ಕರ್ನಾಟಕ

karnataka

ETV Bharat / state

'ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ಸಲ್ಲಿಸಲಾದ ಅರ್ಜಿಯನ್ನು ಪ್ರತಿವಾದಿಗಳ ವಾದ ಆಲಿಸದೇ ವಜಾಗೊಳಿಸುವಂತಿಲ್ಲ' - Domestic Violence Cases

ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ಸಲ್ಲಿಕೆಯಾದ ಅರ್ಜಿಯನ್ನು ಪ್ರತಿವಾದಿಗಳ ವಾದ ಆಲಿಸದೇ ವಜಾಗೊಳಿಸುವಂತಿಲ್ಲ ಎಂದು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

By ETV Bharat Karnataka Team

Published : Jul 4, 2024, 6:05 PM IST

HIGH COURT
ಹೈಕೋರ್ಟ್ (ETV Bharat)

ಬೆಂಗಳೂರು: ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ಮಹಿಳೆ ಸಲ್ಲಿಸುವ ಅರ್ಜಿಯ ಸಂಬಂಧ ಪ್ರತಿವಾದಿಗಳಿಗೆ (ಪತಿ ಮತ್ತವರ ಕುಟುಂಬ) ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸದೇ ವಜಾಗೊಳಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ತಿಳಿಸಿತು.

ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಅರ್ಜಿಯಲ್ಲಿರುವ ಅಂಶಗಳಲ್ಲಿ ಯಾವುದೇ ರೀತಿಯ ಕೌಟುಂಬಿಕ ಹಿಂಸೆ ನೀಡಲಾಗಿಲ್ಲ ಎಂಬುದಾಗಿ ಪರಿಗಣಿಸಿ ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿತು.

ಮಹಿಳೆ ಸಲ್ಲಿಸಿರುವ ಅರ್ಜಿಯಲ್ಲಿರುವ ಅಂಶಗಳನ್ನು ಪರಿಶೀಲಿಸಿದಲ್ಲಿ ಪ್ರತಿವಾದಿಗಳಿಂದ ಕೌಟುಂಬಿಕ ದೌರ್ಜನ್ಯ ನಡೆಸಿರುವ ಸಂಬಂಧ ಅಂಶಗಳು ಗೊತ್ತಾಗುತ್ತವೆ. ಅರ್ಜಿ ಸಲ್ಲಿಕೆಯಾದ ಬಳಿಕ ಕೌಟುಂಬಿಕ ನ್ಯಾಯಾಲಯ ಕನಿಷ್ಠ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಬೇಕಾಗಿತ್ತು. ಅರ್ಜಿದಾರರ ಕುರಿತು ಪೂರ್ವಾಗ್ರಹಪೀಡಿತವಾಗಿರುವ ಕೌಟುಂಬಿಕ ನ್ಯಾಯಾಲಯ ಅರ್ಜಿಯ ಕುರಿತು ಮೊಳಕೆಯಲ್ಲಿಯೇ ಚುವುಟಿ ಹಾಕಿದಂತೆ ತೋರುತ್ತಿದೆ ಎಂದಿತು.

ಅರ್ಜಿದಾರರು ತಮ್ಮ ಪತಿಯಿಂದ ಜೀವನಾಂಶ, ಉಳಿಯಲು ನಿವಾಸ ಕುರಿತಂತೆ ನ್ಯಾಯಾಲಯವನ್ನು ಕೋರಿದ್ದಾರೆ. ಆದ್ದರಿಂದ ವಿಚಾರಣಾ ನ್ಯಾಯಾಲಯ ಅರ್ಜಿ ಸಂಬಂಧ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿದ ಬಳಿಕ ಅರ್ಜಿದಾರರ ಕುರಿತಂತೆ ಸತ್ಯಾಂಶಗಳು ಕಂಡುಬರದಿದ್ದಲ್ಲಿ ಅರ್ಜಿಯನ್ನು ವಜಾಗೊಳಿಸುವ ಬದಲಾಗಿ ಸೂಕ್ತ ಆದೇಶವನ್ನು ಹೊರಡಿಸಬಹುದಾಗಿತ್ತು ಎಂದು ಪೀಠ ತಿಳಿಸಿದೆ.

ಈ ಕಾರಣಗಳಿಂದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ವಾಪಸ್ ಕಳುಹಿಸುತ್ತಿದ್ದು, ಅರ್ಜಿಯಲ್ಲಿ ಅಂಶಗಳನ್ನು ಪರಿಗಣಿಸಿ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸಬಹುದು ಎಂದು ಪೀಠ ಹೇಳಿತು.

ಇದನ್ನೂ ಓದಿ:ನಟ ದರ್ಶನ್, ಇತರೆ ಆರೋಪಿಗಳ ನ್ಯಾಯಾಂಗ ಬಂಧನ ಜುಲೈ 18ರವರೆಗೆ ವಿಸ್ತರಣೆ - Renukaswamy Murder Case

ABOUT THE AUTHOR

...view details