕಾರಿ ಸಾಕ್ಷಗಳಿಲ್ಲ ಎಂದು ವರದಿ ಸಲ್ಲಿಸಿರುವುದನ್ನು ನೋಡಿದರೆ, ಅವರು ಪ್ರಭಾವಕ್ಕೆ ಒಳಗಾಗಿ ತಮ್ಮ ಕರ್ತವ್ಯದ ವಿರುದ್ಧ ನಡೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ'' ಎಂದು ಆರೋಪಿಸಿದರು.

ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ (ETV Bharat)

''ಸಾಕಷ್ಟು ಸಾಕ್ಷಿ, ಆಧಾರಗಳು ಇದ್ದರೂ ಸಹ ಯಾವ ಆಧಾರದ ಮೇಲೆ ಕೊರತೆಯಿದೆ ಎಂದು ಹೇಳಿರುವುದು ನಿಜಕ್ಕೂ ಸಹ ಅಚ್ಚರಿಯ ಸಂಗತಿ. ಸಾಮಾನ್ಯ ವ್ಯಕ್ತಿಯೂ ಕೂಡ ಕೇವಲ ಎರಡು ಮೂರು ಸಾಕ್ಷಿ ನೋಡಿದರೂ ಅಪರಾಧ ಕೃತ್ಯ ನಡೆದಿದೆ ಎಂದು ಸ್ಷಷ್ಟವಾಗಿ ಹೇಳುತ್ತಾರೆ. ಆದರೂ ಕೂಡ ತನಿಖಾಧಿಕಾರಿಗೆ ಇದು ಗೊತ್ತಾಗಲಿಲ್ಲವೆಂದರೆ, ಅವರ ಬೌದ್ಧಿಕ ಮಟ್ಟ ಎಷ್ಟಿದೆ ಎಂದು ರಾಜ್ಯದ ಜನತೆ ಗಮನಿಸಬೇಕು'' ಎಂದರು.

ನಟೇಶ್ ಪ್ರಕರಣದಲ್ಲೂ ಕಾನೂನು ಕ್ರಮ ಆಗಲಿದೆ:''ಮುಡಾ ಮಾಜಿ ಆಯುಕ್ತ ನಟೇಶ್ ಪ್ರಕರಣದ ತನಿಖೆ ಕೂಡ ನಡೆಯುತ್ತದೆ. ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಇ.ಡಿ ಅವರು ಸುಪ್ರೀಂ ಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅಲ್ಲಿಂದ ತೀರ್ಪು ಬಂದ ಬಳಿಕ ಕಾನೂನಿನ‌ ಕ್ರಮ ಆಗುತ್ತದೆ'' ಎಂದು ಸ್ನೇಹಮಯಿ ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.

''ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ವಾದ ಮಂಡಿಸಿದರೆ ಕೋರ್ಟ್​ ನಮ್ಮ ಅರ್ಜಿಯನ್ನು ಪರಿಗಣಿಸಿ, ಎಲ್ಲರನ್ನೂ ಆರೋಪಿಗಳೆಂದು ಹೇಳಿ ವಿಚಾರಣೆಗೊಳಪಡಿಸಲಿದೆ ಎಂಬ ವಿಶ್ವಾಸ ನಮಗಿದೆ. ಅಕ್ರಮ ವ್ಯವಹಾರ ನಡೆಸಿದ್ದಾರೆ ಎಂಬುದನ್ನು ಸಾಬೀತು ಮಾಡಲು ನನ್ನ ಬಳಿ ಬೇಕಾದ ಸಾಕ್ಷಿಗಳು ನನ್ನ ಬಳಿ ಇವೆ'' ಎಂದು ಸ್ನೇಹಮಯಿ ತಿಳಿಸಿದರು.

ಇದನ್ನೂ ಓದಿ:ಮುಡಾ ಪ್ರಕರಣ ಬಿಜೆಪಿ-ಜೆಡಿಎಸ್ ರಾಜಕೀಯ ಕುತಂತ್ರ, ಇದು ಹೆಚ್ಚು ದಿನ ನಡೆಯಲ್ಲ: ಡಿ.ಕೆ. ಶಿವಕುಮಾರ್

''ನಾನು ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅಪರಾಧಕ್ಕೆ ತಕ್ಕಂತೆ ಶಿಕ್ಷೆ ಕೊಡಿಸುವ ಎಲ್ಲ ಪ್ರಯತ್ನವನ್ನೂ ನಾನು ಮಾಡುತ್ತೇನೆ'' ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಸಿ.ಟಿ.ರವಿ-ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣ ಶೀಘ್ರದಲ್ಲೇ ಬಗೆಹರಿಯಲಿದೆ: ಬಸವರಾಜ್ ಹೊರಟ್ಟಿ

ABOUT THE AUTHOR

...view details