ಬಳ್ಳಾರಿ:"ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟರೆ ಅವರ ಸೀಟಿನಲ್ಲಿ ಯಾರು ಕೂರಲಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಹಾಗಾಗಿ ಅವರು ರಾಜೀನಾಮೆ ಕೊಡಲೆಂದು ನಾನು ಹೇಳುವುದಿಲ್ಲ"ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಹೇಳಿದರು.
ಬಳ್ಳಾರಿಯ ಖಾಸಗಿ ಹೋಟೆಲ್ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
"ಮುಡಾ ಪ್ರಕರಣದಲ್ಲಿ ಏನಾಗಿದೆ, ಏನಾಗಿಲ್ಲ ಎನ್ನುವ ವಾದ ಬಿಟ್ಟು, ಸಿದ್ದರಾಮಯ್ಯನವರು ಪಡೆದ ಎಲ್ಲ ಸೈಟುಗಳನ್ನು ಕೂಡಲೇ ವಾಪಸ್ ನೀಡಿ ತಪ್ಪು ತಿದ್ದಿಕೊಳ್ಳಬೇಕು. ಇದಕ್ಕೆ ಬದಲಾಗಿ ನ್ಯಾಯಾಲಯದಲ್ಲಿ ಅರ್ಜಿ ಹಾಕುತ್ತೇವೆ, ಕಾನೂನು ಹೋರಾಟ ಮಾಡುತ್ತೇವೆ ಎನ್ನುವುದನ್ನು ಕೈಬಿಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಸಲಹೆಗಾರರನ್ನು ಇಟ್ಟುಕೊಳ್ಳಬೇಕು. ಇಂತಹ ಪ್ರಕರಣಗಳಲ್ಲಿ ಉತ್ತಮ ಸಲಹೆ ನೀಡುವವರನ್ನು ನಂಬಬೇಕು. ದಾರಿ ತಪ್ಪಿಸುವವರಿಂದ ದೂರ ಇರಬೇಕು" ಎಂದು ಸಲಹೆ ನೀಡಿದರು.
ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ (ETV Bharat) ಮುಂದುವರೆದು ಮಾತನಾಡಿ, "ಬಳ್ಳಾರಿ ಸೇರಿದಂತೆ ಎಲ್ಲಿಯೇ ಅಕ್ರಮ ಗಣಿಗಾರಿಕೆ ನಡೆಯಲಿ, ಅದರ ವಿರುದ್ದ ಹೋರಾಡುತ್ತೇವೆ. ಮಾಜಿ ಸಚಿವ ಜನಾರ್ಧನ ರೆಡ್ಡಿ ಓಬಳಾಪೂರಂನಲ್ಲಿ ಮರು ಆರಂಭಿಸಲು ಉದ್ದೇಶಿಸಿದ್ದ ಗಣಿಗಾರಿಕೆ ಕಂಪನಿ ವಿರುದ್ಧ ಕಾನೂನು ಹೋರಾಟ ಮಾಡಿದ್ದೇವೆ. ಗಣಿಬಾಧಿತ ಪ್ರದೇಶದ ಅಭಿವೃದ್ದಿಗೆ ಮೀಸಲಿಟ್ಟ ಹಣದ ದುರ್ಬಳಕೆಗೆ ಬಿಡುವುದಿಲ್ಲ. ಕೆಲವು ಚುನಾಯಿತರು ಈ ಮೊತ್ತವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮಾರ್ಗಸೂಚಿ ಬಿಟ್ಟು ಬೇರೆಡೆ ಹಣ ಬಳಕೆಗೆ ನಮ್ಮ ಆಕ್ಷೇಪವಿದೆ" ಎಂದು ಎಸ್.ಆರ್. ಹಿರೇಮಠ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ರಾಜಕಾರಣಿಯಾಗಿ ಸಿಎಂ ಆಗುವ ಆಕಾಂಕ್ಷೆ ತಪ್ಪಲ್ಲ, ನಾನು ಸಿದ್ದರಾಮಯ್ಯಗೆ ಕಾಂಪಿಟೇಟರ್ ಅಲ್ಲ: ಮತ್ತೆ ದೇಶಪಾಂಡೆ ಸ್ಪಷ್ಟನೆ - R V Deshpande