ಕರ್ನಾಟಕ

karnataka

By ETV Bharat Karnataka Team

Published : 4 hours ago

ETV Bharat / state

ಹಾವೇರಿಯಲ್ಲಿ ಸಾರಿಗೆ ವ್ಯವಸ್ಥೆಯ ಕೊರತೆ; ಸಾರ್ವಜನಿಕರ ಅಸಮಾಧಾನ - Haveri Lacks Public Transport

ಜಿಲ್ಲೆಯಾಗಿ ಅಭಿವೃದ್ಧಿಗೊಂಡಿರುವ ಹಾವೇರಿಯಲ್ಲಿ ಸಾರಿಗೆ ವ್ಯವಸ್ಥೆ ಕೊರತೆ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಕಚೇರಿಯಿಂದ ಹಿಡಿದು ಕಾಲೇಜು, ವಸತಿ ನಿಲಯಕ್ಕೂ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಹಾವೇರಿಯಲ್ಲಿ ಸಾರಿಗೆ ವ್ಯವಸ್ಥೆಯ ಕೊರತೆ
ಹಾವೇರಿಯ ಬಸ್‌ ನಿಲ್ದಾಣವೊಂದರ ಸುತ್ತ ಗಿಡಗಂಟಿ ಬೆಳೆದಿರುವುದು. (ETV Bharat)

ಹಾವೇರಿ:ಹಾವೇರಿ ಜಿಲ್ಲಾ ಕೇಂದ್ರವಾಗಿ 27 ವರ್ಷಗಳು ಕಳೆದಿವೆ. ಜಿಲ್ಲೆಯಾಗಿ ಘೋಷಣೆಯಾದ ನಂತರ ಹಾವೇರಿ ನಗರ ಅಷ್ಟದಿಕ್ಕುಗಳಲ್ಲಿ ಅಭಿವೃದ್ದಿ ಕಂಡಿದೆ. ನಗರಕ್ಕೆ ಪ್ರತಿನಿತ್ಯ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಜನ ಹಲವು ಕಾರ್ಯಗಳಿಗೆ ಆಗಮಿಸುತ್ತಾರೆ. ಆದರೆ ಹೀಗೆ ಬರುವ ಜನರಿಗೆ ಕಚೇರಿಗಳಿಗೆ ತೆರಳಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ.

ತಮ್ಮ ಮಕ್ಕಳು ಓದುವ ವಸತಿ ನಿಲಯಗಳು, ಕಾಲೇಜುಗಳಿಗೆ ತೆರಳಲು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕು. ಈ ಬಗ್ಗೆ ವಿದ್ಯಾರ್ಥಿಗಳು ತಿಂಗಳಿಗೆ ಒಂದು ಪ್ರತಿಭಟನೆ ಮಾಡುವ ಅನಿವಾರ್ಯತೆ ಎದುರಾಗಿದೆ. ಅದರಲ್ಲೂ ಶಕ್ತಿ ಯೋಜನೆ ಜಾರಿಯಾದ ಮೇಲೆ ವಿದ್ಯಾರ್ಥಿಗಳು ಬಸ್ಸಿನ ಬಾಗಿಲಿನಲ್ಲಿ ನೇತಾಡುತ್ತಾ ಶಾಲಾ, ಕಾಲೇಜು​ಗಳಿಗೆ ತೆರಳುತ್ತಿದ್ದಾರೆ. 2013ರಲ್ಲಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ 10ಕ್ಕೂ ಅಧಿಕ ಬಸ್ ನಿಲ್ದಾಣಗಳನ್ನು ನಗರದ ವಿವಿಧೆಡೆ ಸ್ಥಾಪಿಸಲಾಯಿತು. ಆದರೆ ಕೆಲವೇ ಕೆಲವು ದಿನಗಳ ಕಾಲ ಓಡಾಡಿದ ನಗರ ಸಾರಿಗೆ ನಂತರ ಕಾರಣಾಂತರಗಳಿಂದ ಬಂದ್ ಆಗಿದ್ದು ಮತ್ತೆ ಆರಂಭವಾಗಲಿಲ್ಲ.

ಹಾವೇರಿಯಲ್ಲಿ ಸಾರಿಗೆ ವ್ಯವಸ್ಥೆಯ ಕೊರತೆ ಬಗ್ಗೆ ಸಾರ್ವಜನಿಕರ ಅಭಿಪ್ರಾಯ (ETV Bharat)

ಹತ್ತು ವರ್ಷಗಳ ಹಿಂದೆ ಇದ್ದ ಹಾವೇರಿ ನಗರಕ್ಕೂ ಈಗಿನ ಹಾವೇರಿ ನಗರಕ್ಕೂ ಸಾಕಷ್ಟು ಬದಲಾವಣೆಯಾಗಿದೆ. ದಿನದಿಂದ ದಿನಕ್ಕೆ ನಗರ ಬೆಳೆಯುತ್ತಿದೆ. ಜನರಿಗೆ ನಗರ ಸಾರಿಗೆ ಇಂದು ಅತ್ಯಗತ್ಯ. ಜಿಲ್ಲಾಡಳಿತ ಸಾರಿಗೆ ಇಲಾಖೆ ಆದಷ್ಟು ಬೇಗ ನಗರ ಸಾರಿಗೆ ಆರಂಭಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಕೊನೆಯ ಪಕ್ಷ ಒಂದೆರಡು ಬಸ್‌ಗಳನ್ನಾದರೂ ಹಾವೇರಿ ಬಸ್​ ನಿಲ್ದಾಣ, ರೈಲು ನಿಲ್ದಾಣ, ಗಾಂಧಿಪುರ ಕಾಲೇಜು, ಸುಭಾಸವೃತ್ತ, ಮುನಿಸಿಫಲ್ ಮೈದಾನ, ಮೆಡಿಕಲ್ ಕಾಲೇಜು, ದೇವಗಿರಿ ಜಿಲ್ಲಾಡಳಿತ ಭವನ, ಇಂಜಿನಿಯರಿಂಗ್ ಕಾಲೇಜು, ವಿಜ್ಞಾನ ಕೇಂದ್ರ, ಸಾರಿಗೆ ಕಚೇರಿ, ಕೆರಿಮತ್ತಿಹಳ್ಳಿ, ಹಾವೇರಿ ವಿವಿ, ಉಪಕಾರಾಗೃಹ, ಸಶಸ್ತ್ರ ಮೀಸಲು ಪೊಲೀಸ್ ವಸತಿ ನಿಲಯ ಮಾರ್ಗಗಗಳಲ್ಲಿ ಹಾಕಬೇಕು. ಎರಡು ಬಸ್‌ಗಳು ಒಂದು ತುದಿಯಿಂದ ಇನ್ನೊಂದೆರಡು ಬಸ್‌ಗಳು ಮತ್ತೊಂದು ತುದಿಯಿಂದ ನಗರದಲ್ಲಿ ಸಂಚರಿಸಿದರೆ ಬಡವರು ಖಾಸಗಿ ವಾಹನಗಳಿಗೆ ಅಧಿಕ ಹಣ ತೆರುವ ಸಂದರ್ಭ ಕಡಿಮೆಯಾಗುತ್ತದೆ. ಈ ಕುರಿತಂತೆ ವಿದ್ಯಾರ್ಥಿ ಮುಖಂಡರು, ಸಾಮಾಜಿಕ ಸೇವಕರ ಅಧಿಕಾರಿಗಳು, ಪೋಷಕರ ಜೊತೆ ಚರ್ಚಿಸಿ ಜಿಲ್ಲಾಡಳಿತ ಸಾರಿಗೆ ಇಲಾಖೆಗೆ ತೊಂದರೆಯಾಗದಂತೆ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಮತ್ತು ಇಲಾಖೆಗೆ ಲಾಭ ತರುವ ನಿಟ್ಟಿನಲ್ಲಿ ಮಾರ್ಗಗಳನ್ನು ಸಿದ್ದಪಡಿಸಬೇಕಿದೆ. ಆ ಮೂಲಕ ಬಡಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಎನ್ನುವುದು ಸ್ಥಳೀಯರ ಒತ್ತಾಯ.

ಇದನ್ನೂ ಓದಿ:ಏಷ್ಯಾದ ಅತಿ ಎತ್ತರದ ನಮ್ಮ ಮೆಟ್ರೋ ನಿಲ್ದಾಣ ವರ್ಷಾಂತ್ಯಕ್ಕೆ ಕಾರ್ಯಾರಂಭ: ಹಳದಿ ಮಾರ್ಗದ ಪ್ರಾಯೋಗಿಕ ಸಂಚಾರ ಪೂರ್ಣ - Asia Tallest Metro Station

ABOUT THE AUTHOR

...view details