ಕರ್ನಾಟಕ

karnataka

By ETV Bharat Karnataka Team

Published : 5 hours ago

ETV Bharat / state

ಮುಡಾ ನಿವೇಶನ ವಾಪಸ್ ಮಾಡಿದ್ದು ಸ್ವಲ್ಪ ತಡವಾಗಿರಬಹುದು, ಒಮ್ಮೊಮ್ಮೆ ತಡವಾಗಿದ್ರೂ ನಿರ್ಧಾರ ಸರಿ ಇರುತ್ತೆ: ಪರಮೇಶ್ವರ್​ - Home Minister Parameshwar

ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ವಿವಾದಿತ ಮುಡಾ ಸೈಟ್​​ಗಳನ್ನು ವಾಪಸ್ ನೀಡಲು ನಿರ್ಧರಿಸಿದ್ದರೂ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.

ಗೃಹ ಸಚಿವ ಜಿ.ಪರಮೇಶ್ವರ್
ಗೃಹ ಸಚಿವ ಜಿ.ಪರಮೇಶ್ವರ್ (ETV Bharat)

ಬೆಂಗಳೂರು: ಮುಡಾ ಸೈಟುಗಳನ್ನು ವಾಪಸ್ ಮಾಡಿದ್ದು ಸ್ವಲ್ಪ ತಡವಾಗಿರಬಹುದು. ಒಮ್ಮೊಮ್ಮೆ ತಡವಾಗಿದ್ರೂ ನಿರ್ಧಾರ ಸರಿ ಇರುತ್ತೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಸಿಎಂ ಪತ್ನಿ ನಿವೇಶನ ವಾಪಸ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿಎಂ ಶ್ರೀಮತಿಯವರು ಸೈಟುಗಳನ್ನು ವಾಪಸ್ ಮಾಡಲು ಪತ್ರ ಬರೆದಿದ್ದಾರೆ. ಇದು ಕಾನೂನಾತ್ಮಕವಾಗಿ ಮುಂದೇನು ಆಗುತ್ತೆ ಅಂತ ನೋಡಬೇಕು.‌ ಇದರಲ್ಲೂ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕ್ತಿದ್ದಾರೆ. ಸೈಟುಗಳನ್ನು ವಾಪಸ್ ಮಾಡಿದ್ದು ಸ್ವಲ್ಪ ತಡವಾಗಿರಬಹುದು. ಒಮ್ಮೊಮ್ಮೆ ತಡವಾಗಿದ್ರೂ ನಿರ್ಧಾರ ಸರಿ ಇರುತ್ತೆ ಎಂದರು.

ನಮ್ಮ 136 ಜನ ಶಾಸಕರೂ ಸಿಎಂ ಪರ ಒಟ್ಟಿಗೆ ನಿಲ್ತೀವಿ. ಕಾಂಗ್ರೆಸ್ ಪಕ್ಷ ಅವರ ಜತೆ ನಿಲ್ಲುತ್ತೆ. ಇದನ್ನು ಈಗಾಗಲೇ ಎಐಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ನಾವು ಅವರ ಜತೆ ನಿಲ್ಲುತ್ತೇವೆ ಎಂದು ಸಿದ್ದರಾಮಯ್ಯಗೆ ಬೆಂಬಲ ಸೂಚಿಸಿದರು.

ಪರಮೇಶ್ವರ್​ (ETV Bharat)

ಬಿಜೆಪಿಯವರು ರಾಜಕೀಯ ಮಾಡ್ತಿದ್ದಾರೆ:ಇ.ಡಿ ಪ್ರಕರಣ ದಾಖಲಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಕೇಂದ್ರ ಇದನ್ನೊಂದು ಅಸ್ತ್ರವಾಗಿ ಉಪಯೋಗಿಸಿಕೊಳ್ತಿದೆ. ಮುಡಾ ಪ್ರಕರಣದಲ್ಲಿ ರಾಜಕೀಯ ಮಾಡ್ತಿದ್ದಾರೆ. ಇದು ನಮ್ಮ ಆರೋಪ ಆಗಿತ್ತು, ಈಗ ಇದು ಫ್ರೂವ್ ಆಗಿದೆ. ಮೋದಿಯವರೇ ಭಾಷಣದಲ್ಲಿ ಮುಡಾ ಬಗ್ಗೆ ಮಾತಾಡಿದ್ದಾರೆ. ಬಿಜೆಪಿಯು ದುರುದ್ದೇಶದಿಂದ ಇದನ್ನೆಲ್ಲ ಮಾಡಿಸುತ್ತಿದ್ದಾರೆ. ಇಡಿಯಿಂದ ತನಿಖೆ ಮಾಡಿಕೊಳ್ಳಲಿ ಎಂದರು.

ಕೇಂದ್ರದ ಏಜೆನ್ಸಿಗಳ ಮೂಲಕ ಸಿದ್ದರಾಮಯ್ಯಗೆ ಮಾನಸಿಕವಾಗಿ ತೊಂದರೆ ಮಾಡಬೇಕೆಂಬ ದುರುದ್ದೇಶ ಬಿಜೆಪಿಯವರದ್ದು. ದುರುದ್ದೇಶದಿಂದ ಸರ್ಕಾರ ಅಸ್ಥಿರ ಮಾಡಲು ಹೊರಟಿದ್ದಾರೆ. ತನಿಖೆಗೆ ನಮ್ಮ ತಕರಾರು ಇಲ್ಲ. ಅವರ ಶ್ರೀಮತಿಯವರು ಸೈಟುಗಳನ್ನು ಯಾಕೆ ವಾಪಸ್ ಮಾಡ್ತಿದ್ದಾರೆ ಅಂತ ಪತ್ರದಲ್ಲೇ ಹೇಳಿದ್ದಾರೆ. ಏನು ಮಾಡಿದ್ರೂ ಬಿಜೆಪಿ ಟೀಕೆ ಮಾಡ್ತಿದೆ. ಕಾನೂನು ಹೋರಾಟಕ್ಕೂ ಟೀಕೆ, ಸೈಟು ವಾಪಸ್ ಕೊಟ್ರೂ ಟೀಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗ ನೈತಿಕ ಪ್ರಶ್ನೆ ಬರಲ್ಲ:ಸಿಎಂಗೆ ನೈತಿಕತೆ ಪ್ರಶ್ನೆ ಬರೋದು ಆರೋಪದಲ್ಲಿ ಸತ್ಯ ಇದ್ದಾಗ. ಸತ್ಯ ಇಲ್ಲ ಅಂದ್ರೆ ನೈತಿಕತೆ ಪ್ರಶ್ನೆ ಬರಲ್ಲ. ಇಡಿ, ಸಿಬಿಐಗೆ ಹೆದರಿಕೊಂಡರು ಅಂತ ಬೇಕಿದ್ದರೆ ಬಿಜೆಪಿಯವರು ಹೇಳಿಕೊಳ್ಳಲಿ. ಸಿಎಂ ಅವರು 62 ಕೋಟಿ ಕೊಡಿ ಅಂತ ಹೇಳಿದ್ರು ಅಷ್ಟೇ ಪತ್ರ ಬರೆದಿರಲಿಲ್ಲ ಎಂದು ತಿಳಿಸಿದರು.‌

ಈ ಪ್ರಕರಣದಲ್ಲಿ ಸಿಎಂ ಮತ್ತು ಅವರ ಪತ್ನಿ ಯಾವುದೇ ಹಣಕಾಸು ವ್ಯವಹಾರದಲ್ಲಿ ಭಾಗಿಯಾಗಿಲ್ಲ. ಆದರೂ ಇಡಿ ಹೇಗೆ ಮತ್ತು ಯಾಕೆ ಪ್ರಕರಣ ದಾಖಲಿಸಿದೆ ಎಂಬುದು ಗೊತ್ತಿಲ್ಲ. ಈ ಸಂದರ್ಭದಲ್ಲಿ ಇಡಿ ಪಾತ್ರ ಇರಲಿಲ್ಲ. ಈ ಬಗ್ಗೆ ಅವರೇ ಸ್ಪಷ್ಟಪಡಿಸಬೇಕಿದೆ ಎಂದು ಇಡಿ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ:ವಿಚಾರಣೆಗೆ ಬರುವಂತೆ ಲೋಕಾಯುಕ್ತ ಪತ್ರ: ಬೆಳ್ಳಂಬೆಳಗ್ಗೆ ಮೈಸೂರು ಲೋಕಾಯುಕ್ತಕ್ಕೆ ಬಂದ ಸ್ನೇಹಮಯಿ ಕೃಷ್ಣ - Snehamai Krishna

ABOUT THE AUTHOR

...view details