ಕರ್ನಾಟಕ

karnataka

ETV Bharat / state

ಮುಡಾ ಪ್ರಕರಣ : ಲೋಕಾಯುಕ್ತರಿಂದ ಸರಿಯಾಗಿ ತನಿಖೆ ನಡೆಯುತ್ತಿಲ್ಲ - ಎಂಎಲ್​ಸಿ ಹೆಚ್ ವಿಶ್ವನಾಥ್‌

ಎಂಎಲ್​ಸಿ ಹೆಚ್​. ವಿಶ್ವನಾಥ್​ ಅವರು ಮುಡಾ ಪ್ರಕರಣದ ಕುರಿತು ಮಾತನಾಡಿದ್ದಾರೆ. ಪ್ರಕರಣದ ಕುರಿತು ಲೋಕಾಯುಕ್ತರಿಂದ ಸರಿಯಾಗಿ ತನಿಖೆ ನಡೆಯುತ್ತಿಲ್ಲ ಎಂದು ಆರೋಪಿಸಿದರು.

Mlc-h-vishwanath
ಎಂಎಲ್​ಸಿ ಹೆಚ್ ವಿಶ್ವನಾಥ್‌ (ETV Bharat)

By ETV Bharat Karnataka Team

Published : 6 hours ago

ಮೈಸೂರು : ಮುಡಾ ಅಕ್ರಮ ಪ್ರಕರಣ ಲೋಕಾಯುಕ್ತರಿಂದ ಸರಿಯಾಗಿ ತನಿಖೆ ನಡೆಯುತ್ತಿಲ್ಲ, ಲೋಕಾಯುಕ್ತ ತನಿಖೆ ಬಗ್ಗೆ ರಾಜ್ಯದ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ. ಈ ಪ್ರಕರಣವನ್ನು ಸಿಬಿಐ ಹಾಗೂ ಇಡಿ ಸಮಗ್ರವಾಗಿ ತನಿಖೆ ನಡೆಸಿ ಸತ್ಯಾಂಶ ಹೊರಗೆ ತರಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಹೆಚ್.‌ ವಿಶ್ವನಾಥ್‌ ಆಗ್ರಹಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಕಾಲ ವಿಜಯನಗರದ ಸಾಮ್ರಾಜ್ಯದ ಕಾಲದಂತೆ ಆಗಿದೆ. ಮುಡಾದ ಒಂದು - ಒಂದೂವರೆ ಕೋಟಿ ನಿವೇಶನವನ್ನ ಒಂದು ಸಾವಿರ, ಎರಡು ಸಾವಿರ ರೂಪಾಯಿಗೆ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಪತ್ನಿಗೂ ಇದೇ ರೀತಿ ನಿವೇಶನ ಹಂಚಿದ್ದಾರೆ ಎಂದರು.

ಎಂಎಲ್​ಸಿ ಹೆಚ್ ವಿಶ್ವನಾಥ್‌ ಅವರು ಮಾತನಾಡಿದರು (ETV Bharat)

ಮಾತನಾಡಿದರೆ ನಾನು ಅಕ್ಕಿ ಕೊಟ್ಟೆ, ಭಾಗ್ಯ ಕೊಟ್ಟೆ ಎಂದು ಹೇಳುವ ಸಿದ್ದರಾಮಯ್ಯ ರಾಜ್ಯದ ಅಭಿವೃದ್ಧಿಗೆ ಕುಂಠಿತವಾಗಿದ್ದಾರೆ. ನಿರೀಕ್ಷಿತ ಆಡಳಿತ ಕೊಡಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದ ವಿಶ್ವನಾಥ್‌, ಕಾಂಗ್ರೆಸ್ ಪಕ್ಷವನ್ನ ಟೀಕಿಸುತ್ತಿದ್ದ ಸಿದ್ದರಾಮಯ್ಯ ಕಾಂಗ್ರೆಸ್​ಗೆ ಬಂದದ್ದು ವಿಪರ್ಯಾಸ. ಸಿದ್ದರಾಮಯ್ಯ ಒಬ್ಬ ಕೇರ್​ಲೆಸ್​ ಮನುಷ್ಯ, ಇವರ ಬೇಜವಾಬ್ದಾರಿಯಿಂದಲೇ ಇಷ್ಟೊಂದು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ ಎಂದು ಹೆಚ್​ ವಿಶ್ವನಾಥ್​ ಹರಿಹಾಯ್ದರು.

ಚನ್ನಪಟ್ಟಣದಲ್ಲಿ ಜೆಡಿಎಸ್​ಗೆ ಪೂರಕ ವಾತಾವರಣ ಇದೆ :ರಾಜ್ಯದಲ್ಲಿ 3 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್‌ ಮೇಲೆ ಮುಡಾ, ವಾಲ್ಮೀಕಿ ನಿಗಮದ ಹಗರಣಗಳ ಕಾರ್ಮೋಡ ಕವಿದಿದೆ. ಸದ್ಯದಲ್ಲಿ ಚನ್ನಪಟ್ಟಣದಲ್ಲಿ ಜೆಡಿಎಸ್​ಗೆ ಪೂರಕ ವಾತಾವರಣ ಇದೆ. ಕಾಂಗ್ರೆಸ್‌ ಅಭ್ಯರ್ಥಿ ಯೋಗೇಶ್ವರ್‌ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾನೆ. ಈತನಿಂದ ವಂಚನೆಗೆ ಒಳಗಾದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಧೂಳಿಪಟವಾಗಲಿದೆ ಎಂದು ಎಂಎಲ್​ಸಿ ಭವಿಷ್ಯ ನುಡಿದರು.

ಬೈರತಿ ಸುರೇಶ್‌ ಸಂಸ್ಕೃತಿ ಇಲ್ಲದ ಮನುಷ್ಯ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಗ್ಗೆ ಸಚಿವ ಬೈರತಿ ಸುರೇಶ್‌ ಕೀಳಾಗಿ ಮಾತನಾಡುತ್ತಿದ್ದಾನೆ. ಆತ ಒಬ್ಬ ಅಯೋಗ್ಯ, ಸಂಸ್ಕೃತಿ - ಸಂಸ್ಕಾರವಿಲ್ಲದ ಮನುಷ್ಯ. ಕೇಂದ್ರ ಸಚಿವೆಯಾಗಿ ಶೋಭಾ ಕರಂದ್ಲಾಜೆ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಸಚಿವ ಬೈರತಿ ಸುರೇಶ್​ನಿಂದ ಸಿದ್ದರಾಮಯ್ಯನವರ ಘನತೆ ಹಾಳಾಗುತ್ತಿದೆ. ಮುಖ್ಯಮಂತ್ರಿಗಳು ರಾಜ್ಯದಲ್ಲಿ ಯಾರು, ಏನು ಬೇಕಾದ್ದೂ ಮಾಡಿಕೊಳ್ಳಲಿ ಎಂದು ಬಿಟ್ಟುಬಿಟ್ಟಿದ್ದಾರೆ. ಬೈರತಿ ಸುರೇಶ್ ನನ್ನ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾನೆ. ಮುಡಾ ಹಗರಣದಲ್ಲಿ ಆತನನ್ನ ಒಳಗೆ ಹಾಕಿದರೆ ಎಲ್ಲವೂ ಹೊರಬರಲಿದೆ ಎಂದು ಹೆಚ್​ ವಿಶ್ವನಾಥ್​ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ :ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಹೆಚ್.‌ ವಿಶ್ವನಾಥ್‌ ಆಗ್ರಹ - Muda Case

ABOUT THE AUTHOR

...view details