ಬೆಳಗಾವಿ: "ಕಾರು ಅಪಘಾತ ಪ್ರಕರಣದ ವಿಶೇಷ ತನಿಖೆಗೆ ನಾನು ಆಗ್ರಹಿಸುವುದಿಲ್ಲ. ದೇವರ ದಯೆ, ಕ್ಷೇತ್ರದ ಮತದಾರರು, ಮಠಾಧೀಶರ ಆಶೀರ್ವಾದದಿಂದ ಇವತ್ತು ಆರೋಗ್ಯವಾಗಿ ಆಸ್ಪತ್ರೆಯಿಂದ ಹೊರಗೆ ಬಂದಿದ್ದೇನೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದ ನನ್ನ ಇಲಾಖೆ ಜವಾಬ್ದಾರಿ ಹೊತ್ತುಕೊಂಡು ಇನ್ನೊಮ್ಮೆ ಕಾರ್ಯಪ್ರವೃತ್ತ ಆಗುತ್ತೇನೆ" ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಕಾರು ಅಪಘಾತದಲ್ಲಿ ಗಾಯಗೊಂಡು ಕಳೆದ 13 ದಿನಗಳಿಂದ ಬೆಳಗಾವಿ ವಿಜಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮೊದಲಿಗೆ ಕರ್ನಾಟಕ ಮಹಾಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ನನಗೆ ಆಗಬಾರದ ದುರ್ಘಟನೆ ಸಂಭವಿಸಿತು. ಜೀವನದ ಕೊನೆ ಹಂತವನ್ನು ನೋಡಿ ಹೋರಾಟ ಮಾಡಿ ಮತ್ತೆ ಬದುಕಿ ಹೊರಗೆ ಬರುತ್ತಿದ್ದೇನೆ. ಇದಕ್ಕೆಲ್ಲಾ ನಮ್ಮ ಹಿರಿಯರು, ತಂದೆ ತಾಯಿಗಳ ಆಶೀರ್ವಾದವೇ ಕಾರಣ. ನನ್ನ ಬದುಕಿನ ಹೋರಾಟದ ಸಂದರ್ಭದಲ್ಲಿ ನಾಡಿನ ಹಲವಾರು ಮಠಾಧೀಶರು, ಪೂಜ್ಯರು ಆಸ್ಪತ್ರೆಗೆ ಬಂದು ಶೀಘ್ರವೇ ಗುಣಮುಖರಾಗುವಂತೆ ಆಶೀರ್ವಾದ ಮಾಡಿದ್ದು, ನನಗೆ ಬಹಳಷ್ಟು ಶಕ್ತಿ ಮತ್ತು ಧೈರ್ಯ ತಂದಿತು" ಎಂದರು.
"ಅದೇ ರೀತಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಪರಿಷತ್ ಸದಸ್ಯರು, ಮಾಜಿ ಶಾಸಕರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಆಗಮಿಸಿ ನನ್ನ ಆರೋಗ್ಯ ವಿಚಾರಿಸಿದರು. ಅವರಿಗೆಲ್ಲಾ ನನ್ನ ಧನ್ಯವಾದ ಸಲ್ಲಿಸುತ್ತೇನೆ. ನನ್ನ ಪುಣ್ಯವೋ ಏನೋ ಗೊತ್ತಿಲ್ಲ. ವಿಜಯಾ ಆಸ್ಪತ್ರೆಯ ಡಾ. ರವಿ ಪಾಟೀಲ ಮತ್ತು ಅವರ ಎಲ್ಲ ವೈದ್ಯರು, ಸಿಬ್ಬಂದಿ ನನಗೆ ಇಂಥ ಅಪಘಾತ ಆಗಿದೆ ಎಂಬ ಭಾವನೆ ಒಂದು ಕ್ಷಣ ಬರದಂತೆ ಧೈರ್ಯ ತುಂಬಿ ಚಿಕಿತ್ಸೆ ನೀಡಿದರು. ಹಾಗಾಗಿ, ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ" ಎಂದು ಹೇಳಿದರು.
"ಬೆಳಗಾವಿ ಗ್ರಾಮೀಣ ಕ್ಷೇತ್ರದ ಗುರುಹಿರಿಯರು, ಮತದಾರ ಬಾಂಧವರು ಪ್ರತಿನಿತ್ಯ ಪೂಜೆ ಸಲ್ಲಿಸಿ ನನ್ನ ಆರೋಗ್ಯ ಸುಧಾರಣೆ ಆಗಲಿ ಎಂದು ಪ್ರಾರ್ಥಿಸಿದರು. ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯದ ಜನರಿಗೆ ವಿಶೇಷ ಧನ್ಯವಾದ ಸಲ್ಲಿಸುತ್ತೇನೆ. ಅದೇ ರೀತಿ ನನ್ನ ಕುಟುಂಬಸ್ಥರು ಬೆನ್ನಿಗೆ ನಿಂತು ಧೈರ್ಯ ತುಂಬಿದರು. ಜೊತೆಗೆ ಮಾಧ್ಯಮಗಳ ಸಹಕಾರ ಕೂಡ ನನಗೆ ಸ್ಫೂರ್ತಿ ತುಂಬಿತು. ಖಂಡಿತವಾಗಲೂ ಆ ಕ್ಷಣ ನೆನಪು ಮಾಡಿಕೊಂಡರೆ ಇದು ನನಗೆ ಪುನರ್ಜನ್ಮವೇ ಸರಿ" ಎಂದರು.
"ವೈದ್ಯರು ಹೇಳಿದಷ್ಟು ದಿನ ವಿಶ್ರಾಂತಿ ತೆಗೆದುಕೊಳ್ಳಲು ಮನಸ್ಸಿದೆ. ಆದರೆ, ಜವಾಬ್ದಾರಿ ಹೆಚ್ಚಿದೆ. ಮಾರ್ಚ್ನಲ್ಲಿ ಬಜೆಟ್ ಮಂಡನೆ ಮಾಡಬೇಕು. ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಒಳ್ಳೆಯ ರೀತಿ ಕೆಲಸ ಮಾಡುತ್ತಿದೆ. ಈಗಾಗಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಲಸ ಮಾಡುತ್ತಿದ್ದಾನೆ. ಇನ್ನೂ ಮೂರು ವಾರ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಎಷ್ಟು ದಿನ ಆಗುತ್ತದೆಯೋ ಅಷ್ಟು ಮಾಡುತ್ತೇನೆ" ಎಂದು ತಿಳಿಸಿದರು.