ಕರ್ನಾಟಕ

karnataka

ನನ್ನ ಕಚೇರಿಯಲ್ಲಿ ಸಭೆ ಆಗಿದ್ರೆ ತನಿಖೆ ನಡೆಯಲಿ, ಸತ್ಯಾಸತ್ಯತೆ ಹೊರ ಬರಲಿದೆ: ಸಚಿವ ಶರಣ ಪ್ರಕಾಶ್ ಪಾಟೀಲ - Minister Sharan Prakash Patil

By ETV Bharat Karnataka Team

Published : Jun 8, 2024, 5:52 PM IST

ನಾನು ಪ್ರಾಮಾಣಿಕವಾಗಿ ಕೆಲಸ ಮಾಡುವವನು. ನನ್ನ ಕಚೇರಿಯಲ್ಲಿ ಸಭೆ ಆಗಿದ್ರೆ ತನಿಖೆ ನಡೆಯಲಿ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.

ಸಚಿವ ಶರಣ ಪ್ರಕಾಶ್ ಪಾಟೀಲ
ಸಚಿವ ಶರಣ ಪ್ರಕಾಶ್ ಪಾಟೀಲ (ETV Bharat)

ಬೆಂಗಳೂರು: ನನ್ನ ಕಚೇರಿಯಲ್ಲಿ ಸಭೆ ಆಗಿದ್ರೆ ತನಿಖೆ ನಡೆಯಲಿ. ತನಿಖೆಯಲ್ಲಿ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಸಚಿವ ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣದಲ್ಲಿ ಬಂಧಿತರಾದ ಆರೋಪಿ ಪರಶುರಾಮ್ ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ಸಭೆ ನಡೆಸಿದ್ದಾರೆಂಬ ಎಂಬ ಆರೋಪಿಸಿದ ವಿಚಾರವಾಗಿ ಬೆಂಗಳೂರಲ್ಲಿ ಸಚಿವ ಶರಣ ಪ್ರಕಾಶ್ ಪಾಟೀಲ ಪ್ರತಿಕ್ರಿಯೆ ನೀಡಿದರು. ಈ ಬಗ್ಗೆ ತನಿಖೆ ನಡೆಸಲಿ, ಬೇಡ ಅಂದವರು ಯಾರು?. ಕಳೆದ ಮೇ 24ರಂದು ನಾನು ಕಚೇರಿಗೆ ಹೋಗಿಯೇ ಇರಲಿಲ್ಲ. ವಿಕಾಸಸೌಧದಲ್ಲಿ ತಮಗೆ ಹಂಚಿಕೆಯಾಗಿರುವ ಕೊಠಡಿ ಸರ್ಕಾರದ ಕಚೇರಿ. ಅಲ್ಲಿಗೆ ಸಾಕಷ್ಟು ಜನ ಬರುತ್ತಾರೆ, ಹೋಗುತ್ತಾರೆ ಎಂದರು.

ಬಂಧಿತ ಪರಶುರಾಮ್ ಸಚಿವರ ಕಚೇರಿಯಲ್ಲಿ ಅಂತಾ ಹೇಳಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವರು ಅಂತಾ ಹೇಳಿಲ್ಲ. ಅಂದು ನಾನು ಕಚೇರಿಗೆ ಹೋಗಿಲ್ಲ. ನಮ್ಮ ಕಚೇರಿಯಲ್ಲಿ ಸಭೆ ಆಗಿರುವುದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಕಚೇರಿ ಸಿಬ್ಬಂದಿಯನ್ನ ಕೇಳಿದೆ. ಆ ರೀತಿ ಯಾವುದೇ ಸಭೆ ಆಗಿಲ್ಲ ಅಂತಾ ಹೇಳಿದರು. ಶಾಸಕರು ಬರುತ್ತಾರೆ, ಹೋಗುತ್ತಾರೆ ಅಂತಾ ಸಿಬ್ಬಂದಿ ಹೇಳಿದ್ದಾರೆ. ಇದಕ್ಕೂ ನನಗೂ ಸಂಬಂಧ ಇಲ್ಲ ಎಂದು ತಿಳಿಸಿದರು.

ಬೇಕಾದರೆ ಸಿಸಿಟಿವಿ ಫೂಟೇಜ್ ಪರಿಶೀಲಿಸಲಿ. ನನ್ನ ಕಚೇರಿಯಲ್ಲಿ ಸಭೆ ಆಗಿದ್ರೆ ತನಿಖೆ ನಡೆಯಲಿ. ತನಿಖೆಯಲ್ಲಿ ಸತ್ಯಾಸತ್ಯತೆ ಹೊರ ಬರಲಿದೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡುವವನು. ಇದನ್ನ ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.

ರಾಜೀನಾಮೆಗೆ ಬಿಜೆಪಿ ಆಗ್ರಹ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ನಿಗಮದ ಅಧ್ಯಕ್ಷ ಮತ್ತು ಶಾಸಕ ಬಸನಗೌಡ ದದ್ದಲ್ ಮತ್ತು ಸಚಿವ ಶರಣಪ್ರಕಾಶ್ ಪಾಟೀಲರ ರಾಜೀನಾಮೆ ಪಡೆಯುವಂತೆ ಹಾಗೂ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಅವರು ಸಹ ರಾಜೀನಾಮೆ ಕೊಡಬೇಕು ಎಂದು ಬೆಂಗಳೂರಲ್ಲಿಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಆಗ್ರಹಿಸಿದ್ದರು.

ಇದನ್ನೂ ಓದಿ:ವಾಲ್ಮೀಕಿ ನಿಗಮದ ಹಗರಣ: ಸಿಎಂ, ದದ್ದಲ್, ಶರಣ ಪ್ರಕಾಶ್ ಪಾಟೀಲ ರಾಜೀನಾಮೆಗೆ ಎನ್.ರವಿಕುಮಾರ್ ಆಗ್ರಹ - Valmiki corporation Scam

ABOUT THE AUTHOR

...view details