ಕರ್ನಾಟಕ

karnataka

ವಿದ್ಯುತ್ ಸ್ಪರ್ಶದಿಂದ ಆನೆ ಸೇರಿ ವನ್ಯಜೀವಿಗಳ ಸಾವು: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಹೈಕೊರ್ಟ್ - High Court

By ETV Bharat Karnataka Team

Published : Jun 14, 2024, 12:52 PM IST

ವಿದ್ಯುತ್ ಸ್ಪರ್ಶದಿಂದ ಆನೆ ಸೇರಿ ವನ್ಯಜೀವಿಗಳ ಸಾವು ಪ್ರಕರಣ ಸಂಬಂಧ ರಾಜ್ಯ ಹೈಕೋರ್ಟ್​ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡಿದೆ.

ಆನೆ
ಆನೆ (ETV Bharat)

ಬೆಂಗಳೂರು: ಆನೆಗಳು ಸೇರಿದಂತೆ ವನ್ಯ ಜೀವಿಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಈ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯ ಆಧಾರದ ಮೇಲೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಪ್ರಕರಣ ಸಂಬಂಧ ಅರ್ಜಿ ದಾಖಲಿಸಿದೆ.

ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಹೈಕೋರ್ಟ್​, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಈ ಸಂಬಂಧ ಮುಂದಿನ ವಿಚಾರಣೆ ವೇಳೆ ಲಿಖಿತ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿದೆ.

ರಾಜ್ಯದ ವನ್ಯಜೀವಿ ಧಾಮಗಳು ಸೇರಿದಂತೆ ವಿವಿಧ ಭಾಗಗಳಲ್ಲಿ ಆನೆಗಳು ಸೇರಿದಂತೆ ಇತರೆ ವನ್ಯಜೀವಿಗಳು ಅಸ್ವಾಭಾವಿಕ ಸಾವು ಗಂಭೀರವಾಗಿದೆ. ಘಟನೆ ಕುರಿತಂತೆ ಯಾವುದೇ ಎಚ್ಚರಿಕಾ ಕ್ರಮಗಳು ಇಲ್ಲವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಈ ಘಟನೆಗಳಿಗೆ ಕಾರಣವಾಗಿದೆ. ವನ್ಯಜೀವಿಧಾಮ ಮತ್ತು ರಕ್ಷಿತಾರಣ್ಯಗಳು ಮಾತ್ರವಲ್ಲದೆ, ಇತರೆ ಭಾಗಗಳಲ್ಲಿಯೂ ಆನೆಗಳು ಸೇರಿದಂತೆ ವನ್ಯಜೀವಿಗಳ ರಕ್ಷಣ ಮಾಡಬೇಕಾಗಿದೆ.

ಅಶ್ವತ್ಥಾಮ ಎಂಬ ಆನೆ ಮೈಸೂರಿನಲ್ಲಿ ಸಾವಿಗೀಡಾಗಿತ್ತು. ಅಲ್ಲದೆ, ಚಿಕ್ಕಮಗಳೂರಿನಲ್ಲಿ ಮತ್ತೊಂದು ಆನೆ ಹಾಗೂ ಮಡಿಕೇರಿಯಲ್ಲಿ ಎರಡು ಆನೆಗಳು ಸಾವಿಗೀಡಾಗಿದ್ದವು. ರಾಜ್ಯದಲ್ಲಿ ವಿದ್ಯುತ್ ಸ್ಪರ್ಶ ಮತ್ತು ಅಸ್ವಭಾವಿಕ ಕಾರಣಗಳಿಂದ ವನ್ಯಜೀವಿಗಳು ಸಾವನ್ನಪ್ಪುತ್ತಿವೆ. ಈ ಅಂಶ ಮತ್ತು ಮಾಧ್ಯಮಗಳ ವರದಿಗಳು ಪ್ರಕಾರ ಅಧಿಕಾರಿಗಳ ನಿಲರ್ಕ್ಷವೇ ಮತ್ತು ಎಚ್ಚರಿಕೆ ವಹಿಸದಿರುವುದೇ ಕಾರಣವಾಗಿದೆ.

ಈ ವಿಚಾರದಲ್ಲಿ ಅರಣ್ಯ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಶಾಸನಬದ್ಧ ಕಾರ್ಯಗಳ ಕುರಿತಂತೆ ತಿಳಿಸಬೇಕಾಗಿದೆ. ಅಲ್ಲದೆ, ಆನೆಗಳು ಸೇರಿದಂತೆ ವನ್ಯ ಜೀವಿ ಸಂಪತ್ತು ರಕ್ಷಣೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದಿನ ವಿಚಾರಣೆ ವೇಳೆ ಪ್ರತಿವಾದಿ ಇಲಾಖೆಗಳ ಅಧಿಕಾರಿಗಳು, ಆನೆ ಸೇರಿ ವನ್ಯಜೀವಿಗಳ ಅಸ್ವಾಭಾವಿಕ ಸಾವುಗಳನ್ನು ತಡೆಯುವುದು ಮತ್ತು ಅವುಗಳ ರಕ್ಷಣೆಯನ್ನು ಒದಗಿಸುವ ಕುರಿತು ಕೈಗೊಂಡಿರುವ ಕ್ರಮಗಳೇನು?, ಇತ್ತೀಚೆಗೆ ಬೆಳಕಿಗೆ ಬಂದ ಆನೆಗಳ ಸತತ ಸಾವುಗಳನ್ನು ತಡೆಯುವುದಕ್ಕೆ ಕೈಗೊಂಡಿರುವ ಕ್ರಮಗಳೇನು?, ಈ ರೀತಿಯ ಘಟನೆಗಳನ್ನು ತಡೆಯಲು ಅರಣ್ಯ ಇಲಾಖೆ ಅಧಿಕಾರಿಗಳು ಅಳವಡಿಸಿಕೊಂಡಿರುವ ಕಾರ್ಯವಿಧಾನಗಳು ಯಾವುವು?, ಈ ರೀತಿಯ ಸಾವುಗಳಿಗೆ ಆಧಿಕಾರಿಗಳ ಹೊಣೆಗಾರಿಕೆಗಳು ಏನು? ಎಂಬುದರ ಕುರಿತಂತೆ ಮುಂದಿನ ವಿಚಾರಣೆ ವೇಳೆ ವಿವರಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿ, ವಿಚಾರಣೆ ಮುಂದೂಡಿದೆ.

ಓದಿ:ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನಂಜುಂಡಪ್ಪ ವರದಿ ಅನುಷ್ಠಾನ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ - High Court Dismissed PIL

ABOUT THE AUTHOR

...view details