ಬೆಂಗಳೂರು:ಸಾರಾಯಿ, ಶೇಂದಿ, ನೀರಾ ಕುರಿತು ವಿಧಾನ ಪರಿಷತ್ನಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ನೀರಾ ಕುಡಿದಿದ್ದೀರಾ ಎನ್ನುವ ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆಗೆ ನಿಮ್ಮಂತೆ ದಪ್ಪ ಇಲ್ಲ, ಅದನ್ನು ಕುಡಿದು ತಡೆದು ಕೊಳ್ಳುವ ಶಕ್ತಿ ಇಲ್ಲ ಎಂದು ವಿಧಾನ ಪರಿಷತ್ನ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟಕ್ಕರ್ ಕೊಟ್ಟರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ನ ಬಿ.ಕೆ. ಹರಿಪ್ರಸಾದ್, ''ಸಾರಾಯಿ ನಿಷೇಧ ಯಡಿಯೂರಪ್ಪ ಅವರ ಕಾಲದಲ್ಲಿ ಆಯ್ತು. ಆದರೆ, ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ. ಸಾವಿರಾರು ಮಂದಿ ಬೀದಿಗೆ ಬಂದರು, ಆತ್ಮಹತ್ಯೆಗೆ ಪ್ರಯತ್ನಿಸಿದರು. ಆದರೆ, ಈ ಸಮುದಾಯ ಪ್ರತಿಭಟನೆ ನಡೆಸಲಿಲ್ಲ. ಬೇರೆ ಸಮುದಾಯ ಆದರೆ ರಕ್ತಪಾತ ಆಗುತ್ತಿತ್ತು. ಆದರೆ, ಸಾರಾಯಿ ಮಾರಾಟ ಮಾಡುವ ಸಮುದಾಯ ಪ್ರತಿಭಟನೆ ಮಾಡಲಿಲ್ಲ. ಸಾರಾಯಿ ನಿಷೇಧದಿಂದ ನಿರ್ಗತಿಕರಾದವರ ಬಗ್ಗೆ ಸರ್ಕಾರ ಕಾರ್ಯಕ್ರಮ ಏನಾದ್ರು ಇದೆಯಾ'' ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ''ಸಾರಾಯಿ ನಿಷೇಧ ಹಿನ್ನೆಲೆ ಹರಿಪ್ರಸಾದ್ ಕಾಳಜಿ ವ್ಯಕ್ತಪಡಿಸಿದ್ದಾರೆ. 16-17 ವರ್ಷದ ಹಿಂದಿನ ವಿಚಾರ ಇದು. ಸುವರ್ಣ ಕಾಯಕ ಯೋಜನೆ ಜಾರಿ ಮಾಡಿದರೂ, 47,639 ಜನ ನಿರುದ್ಯೋಗಿಗಳಾದರು. ಕೋರ್ಟ್ ಸಹ ಎರಡು ತಿಂಗಳಲ್ಲಿ ವ್ಯವಸ್ಥೆ ಮಾಡಿ ಅಂದಿತ್ತು. ಆದರೆ, ಆ ಸಮುದಾಯಕ್ಕೆ ಏನು ಮಾಡಲು ಆಗಿಲ್ಲ. ಈಗ ಆ ಬಗ್ಗೆ ಯಾರಾದರು ಬಂದರೆ, ಅವರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ'' ಎಂದು ಭರವಸೆ ನೀಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿ.ಕೆ. ಹರಿಪ್ರಸಾದ್, ''ಆ ಸಮುದಾಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ'' ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆರ್ ಬಿ ತಿಮ್ಮಾಪುರ, ''ಸಾರಾಯಿ ಯೋಜನೆಯಲ್ಲಿ ಬೀದಿ ಪಾಲಾದ ಕುಟುಂಬದ ಮಕ್ಕಳಿಗೆ ಏನಾದರೂ ಅವಕಾಶ ಮಾಡಲು ಸರ್ಕಾರ ವರದಿ ತರಿಸಿ ಕ್ರಮ ಕೈಗೊಳ್ಳುತ್ತದೆ'' ಎಂದರು.