ಬೆಂಗಳೂರು:ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರಗಳ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆಗಳ ಮೇಲೆ ಪರಿಶೀಲನಾ ಕಾರ್ಯ ಮುಂದುವರೆಸಿರುವ ಲೋಕಾಯುಕ್ತ ಹಾಗೂ ಅಧಿಕಾರಿಗಳ ತಂಡ, ಸೋಮವಾರ ಕಾನೂನು ಹಾಗೂ ಮಾಪನ ಇಲಾಖೆಯ ಬೆಂಗಳೂರು ಪ್ರಧಾನ ಕಚೇರಿ ಸೇರಿದಂತೆ ವಿವಿಧ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಇತ್ತೀಚೆಗೆ ನಗರದ 54 ಬಿಬಿಎಂಪಿ ಕಚೇರಿಗಳ ಮೇಲೆ ತಪಾಸಣೆ ನಡೆಸಿ ನಡೆಯುತ್ತಿದ್ದ ಲೋಪದೋಷಗಳನ್ನು ಪತ್ತೆ ಹಚ್ಚಿದ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್, ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಹಾಗೂ ಬಿ. ವೀರಪ್ಪ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಒಳಗೊಂಡ 40 ಜನರ ತಂಡವು, ಆಲಿ ಆಸ್ಕರ್ ರಸ್ತೆಯಲ್ಲಿರುವ ಮಾಪನ ಇಲಾಖೆಯ ಪ್ರಧಾನ ಕಚೇರಿ ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿಯಲ್ಲಿ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಮಹಿಳಾ ಸಿಬ್ಬಂದಿಯ ಫೋನ್-ಪೇ ಪರಿಶೀಲನೆ : ಮಾಪನ ಇಲಾಖೆ ಮೇಲೆ ಮಧ್ಯಾಹ್ನ ಲೋಕಾಯುಕ್ತ ಬಿ.ಎಸ್. ಪಾಟೀಲ್ ನೇತೃತ್ವದ 36 ತಂಡವು ದಿಢೀರ್ ತೆರಳಿ ಪರಿಶೀಲನೆ ನಡೆಸಿತು. ಕಚೇರಿಯಲ್ಲಿರುವ ಹಾಜರಾತಿ ಪುಸ್ತಕ ಸೇರಿದಂತೆ ವಿವಿಧ ರಿಜಿಸ್ಟ್ರರ್ ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಹಾಜರಾತಿ ಪುಸ್ತಕದಲ್ಲಿ ಇವತ್ತಿನ ಹಾಜರಾತಿ ಜೊತೆಗೆ ನಾಳೆ ಹಾಜರಾತಿ ಹಾಕಿರುವುದನ್ನ ಕಂಡು ಗರಂ ಆದರು. ನಾಳೆಯದನ್ನ ''ಇವತ್ತೇ ಹಾಕುತ್ತೀಯಾ?, ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದೆಯಾ?'' ಎಂದು ಕೆಲಸ ಬಿಟ್ಟಿದವರ ಹೆಸರನ್ನ ಉಲ್ಲೇಖವಾಗಿರುವುದನ್ನ ಕಂಡು ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
''ಕಚೇರಿಗೆ ತಡವಾಗಿ ಬಂದಿದ್ದ ಮಹಿಳಾ ಸಿಬ್ಬಂದಿ ಜ್ಯೋತಿ ಎಂಬುವರನ್ನ ಇಬ್ಬರು ಉಪಲೋಕಾಯುಕ್ತರು ಪ್ರಶ್ನಿಸಿದರು. ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ಏಳು ವರ್ಷದಿಂದ ಎಂದು ಉತ್ತರಿಸಿದ ಮಹಿಳೆಯನ್ನ ಏಳು ವರ್ಷಗಳಿಂದ ಯಾಕೆ ವರ್ಗಾವಣೆಯಾಗಿಲ್ಲ'' ಎಂದು ಉಪಲೋಕಾಯುಕ್ತರು ಮರುಪ್ರಶ್ನಿಸಿದರು. ಅವರ ಬಳಿಯಿದ್ದ ಮೊಬೈಲ್ ಪಡೆದು ಫೋನ್-ಪೇ ಪರಿಶೀಲಿಸಿದಾಗ ಕಳೆದ ಮೂರು ತಿಂಗಳಲ್ಲಿ 3 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆಯಾಗಿರುವುದನ್ನ ಕಂಡು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ''ಮಹಿಳಾ ಸಿಬ್ಬಂದಿ ಬೀದರ್ನಲ್ಲಿರುವ ಮನೆ ಮಾರಾಟದಿಂದ ಬಂದ ಹಣವೆಂದು ಸಮಜಾಯಿಷಿ ನೀಡಿದರು. ಗಂಡನ ಬದಲು ತನಗೆ ಹಣ ವರ್ಗಾವಣೆ ಮಾಡಿರುವುದಾಗಿ ಹೇಳಿದರು. ಕಚೇರಿಯಲ್ಲಿ ಕೆಲಸ ಮಾಡುವಾಗ ಹಣ ವರ್ಗಾವಣೆಯಾಗುವ ಮೇಲಾಧಿಕಾರಿಗಳ ಅನುಮತಿ ಪಡೆದುಕೊಂಡಿದ್ದೀರಾ'' ಎಂಬ ಪ್ರಶ್ನೆಗೆ ಮಹಿಳೆ ಉತ್ತರಿಸದೆ ಪೇಚಾಡಿದರು.
ತರಾಟೆಗೆ ತೆಗೆದುಕೊಂಡ ಇಬ್ಬರು ಉಪಲೋಕಾಯುಕ್ತರು: ಕಚೇರಿಯ ರಿಜಿಸ್ಟ್ರರ್ಗಳನ್ನ ಪರಿಶೀಲಿಸುವಾಗ ಜಪ್ತಿ ಅಥವಾ ಸೀಜ್ ಮಾಡಲಾದ ವಸ್ತುಗಳಿಟ್ಟಿರುವ ರೂಮ್ಗಳಿಗೆ ಬೀಗ ಹಾಕಿರುವುದನ್ನ ಪ್ರಶ್ನಿಸಿದರು. "ಕೊಠಡಿಗಳಿಗೆ ಯಾಕೆ ಬೀಗ ಹಾಕಿದ್ದೀರಾ? ಫೀಲ್ಡ್ ವರ್ಕ್ಗೆ ಹೋಗಿದ್ದರೆ ಫೈಲ್ನಲ್ಲಿ ನಮೂದು ಮಾಡಬೇಕಿತ್ತು. ಅಲ್ಲದೆ ಈ ಬಗ್ಗೆ ಸರಿಯಾದ ರಿಜಿಸ್ಟ್ರರ್ ಯಾಕೆ ಮಾಡಿಲ್ಲ? ಬೀಗ ಹಾಕಿ ಹೊರಗೆ ಹೋಗುವ ಅಧಿಕಾರಿಗಳಿಗೆ ಅನುಮತಿ ನೀಡಿದ್ದು ಯಾರು? ಎಂದು ಅಧಿಕಾರಿಗಳಿಗೆ ಉಪಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು.
ಕಚೇರಿ ಬಯೋಮೆಟ್ರಿಕ್ ಹಾಗೂ ಸಿಸಿಟಿವಿ ಪರಿಶೀಲಿಸಿದಾಗ ಅಧಿಕಾರಿ ಹಾಗೂ ಸಿಬ್ಬಂದಿ ಸರಿಯಾಗಿ ಕಚೇರಿಗೆ ಬಾರದಿರುವುದು ಕಂಡು ಬಂತು. ಸುದ್ದಿ ತಿಳಿದು ಹೊರ ಹೋಗಿದ್ದ ಅಧಿಕಾರಿಗಳಿಗೂ ಚಳಿ ಬಿಡಿಸಿದ ಇಬ್ಬರು ಉಪಲೋಕಾಯುಕ್ತರು, ಮೊಮೆಂಟ್ ರಿಜಿಸ್ಟರ್ ಯಾಕೆ ನಿರ್ವಹಣೆ ಮಾಡಿಲ್ಲ? ಯಾವಾಗ ಹಾಗೂ ಹೆಂಗೇ ಬೇಕಾದರೂ ಹೋಗಬಹುದಾ? ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.