ಕರ್ನಾಟಕ

karnataka

ETV Bharat / state

ಮಂಡ್ಯ: ಹಳ್ಳಕ್ಕೆ ಬಿದ್ದ ಕೆಎಸ್​ಆರ್​ಟಿಸಿ ಬಸ್, ಹಲವರಿಗೆ ಗಾಯ - KSRTC Bus Accident

ಬೆಂಗಳೂರಿನಿಂದ ಮೈಸೂರಿನ ಕಡೆಗೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಚಾಲಕನ ನಿಯಂತ್ರಣ ತಪ್ಪಿ ಮಂಡ್ಯದ ರಾಗಿಮುದ್ದನಹಳ್ಳಿ ಗೇಟ್ ಬಳಿ ಅಪಘಾತಕ್ಕೀಡಾಗಿದೆ.

By ETV Bharat Karnataka Team

Published : Jun 30, 2024, 12:42 PM IST

Bengaluru Mysuru Express Highway  Mandya  Road Acciden
ಬೆಂಗಳೂರು- ಮೈಸೂರು ಎಕ್ಸ್​ಪ್ರೆಸ್ ಹೈವೇಯಲ್ಲಿ ರಸ್ತೆ ಅಪಘಾತ (ETV Bharat)

ಮಂಡ್ಯ:ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕೆಎಸ್​ಆರ್​ಟಿಸಿ ಬಸ್ ಡಿವೈಡರ್ ಮತ್ತು ತಂತಿ ಬೇಲಿಗೆ ಡಿಕ್ಕಿ ಹೊಡೆದು ಸರ್ವೀಸ್ ರಸ್ತೆಗೆ ಹಾರಿ ಪಕ್ಕದ ಹಳ್ಳಕ್ಕೆ ಉರುಳಿದೆ. ಮಂಡ್ಯದ ರಾಗಿಮುದ್ದನಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ.

ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಒಂದು ಕಾರು, ನಾಲ್ಕು ಬೈಕ್​ಗಳು ಜಖಂಗೊಂಡಿವೆ. ಬಸ್ ಚಾಲಕನ ಕಾಲು ಮುರಿದಿದೆ. ಏಳೆಂಟು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಮಹಿಳೆಯೊಬ್ಬರನ್ನು ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

''ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮಾಡಿರುವ ಅವೈಜ್ಞಾನಿಕ ಕಾಮಗಾರಿಯಿಂದ ನಿರಂತರ ಅಪಘಾತ ಪ್ರಕರಣಗಳು ನಡೆಯುತ್ತಿವೆ. ರಸ್ತೆಯಲ್ಲಿ ಕ್ಯಾಮೆರಾಗಳನ್ನು ಹಾಕಿದ್ರೆ ಸಾಲದು, ತೀವ್ರ ತಿರುವು, ಹಳ್ಳ, ದಿಬ್ಬ ಹಾಗೂ ಅಪಾಯದ ಸ್ಥಳಗಳಲ್ಲಿ ಸೂಕ್ತ ಸೂಚನಾ ಫಲಕಗಳನ್ನೂ ಹಾಕಬೇಕು" ಎಂದು ಸ್ಥಳೀಯರಾದ ಕಿರಣ್​ ಹೇಳಿದರು.

ವರ್ಷದ ಹಿಂದಷ್ಟೇ ಈ ಹೈವೇ ಲೋಕಾರ್ಪಣೆಯಾಗಿತ್ತು. ಸಾರ್ವಜನಿಕ ಸೇವೆಗೆ ಸಮರ್ಪಣೆಯಾದ ದಿನದಿಂದ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ.

ಪತ್ಯೇಕ ಘಟನೆ- ಕಂದಕಕ್ಕೆ ಉರುಳಿದ ಸಾರಿಗೆ ಬಸ್:ತಿರುವು ಪಡೆದುಕೊಳ್ಳುತ್ತಿದ್ದ ವೇಳೆ ಸಾರಿಗೆ ಬಸ್​ಕಂದಕಕ್ಕೆ ಉರುಳಿ ಬಿದ್ದು ಮೂವರು ಗಂಭೀರ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆಯ ಮರಡಿಹುಂಡಿ ಗ್ರಾಮದ ಬಳಿ ನಡೆದಿದೆ.

ನಂಜನಗೂಡು ತಾಲ್ಲೂಕಿನ ಬಿಳುಗಲಿ ಗ್ರಾಮದಿಂದ ಎಸ್.ಹೊಸಕೋಟೆ ಮಾರ್ಗವಾಗಿ 346 ನಂಬರ್​ನ ಸಾರಿಗೆ ಬಸ್ ಮೈಸೂರಿಗೆ ತೆರಳುತ್ತಿತ್ತು. ಅತೀ ವೇಗದಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ‌. ವೇಗವಾಗಿ ಬಂದು ತಿರುವು ಪಡೆದುಕೊಳ್ಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಸ್ ಪಲ್ಟಿಯಾಗಿ ಬಿದ್ದಿದೆ ಎನ್ನಲಾಗಿದೆ.

ಸುಮಾರು 25ಕ್ಕೂ ಹೆಚ್ಚು ಪ್ರಯಾಣಿಕರು ಬಸ್​ನಲ್ಲಿದ್ದರು. ಚಾಲಕ ಸೇರಿದಂತೆ ಮೂವರು ಪ್ರಯಾಣಿಕರಿಗೆ ಗಂಭೀರ ಗಾಯ, ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ವರುಣಾ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಸುಳ್ಯ: ಕುಸಿದ ಮಣ್ಣಿನಡಿ ಸಿಲುಕಿದ ಕಾರ್ಮಿಕ ಕೂದಲೆಳೆ ಅಂತರದಲ್ಲಿ ಪಾರು - Laborer Rescued

ABOUT THE AUTHOR

...view details