ಕರ್ನಾಟಕ

karnataka

ಸಿಎಂ ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮದಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಸ್ಪಷ್ಟವಾಗಿ ಕಾಣುತ್ತಿದೆ: ಬಿ.ವೈ.ವಿಜಯೇಂದ್ರ - Valmiki Corporation Scam

By ETV Bharat Karnataka Team

Published : Jul 24, 2024, 3:03 PM IST

''ಸಿಎಂ ಸಿದ್ದರಾಮಯ್ಯ ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮದಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಸ್ಪಷ್ಟವಾಗಿ ಕಾಣುತ್ತಿದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

BY Vijayendra  CM Siddaramaiah  Valmiki Corporation Scam  Bengaluru
ಬಿ.ವೈ.ವಿಜಯೇಂದ್ರ (ETV Bharat)

ಸಿಎಂ ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮದಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಸ್ಪಷ್ಟವಾಗಿ ಕಾಣುತ್ತಿದೆ: ಬಿ.ವೈ.ವಿಜಯೇಂದ್ರ (ETV Bharat)

ಬೆಂಗಳೂರು:''ಸಿಎಂ ವಾಲ್ಮೀಕಿ ಅಭಿವೃದ್ಧಿ ನಿಗಮ‌ ಹಗರಣದಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಸ್ಪಷ್ಟವಾಗಿ ಕಾಣುತ್ತಿದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಡಿ ವಿರುದ್ಧ ನಿನ್ನೆ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ''ಸಿಎಂ ನೇತೃತ್ವದಲ್ಲಿ ನಿನ್ನೆ ಪ್ರತಿಭಟನೆ ಮಾಡಿದ್ದಾರೆ. ಸಿಎಂ ಹಾಗೂ ಮಂತ್ರಿಗಳ ನಡವಳಿಕೆ ಗಮನಿಸಿದ್ರೆ ಅಯ್ಯೋ ಅನ್ನಿಸುತ್ತದೆ. ಇಷ್ಟು ದೊಡ್ಡ ಹಗರಣ ಆಗಿದೆ. 187 ಕೋಟಿ‌ ರೂ. ಲೂಟಿ ಹೊಡೆದು ನಮ್ಮ‌ ರಾಜ್ಯದಿಂದ ಹೊರ ರಾಜ್ಯಕ್ಕೆ ಹಣ ವರ್ಗಾವಣೆ ಮಾಡಿ ಹೆಂಡ ಖರೀದಿ ಮಾಡಿರೋದು ಬಹಿರಂಗವಾಗಿದೆ. ಇ.ಡಿ. ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿದೆ. ಅದಕ್ಕೂ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ'' ಎಂದು ಆರೋಪಿಸಿದರು.

''ಸಿಎಂ ಪ್ರಾಮಾಣಿಕರಿದ್ದರೆ ಎಸ್​ಐಟಿ ರಚನೆ ಮಾಡಿದಾಗಲೇ ನಾಗೇಂದ್ರ, ದದ್ದಲ್ ಅವರನ್ನ ನೋಟಿಸ್ ಕೊಟ್ಟು ಕರೆಸಬೇಕಾಗಿತ್ತು. ಇದ್ಯಾವುದನ್ನೂ ಎಸ್​ಐಟಿ‌ ಮಾಡಲಿಲ್ಲ. ಪರಿಶಿಷ್ಟ ಜಾತಿ, ಪಂಗಡಗಳಿಗೆ ಇಟ್ಟಿರುವ ಹಣವನ್ನ ದೋಚಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ತನಿಖೆ ಆಗಬೇಕು. ಸಿಬಿಐ ಕೂಡ ತನಿಖೆ ಮಾಡುತ್ತಿದೆ. ಇ.ಡಿ‌ ಸಹ ತನಿಖೆ ಮಾಡುತ್ತಿರೋದು ಸ್ವಾಗತಾರ್ಹ. ದೊಡ್ಡ ಸಮುದಾಯಕ್ಕೆ ಅನ್ಯಾಯ ಆಗಿದೆ. ಅದಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ಇ.ಡಿ ಮಾಡುತ್ತಿದೆ. ಅದಕ್ಕೂ ಪ್ರಚಾರ ಮಾಡುತ್ತಿದ್ದಾರೆ. ಸರ್ಕಾರವನ್ನು ಇ.ಡಿ ಮೂಲಕ ಅಲ್ಲಾಡಿಸುತ್ತಿದ್ದಾರೆ ಅಂತ ಆರೋಪ ಮಾಡುತ್ತಿದ್ದಾರೆ'' ಎಂದು ವಾಗ್ದಾಳಿ ನಡೆಸಿದ್ದಾರೆ.

''ನೀವು ಪ್ರಾಮಾಣಿಕರಾಗಿದ್ದರೆ ಸಿಬಿಐ, ಇ.ಡಿ ತನಿಖೆಗೆ ಸಹಕರಿಸಬೇಕೆಂದು ಒತ್ತಾಯಿಸುತ್ತೇನೆ. ಸದನದಲ್ಲಿ ಯಾವ ವಿಚಾರ ಬೇಕೋ ಆ ವಿಚಾರವನ್ನು ಮಾತ್ರ ತೆಗೆದುಕೊಳ್ತಾರೆ. ಅಧಿಕಾರಿಯ ಡೆತ್ ನೋಟ್ ನಲ್ಲಿರುವ ಪ್ರಮುಖ‌ ಅಂಶಗಳನ್ನು ಉಲ್ಲೇಖ‌ ಮಾಡದೆ, ಸಿಎಂ ಡೆತ್ ನೋಟ್​ನ್ನು ಸಿಎಂ ಮನಸೋಇಚ್ಛೆ ಓದಿದ್ದಾರೆ. ಚಂದ್ರಶೇಖರನ್​ ಪತ್ನಿ‌ ಕೊಟ್ಟಿರುವಂತಹ ದೂರನ್ನು ಆಧಾರವಾಗಿ ಇಟ್ಟುಕೊಂಡು ರಾಜ್ಯದ ಜನರನ್ನು ತಪ್ಪು‌ ದಾರಿಗೆ ಎಳೆದುಕೊಂಡು ಹೋಗುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ನಾಗೇಂದ್ರ ಅಷ್ಟೇ ಅಲ್ಲದೆ ದೊಡ್ಡ ತಲೆಗಳು ಉರುಳುತ್ತವೆ. ಸಿಎಂ ಆತಂಕದಲ್ಲಿದ್ದಾರೆ. ಕೆಲವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ'' ಎಂದು ಆರೋಪಿಸಿದರು.

ಮುಡಾ ಹಗರಣ ವಿಚಾರವಾಗಿ ಬಿಜೆಪಿ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿ, ''ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣದ ಬಗ್ಗೆ ಸಮರ್ಪಕ ತನಿಖೆ ಆಗಲಿ ಅಂತ ಆಡಳಿತ ಪಕ್ಷದಲ್ಲೇ ಒತ್ತಡ ಇದೆ. ಸಿಎಂ ಕುಟುಂಬವೇ ಇದರಲ್ಲಿ ಭಾಗಿಯಾಗಿದೆ. ಅಕ್ರಮವಾಗಿ ಅನುಕೂಲ ಪಡೆದುಕೊಂಡಿದೆ. ಈ‌ ಅಕ್ರಮದ ಬಗ್ಗೆ ಸದನದಲ್ಲಿ ರಾಜ್ಯದ ಜನತೆಯ ಮುಂದೆ ಬಿಚ್ಚಿಟ್ಟಿದ್ದೇವೆ. ಸದನದಲ್ಲಿ‌ ಇಂದಿನಿಂದ ಮುಡಾ ವಿಚಾರವಾಗಿ ಹೋರಾಟ ಮಾಡುತ್ತೇವೆ'' ಎಂದರು.

ಇದನ್ನೂ ಓದಿ:'ಶಕ್ತಿ' ಯೋಜನೆಯಿಂದ ಲಾಭದತ್ತ ಸಾರಿಗೆ ನಿಗಮಗಳು: ನಿರ್ವಹಣೆ, ಡೀಸೆಲ್​ ದರ ಹೆಚ್ಚಳದಿಂದ ಲಾಭ ತೋರಿಸುತ್ತಿಲ್ಲ: ರಾಮಲಿಂಗಾರೆಡ್ಡಿ - Shakti Scheme

ABOUT THE AUTHOR

...view details