ಕರ್ನಾಟಕ

karnataka

ETV Bharat / state

ಕರ್ನಾಟಕ-ಮಹಾರಾಷ್ಟ್ರ ಬಸ್ ಸಂಚಾರ ಫೆ.27ರಂದು ಮಧ್ಯಾಹ್ನ ಪುನಾರಂಭ: ಬೆಳಗಾವಿ ಡಿಸಿ - KARNATAKA MAHARASHTRA BUS

ಕರ್ನಾಟಕ-ಮಹಾರಾಷ್ಟ್ರ ನಡುವೆ ಫೆ.27ರಂದು ಬಸ್ ಸಂಚಾರ ಪುನಾರಂಭವಾಗಲಿದೆ ಎಂದು ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.

Dc-Mohammed-roshan
ಡಿಸಿ ಮೊಹಮ್ಮದ್ ರೋಷನ್, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು (ETV Bharat)

By ETV Bharat Karnataka Team

Published : Feb 25, 2025, 9:19 PM IST

ಬೆಳಗಾವಿ:ಕನ್ನಡಿಗ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣದಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡೂ ರಾಜ್ಯಗಳ ನಡುವೆ ಬಸ್ ಸಂಚಾರ ಬಂದ್ ಆಗಿದ್ದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಇದು ಫೆ.27ರ ವರೆಗೂ ಮುಂದುವರಿಯುವ ಸಾಧ್ಯತೆಯಿದೆ.

ಸದ್ಯಕ್ಕೆ ಕರ್ನಾಟಕದಿಂದ ಮಹಾರಾಷ್ಟ್ರ ಗಡಿಯವರೆಗೆ ಮಾತ್ರ ಬಸ್ ಬಿಡಲಾಗುತ್ತಿದೆ. ಅದೇ ರೀತಿ ಮಹಾರಾಷ್ಟ್ರದಿಂದ ಕರ್ನಾಟಕ ಗಡಿಯವರೆಗೆ ಪ್ರಯಾಣಿಕರನ್ನು ಇಳಿಸಲಾಗುತ್ತಿದೆ. ಅಲ್ಲಿಂದ ಆಯಾ ರಾಜ್ಯದ ವಾಹನಗಳಲ್ಲಿ ಪ್ರಯಾಣಿಕರು ತಾವು ಹೋಗಬೇಕಾದ ಸ್ಥಳಗಳಿಗೆ ತೆರಳುತ್ತಿದ್ದಾರೆ. ಈ ವೇಳೆ ಖಾಸಗಿ ವಾಹನಗಳು ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿರುವ ಆರೋಪವೂ ಕೇಳಿ ಬಂದಿದೆ.

ಡಿಸಿ ಮೊಹಮ್ಮದ್ ರೋಷನ್, ಡಿಪೋ‌ದ ಸಂಚಾರ ನಿಯಂತ್ರಕಿ‌ ಸುಶೀಲಾ ಕೋಟಗಿ ಹೇಳಿಕೆಗಳು (ETV Bharat)

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಈಟಿವಿ ಭಾರತದ ಜೊತೆಗೆ ಮಾತನಾಡಿದ ಪ್ರಯಾಣಿಕ ಫುರ್ಕಾನ್ ಸಯ್ಯದ್, ''ನಾನು ಮಹಾರಾಷ್ಟ್ರದ ನಾಸಿಕ್​ಗೆ ಹೋಗಬೇಕು. ಆದರೆ, ಬೆಳಗಾವಿಯಿಂದ ಬಸ್ ಬಿಡುತ್ತಿಲ್ಲ. ಭಾಷಾ ವಿಚಾರದಲ್ಲಿ ನಡೆದ ಗಲಾಟೆಯಿಂದ ಬಸ್ ಸಂಚಾರಕ್ಕೆ ಅಡ್ಡಿಯಾಗಿದೆ. ಶೀಘ್ರವೇ ಎರಡೂ ಸರ್ಕಾರಗಳು ಸಮಸ್ಯೆ ಬಗೆಹರಿಸಿ ಎಂದಿನಂತೆ ಬಸ್ ಬಿಟ್ಟರೆ ತುಂಬಾ ಅನುಕೂಲ ಆಗುತ್ತದೆ'' ಎಂದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರತಿಕ್ರಿಯೆ: ''ಉಭಯ ರಾಜ್ಯಗಳ ನಡುವೆ ಬಸ್ ಸಂಚಾರ ಪುನರಾರಂಭ‌ ಕುರಿತು ಕೊಲ್ಹಾಪುರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿದ್ದೇವೆ. ಎರಡು-ಮೂರು ದಿನಗಳಿಂದ ಬಸ್ ಸಂಚಾರ ಸ್ಥಗಿತವಾಗಿದೆ. ನಮ್ಮ ಗಡಿಯಲ್ಲಿ ನಾವು, ಮಹಾರಾಷ್ಟ್ರ ಗಡಿಯಲ್ಲಿ ಅವರು ಭದ್ರತೆ ಹೆಚ್ಚಿಸಿಕೊಳ್ಳಲು ಇಬ್ಬರೂ ಪೊಲೀಸ್ ವರಿಷ್ಠಾಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಹಾಗಾಗಿ, 48 ಗಂಟೆಯೊಳಗೆ ಸುಗಮ ಬಸ್ ಕಾರ್ಯಾಚರಣೆ ಪ್ರಕ್ರಿಯೆ ರೂಪಿಸಿಕೊಳ್ಳಲಿದ್ದೇವೆ.‌ 27ರಂದು ಮಧ್ಯಾಹ್ನ ಮಹಾರಾಷ್ಟ್ರಕ್ಕೆ ಪುನಃ ಬಸ್ ಸೇವೆ ಆರಂಭಿಸಲು ಎಲ್ಲ ವ್ಯವಸ್ಥೆ ಮಾಡಿದ್ದೇವೆ'' ಎಂದು ಹೇಳಿದರು.

''ನಿನ್ನೆ ರಾಜ್ಯ ಸರ್ಕಾರದ‌ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ದೂರವಾಣಿ ಮೂಲಕ ಮಾತನಾಡಿ ಮಾಹಿತಿ ಪಡೆದರು. ಅಲ್ಲದೇ ನಮ್ಮ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಜೊತೆಗೆ, ಅದೇ ರೀತಿ ನಮ್ಮ ಡಿಜಿಪಿ ಮಹಾರಾಷ್ಟ್ರ ಡಿಜಿಪಿ ಜೊತೆಗೆ ಮಾತನಾಡಿದ್ದಾರೆ. ಕೇವಲ ಬೆಳಗಾವಿ ಕೊಲ್ಹಾಪುರ ಅಷ್ಟೇ ಅಲ್ಲದೇ ಸಾಂಗಲಿ, ಸೊಲ್ಲಾಪುರ ಸೇರಿ ಎಲ್ಲೆಲ್ಲಿ ಅಹಿತಕರ ಘಟನೆಗಳು ಸಂಭವಿಸಿವೆಯೋ ಅಲ್ಲೆಲ್ಲಾ ಸೂಕ್ತ ಬಂದೋಬಸ್ತ್ ನೀಡಬೇಕು. ಕರ್ನಾಟಕದ ವಿವಿಧ ಭಾಗದಲ್ಲಿ ನಾವು ಬಂದೋಬಸ್ತ್ ನೀಡುವ ಬಗ್ಗೆ ಉನ್ನತ ಮಟ್ಟದಲ್ಲಿ ಅವರು ಚರ್ಚಿಸಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ಮುಖ್ಯಮಂತ್ರಿಗಳ ಗಮನಕ್ಕೂ ತರಲಿದ್ದಾರೆ'' ಎಂದರು.

''ನಾಳೆಯಿಂದ ಮಹಾರಾಷ್ಟ್ರಗಡಿವರೆಗೆ ನಾವು ಬಸ್ ಬಿಡುತ್ತೇವೆ. ಅಲ್ಲಿ ಮಹಾರಾಷ್ಟ್ರ ಸಾರಿಗೆ ಬಸ್​ಗಳು ಅವರನ್ನು ಹತ್ತಿಸಿಕೊಳ್ಳಲಿದ್ದಾರೆ. ಅದೇ ರೀತಿ ಮಹಾರಾಷ್ಟ್ರ ಗಡಿಯಿಂದ ನಾವು ಅಲ್ಲಿನ ಪ್ರಯಾಣಿಕರಿಗೆ ಸೇವೆ ಒದಗಿಸಲಿದ್ದೇವೆ. 27ರಂದು ಮಧ್ಯಾಹ್ನದಿಂದಲೇ ಪೂರ್ಣ ಪ್ರಮಾಣದಲ್ಲಿ ಎರಡೂ ರಾಜ್ಯಗಳಿಂದ ಬಸ್ ಸೇವೆ ಆರಂಭವಾಗಲಿದೆ'' ಎಂದು ತಿಳಿಸಿದರು.

ಬೆಳಗಾವಿ ಡಿಪೋ‌ದ ಸಂಚಾರ ನಿಯಂತ್ರಕಿ‌ ಸುಶೀಲಾ ಕೋಟಗಿ ಮಾತನಾಡಿ, ''ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗಲು ಬಸ್ ಸಂಚಾರ ಇಲ್ಲದ ಕಾರಣ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಎರಡೂ ರಾಜ್ಯಗಳ ಗಡಿವರೆಗೆ ಮಾತ್ರ ಬಸ್ ಹೋಗುತ್ತಿವೆ. ಬೆಳಗಾವಿಯಿಂದ ಸಂಕೇಶ್ವರ ಹಾಗೂ ನಿಪ್ಪಾಣಿವರೆಗೆ ಇಂದು 64 ಬಸ್​ಗಳು ಸಂಚರಿಸಿವೆ. ಪ್ರಯಾಣಿಕರು ಮಹಾರಾಷ್ಟ್ರ ಗಡಿಯಲ್ಲಿ ಇಳಿದುಕೊಂಡು ಬೇರೆ ವಾಹನಗಳ ಮೂಲಕ ತಮ್ಮೂರಿಗೆ ಹೋಗುತ್ತಿದ್ದಾರೆ. ಹಾಗಾಗಿ, ಬಹಳಷ್ಟು ಪ್ರಯಾಣಿಕರು ತಮ್ಮ ಬಳಿ ಬಂದು ಬಸ್ ಯಾವಾಗ ಪ್ರಾರಂಭ ಆಗುತ್ತವೆ ಎಂದು ವಿಚಾರಿಸುತ್ತಿದ್ದಾರೆ'' ಎಂದರು.

ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು (ETV Bharat)

ಬೆಳಗಾವಿ-ಕೊಲ್ಹಾಪುರ ಜಿಲ್ಲಾಧಿಕಾರಿಗಳ ಸಮನ್ವಯ ಸಭೆ:ಉಭಯ ರಾಜ್ಯಗಳ ನಡುವೆ ಬಸ್ ಸಂಚಾರ ಪುನರಾರಂಭ‌ ಕುರಿತು ಬೆಳಗಾವಿ-ಕೊಲ್ಹಾಪುರ ಜಿಲ್ಲಾಧಿಕಾರಿಗಳ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ‌‌‌ ವಿಡಿಯೋ ಸಂವಾದ ಸಭೆ ಸೋಮವಾರ ಜರುಗಿತು.

ವೀಡಿಯೋ ಸಂವಾದ ಸಮನ್ವಯ ಸಭೆಯಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಸಾರಿಗೆ ಸಂಸ್ಥೆಯ ಬಸ್ ಪ್ರಯಾಣಿಕರ ಅನುಕೂಲಕ್ಕಾಗಿ ಮಹಾರಾಷ್ಟ್ರ ಗಡಿ ಪ್ರದೇಶಗಳವರೆಗೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್​ಗಳು ಸಂಚರಿಸುತ್ತಿದ್ದು, ಅಲ್ಲಿಂದ ತಮ್ಮ ರಾಜ್ಯ ಸಾರಿಗೆ ಬಸ್​ಗಳ‌ ಮೂಲಕ ಪ್ರಯಾಣಿಕರನ್ನು ಕರೆದೊಯ್ಯುವಂತೆ ಕೊಲ್ಹಾಪುರ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಉಭಯ ರಾಜ್ಯಗಳ ಸಾರಿಗೆ ಬಸ್​ಗಳ‌ ಮೇಲೆ‌ ದಾಳಿ ಮಾಡುವವರ ಮೇಲೆ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಬಸ್​ಗಳ‌ ಮೇಲೆ‌ ದಾಳಿ‌ ಮಾಡಿದವರ ಮೇಲೆ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ:ಕಂಡಕ್ಟರ್ ಮೇಲಿನ ಪೋಕ್ಸೋ ಕೇಸ್ ವಾಪಸ್ : ನಾವು ಕನ್ನಡಾಭಿಮಾನಿಗಳು ಎಂದ ಬಾಲಕಿ ಪೋಷಕರು; ಸಿಪಿಐ ವರ್ಗಾವಣೆ - BELAGAVI CONDUCTOR CASE

ABOUT THE AUTHOR

...view details