ಕರ್ನಾಟಕ

karnataka

ತುಂಗಭದ್ರಾ ವಿಚಾರದಲ್ಲಿ ನಾನು ರಾಜಕೀಯ ಮಾಡಲು ಬಯಸುವುದಿಲ್ಲ: ಸಿಎಂ ಸಿದ್ದರಾಮಯ್ಯ - CM Siddaramaiah

By ETV Bharat Karnataka Team

Published : Aug 13, 2024, 1:41 PM IST

Updated : Aug 13, 2024, 3:08 PM IST

ತುಂಗಭದ್ರಾ ಜಲಾಶಯದ ಮಂಡಳಿಗೆ ಅಧ್ಯಕ್ಷನನ್ನು ಯಾರು ನೇಮಕ ಮಾಡುತ್ತಾರೆ ಎನ್ನುವುದ ತಿಳಿಯದೆ ಬಿಜೆಪಿಯವರು ಎಲ್ಲದಕ್ಕೂ ಕಾಂಗ್ರೆಸ್​ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

CM Siddaramaiah
ಸಿಎಂ ಸಿದ್ದರಾಮಯ್ಯ (ETV Bharat)

ಕೊಪ್ಪಳ: "ತುಂಗಭದ್ರಾ ಜಲಾಶಯಕ್ಕೆ ಒಂದು ಮಂಡಳಿ ಇದೆ. ಅದಕ್ಕೆ ಒಬ್ಬ ಅಧ್ಯಕ್ಷನನ್ನು ಕೇಂದ್ರ ಸರ್ಕಾರದಿಂದ ನೇಮಕ ಮಾಡಲಾಗುತ್ತದೆ. ಬಿಜೆಪಿಯವರು ರಾಜಕೀಯವಾಗಿ ಟೀಕೆ ಮಾಡುತ್ತಾರೆ. ಅವರಿಗೆ ಅಧ್ಯಕ್ಷನನ್ನು ಯಾರು ನೇಮಕ ಮಾಡುತ್ತಾರೆ ಎನ್ನುವ ವಿಷಯವೇ ತಿಳಿದಿಲ್ಲ. ಹಾಗಾಗಿ ನಾನು ತುಂಗಭದ್ರಾ ಜಲಾಶಯದ ವಿಷಯದಲ್ಲಿ ರಾಜಕೀಯ ಮಾಡೋದಿಲ್ಲ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಿಎಂ ಸಿದ್ದರಾಮಯ್ಯ (ETV Bharat)

ಕೊಪ್ಪಳದ ಬಸಾಪುರ ಬಳಿಯ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. "ತುಂಗಭದ್ರಾ ಜಲಾಶಯದ 19ನೇ ಗೇಟ್ ಚೈನ್ ಕಟ್ಟಾಗಿದೆ. ಅದಕ್ಕೆ ಬಿಜೆಪಿಯವರು ಇದರಲ್ಲಿ ರಾಜ್ಯ ಸರ್ಕಾರದ ಹೊಣೆಗೇಡಿತನ ಇದೆ ಎಂದು ಹೇಳುತ್ತಿದ್ದಾರೆ. ಹಾಗಂದ್ರೆ ಏನರ್ಥ? ಸದ್ಯ ಟಿಬಿ ಬೋರ್ಡ್​ನಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಹೇಳೋಕೆ ಹೋಗುವುದಿಲ್ಲ. ಸದ್ಯ ಜಲಾಶಯದಲ್ಲಿ ನೀರು ತುಂಬಿದ್ದು, ಅದರಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಹೊರಬಿಡಬೇಕಿದೆ. ಇನ್ನೂ 50-60 ಟಿಎಂಸಿ ನೀರು ಉಳಿಯುತ್ತದೆ. ಮುಂದೆ ಮಳೆಯಾಗಿ ಮತ್ತೆ ಜಲಾಶಯ ತುಂಬುತ್ತದೆ ಎಂಬ ಆಶಾಭಾವ ಇಟ್ಟುಕೊಳ್ಳೋಣ" ಎಂದರು.

ರೈತರಿಗೆ ಯಾವುದೇ ರೀತಿ ತೊಂದರೆಯಾಗುವುದಿಲ್ಲ: "ತುಂಗಭದ್ರಾ ಜಲಾಶಯ ಅತ್ಯಂತ ಹಳೆಯ ಡ್ಯಾಂ. ಸುಮಾರು 70 ವರ್ಷದಿಂದ ಲಕ್ಷಾಂತರ ರೈತರಿಗೆ ವರದಾನವಾಗಿದೆ. ಡ್ಯಾಂ ಇತಿಹಾಸದಲ್ಲಿ ಈಥರದ ಸಮಸ್ಯೆಗಳು ಬಂದಿಲ್ಲ. ಇದರ ಬಗ್ಗೆ ಪಕ್ಷಬೇಧ ಮರೆತು ನಾವೆಲ್ಲ ಒಂದಾಗಿ ಕೆಲಸ ಮಾಡಬೇಕು. ರೈತರ ಹಿತ ಕಾಯುವುದು ಸರ್ಕಾರದ ಕೆಲಸ. ನಾನು ಯಾರ ಮೇಲೂ ಗೂಬೆ ಕೂರಿಸುವುದಿಲ್ಲ. ಗೂಬೆ ಕೂರಿಸೋದೆ ಬಿಜೆಪಿಯವರಿಗೆ ಒಂದು ಕೆಲಸವಾಗಿದೆ" ಎಂದು ಸಿಎಂ ಹೇಳಿದರು.

ಇದನ್ನೂ ಓದಿ:ತುಂಗಭದ್ರಾ ಬಾಧಿತ ರೈತರಿಗೆ ಸರ್ಕಾರ ಪ್ರತಿ ಹೆಕ್ಟೇರ್​ಗೆ ₹50 ಸಾವಿರ ಪರಿಹಾರ ನೀಡಬೇಕು: ವಿಜಯೇಂದ್ರ - Tungabhadra Dam

Last Updated : Aug 13, 2024, 3:08 PM IST

ABOUT THE AUTHOR

...view details