ಕರ್ನಾಟಕ

karnataka

By ETV Bharat Karnataka Team

Published : 5 hours ago

ETV Bharat / state

ಸಂಪುಟ ನಿರ್ಧಾರಕ್ಕೂ ಮುಡಾ ಕೇಸ್​ಗೂ ಸಂಬಂಧ ಇಲ್ಲ: ಸಚಿವ ಕೃಷ್ಣ ಬೈರೇಗೌಡ - Minister Krishna Byregowda

ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆಗಳ ಸಿಬ್ಬಂದಿ ಮೇಲಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವ ಕುರಿತು ಮಾತನಾಡಿದ್ದಾರೆ. ಈ ಬಗ್ಗೆ ಗುರುವಾರದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದಿದ್ದಾರೆ.

minister-krishna-byregowda
ಸಚಿವ ಕೃಷ್ಣ ಬೈರೇಗೌಡ (ETV Bharat)

ಬೆಂಗಳೂರು : ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆಗಳ ಸಿಬ್ಬಂದಿ ಮೇಲಿನ ಪ್ರಕರಣಗಳನ್ನು ಸಿಬಿಐ ತನಿಖೆಗೆ ತೆಗೆದುಕೊಳ್ಳುವ ಬಗ್ಗೆ ಗುರುವಾರದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಬೇರೆ ಅರ್ಥ ನೀಡುವ ಅಗತ್ಯ ಇಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಯಾವುದೇ ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡುವ ಬಗ್ಗೆ ತಪ್ಪು ಗ್ರಹಿಕೆ ಆಗಿದೆ. ಅಸಲಿಗೆ ಯಾರೇ ಶಾಸಕ, ಸಚಿವ ಅಥವಾ ಖಾಸಗಿ ವ್ಯಕ್ತಿಗಳ ವಿರುದ್ಧ ಸಿಬಿಐ ವಿಚಾರಣೆ ಕೈಗೆತ್ತಿಕೊಳ್ಳಬೇಕು ಎಂದರೆ ಸರ್ಕಾರದ ಅನುಮತಿ ಕಡ್ಡಾಯ ಎಂಬ ನಿಯಮ ಈಗಾಗಲೇ ಇದೆ ಎಂದರು.

ರಾಜ್ಯ ಸರ್ಕಾರದ ಅನುಮತಿ ತೆಗೆದುಕೊಂಡೇ ಸಿಬಿಐ ಅಧಿಕಾರಿಗಳು ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಬೇಕು. ಈ ಸಂಬಂಧ ಸರ್ಕಾರ ಯಾವ ಬದಲಾವಣೆಯನ್ನೂ ಮಾಡಿಲ್ಲ. ಇದೇ ಕಾರಣಕ್ಕೆ ಇಂದು ಸಿಬಿಐ ಯಾವುದೇ ಪ್ರಕರಣ ತನಿಖೆಗೆ ತೆಗೆದುಕೊಳ್ಳಬೇಕು ಎಂದರೆ ಒಂದೋ ರಾಜ್ಯ ಸರ್ಕಾರ ಅನುಮತಿ ನೀಡಬೇಕು. ಇಲ್ಲವೇ ನ್ಯಾಯಾಲಯ ನಿರ್ದೇಶಿಸಬೇಕು ಎಂಬುದು ನಿಯಮ ಎಂದು ಹೇಳಿದರು.

ಆದರೆ, 2005 ರಲ್ಲಿ ನಾವು ಒಂದು ವಿನಾಯಿತಿ ನೀಡಿದ್ದೆವು. ಕೆಲವು ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆಗಳ ಸಿಬ್ಬಂದಿ ಮೇಲೆ ಕೇಸ್ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಸಿಬಿಐಗೆ ವಿನಾಯಿತಿ ನೀಡಿತ್ತು. ಈಗ ಆ ವಿನಾಯಿತಿಯನ್ನು ನಮ್ಮ ಸರ್ಕಾರ ಹಿಂಪಡೆದಿದೆ ಅಷ್ಟೆ. ಏಕೆಂದರೆ ಕಾನೂನು ಪ್ರಕಾರ ಆ ಹಕ್ಕು ಇರುವುದು ರಾಜ್ಯ ಪೊಲೀಸರಿಗೆ ಮಾತ್ರ. ಹೀಗಾಗಿ ಈ ನಿರ್ಧಾರ ಯಾವುದೇ ಮಂತ್ರಿ ಅಥವಾ ಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟ ವಿಚಾರ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮುನಿರತ್ನ ಅಪರಾಧದಲ್ಲಿ ಬಿಜೆಪಿಗರೂ ಭಾಗಿ? : ಶಾಸಕ ಮುನಿರತ್ನ ಅವರ ಎಲ್ಲಾ ಅಪರಾಧ ಪ್ರಕರಣಗಳಲ್ಲೂ ಬಿಜೆಪಿಯ ಇತರೆ ನಾಯಕರೂ ಭಾಗಿಯಾಗಿದ್ದಾರಾ?. ಇದೇ ಕಾರಣಕ್ಕೆ ಎಲ್ಲರೂ ಒಟ್ಟಾಗಿ ಮುನಿರತ್ನನನ್ನು ಉಳಿಸುವ ಕೆಲಸಕ್ಕೆ ಮುಂದಾಗಿದ್ದಾರಾ? ಎಂದು ಸಚಿವರು ಅನುಮಾನ ವ್ಯಕ್ತಪಡಿಸಿದರು.

ಮುನಿರತ್ನ ತನ್ನನ್ನು ವಿಕಾಸಸೌಧ ಕಚೇರಿಯಲ್ಲೇ ಅತ್ಯಾಚಾರ ಮಾಡಿದ್ದಾರೆ. ಕೆಲವು ಅತ್ಯಾಚಾರ ಪ್ರಕರಣಗಳಿಗೆ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ ಎಂದು ಮಹಿಳೆಯೊಬ್ಬರು ನ್ಯಾಯಾಧೀಶರ ಎದುರು ಸೆಕ್ಷನ್ 164 ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಇದಲ್ಲದೆ, ರಾಜಕೀಯ ಹೊಂದಾಣಿಕೆ ಇಲ್ಲದ ಕಾರಣ ಅವರದ್ದೇ ಪಕ್ಷದಲ್ಲಿರುವ ಎದುರಾಳಿ ಕಾರ್ಪೊರೇಟರ್ ಪತಿಗೆ ಏಡ್ಸ್ ಸೋಂಕಿತ ಮಹಿಳೆಯ ಮೂಲಕ ಹನಿಟ್ರ್ಯಾಪ್ ಮಾಡಿಸಿ ಆತನಿಗೂ ಮಾರಕ ರೋಗ ಹರಡಿಸುವ ಯೋಜನೆ ರೂಪಿಸಿದ್ದಾರೆ. ಓರ್ವ ಐಎಎಸ್ ಅಧಿಕಾರಿ ಕೂಡ ಇವರ ಸಹಾಯ ತಗೊಂಡು ಮತ್ತೊಬ್ಬರನ್ನು ಹನಿಟ್ರ್ಯಾಪ್ ಮಾಡಲು ಮುಂದಾಗಿರುವ ಬಗ್ಗೆ ತನಿಖೆಯಿಂದ ಮಾಹಿತಿ ಹೊರಬಿದ್ದಿದೆ. ಈತ ಎಷ್ಟು ಜನಕ್ಕೆ ಏಡ್ಸ್ ಹಬ್ಬಿಸಿದ್ದಾರೆ. ಎಷ್ಟು ಜನರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿದ್ದಾರೆ ಗೊತ್ತಿಲ್ಲ ಎಂದರು.

ಮುನಿರತ್ನ ಅವರನ್ನು ಬಿಜೆಪಿ ಅಮಾನತು ಮಾಡಿದೆಯಾ? : ವಿಕಾಸಸೌಧದಲ್ಲೂ ಅತ್ಯಾಚಾರದಂತಹ ಗಂಭೀರ ಅಪರಾಧ ಎಸಗಿದ್ದಾರೆ. ಈ ಬಗ್ಗೆ ಸ್ವತಃ ಸಂತ್ರಸ್ತೆ ನ್ಯಾಯಾಲಯದ ಎದುರು ಹೇಳಿಕೆ ದಾಖಲಿಸಿದ್ದಾರೆ. ಇವೆಲ್ಲಾ ಗಾಳಿಯಲ್ಲಿ ಗುಂಡು ಹಾರಿಸುವ ಹಿಟ್ ಅಂಡ್ ರನ್ ಹೇಳಿಕೆಗಳಲ್ಲ. ಇವೆಲ್ಲವೂ ಸಂತ್ರಸ್ತೆ ನ್ಯಾಯಾಲಯದ ಎದುರು ನೀಡಿರುವ ಹೇಳಿಕೆ. ಆದರೆ, ಇಷ್ಟೆಲ್ಲಾ ಆಗಿದ್ರೂ ಮುನಿರತ್ನ ಅವರನ್ನು ಬಿಜೆಪಿ ಅಮಾನತು ಮಾಡಿದೆಯಾ? ಇದು ಅವರಿಗೆ ರಕ್ಷಣೆ ಹೌದಾ, ಅಲ್ವಾ ? ಸಂತ್ರಸ್ತೆ ನ್ಯಾಯಾಧೀಶರ ಎದುರು ನೀಡಿದ ಹೇಳಿಕೆಯೂ ಲೆಕ್ಕಕ್ಕೆ ಇಲ್ವ?. ಮುನಿರತ್ನ ಅವರ ಎಲ್ಲಾ ಅಪರಾಧ ಕೆಲಸದಲ್ಲೂ ಬಿಜೆಪಿಯೂ ಭಾಗವಾಗಿರುವುದರಿಂದ ಬಿಜೆಪಿ ನಾಯಕರು ಅವರ ರಕ್ಷಣೆಗೆ ನಿಂತಿದ್ದಾರಾ? ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ :ರಾಜ್ಯಪಾಲರ ಕಚೇರಿಯಿಂದಲೇ ಕಡತ, ದಾಖಲೆಗಳು ಸೋರಿಕೆಯಾಗುತ್ತಿರುವುದು ಗೊತ್ತಾಗಿದೆ : ಸಚಿವ ಕೃಷ್ಣ ಬೈರೇಗೌಡ - Minister krishna byre gowda

ABOUT THE AUTHOR

...view details