ಕರ್ನಾಟಕ

karnataka

ನ್ಯಾಯಾಲಯಗಳ ಆದೇಶ ಪಾಲನೆಗಾಗಿ ಪ್ರತಿ ಇಲಾಖೆಗೂ ಪ್ರತ್ಯೇಕ ಕೋಶ ರಚಿಸಿ: ಹೈಕೋರ್ಟ್ - High Court

By ETV Bharat Karnataka Team

Published : Aug 6, 2024, 7:29 AM IST

ನ್ಯಾಯಾಲಯಗಳ ಸರಳ ಆದೇಶಗಳನ್ನು ಒಂದೂವರೆ ವರ್ಷವಾದರೂ ಪರಿಗಣಿಸುತ್ತಿಲ್ಲ ಎಂದು ಮೌಖಿಕವಾಗಿ ಹೈಕೋರ್ಟ್ ಪೀಠ ತಿಳಿಸಿತು.

ಹೈಕೋರ್ಟ್
ಹೈಕೋರ್ಟ್ (ETV Bharat)

ಬೆಂಗಳೂರು: ನ್ಯಾಯಾಲಯದ ಆದೇಶಗಳು ಹಾಗೂ ತೀರ್ಪುಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲು ಅನುಕೂಲವಾಗುವಂತೆ ಪ್ರತಿಯೊಂದು ಇಲಾಖೆಯಲ್ಲೂ ಸಹ ಪ್ರತ್ಯೇಕ ಕೋಶಗಳನ್ನು ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ನ್ಯಾಯಾಲಯಗಳ ತೀರ್ಪು ಪಾಲನೆ ಮಾಡದ ಹಿನ್ನೆಲೆಯಲ್ಲಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ಅಲ್ಲದೇ, ಸಕಾರದ ಇಲಾಖೆಗಳಲ್ಲಿ ಒಂದು ಬಗೆಯ ಕಾನೂನು ಕೋಶಗಳನ್ನು ರಚನೆ ಮಾಡಬೇಕು, ಅವುಗಳು ಕೋರ್ಟ್ ಆದೇಶಗಳನ್ನು ಸ್ವೀಕರಿಸಿ, ನಿರ್ದೇಶಗಳನ್ನು ಪರಿಶೀಲಿಸಿ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು. ಇದರಿಂದ ನ್ಯಾಯಾಂಗ ನಿಂದನೆ ಅರ್ಜಿಗಳು ದಾಖಲಾಗುವುದು ತಪ್ಪುತ್ತದೆ. ಆ ಕೋಶಗಳಲ್ಲಿನ ಅಧಿಕಾರಿಗಳು ನ್ಯಾಯಾಲಯಗಳು ಕಾಲಕಾಲಕ್ಕೆ ನೀಡುವ ನಿರ್ದೇಶಗಳನ್ನು ಪಾಲನೆ ಮಾಡುವ ಕುರಿತು ಮೇಲ್ವಿಚಾರಣೆ ನಡೆಸಬೇಕು ಎಂದು ಪೀಠ ಸಲಹೆ ನೀಡಿದೆ.

ನ್ಯಾಯಾಲಯಗಳ ಸರಳ ಆದೇಶಗಳನ್ನು ಒಂದೂವರೆ ವರ್ಷವಾದರೂ ಪರಿಗಣಿಸುತ್ತಿಲ್ಲ ಎಂದು ಮೌಖಿಕವಾಗಿ ಹೇಳಿದ ನ್ಯಾಯಾಲಯ, ಅಡ್ವೋಕೇಟ್ ಜನರಲ್ ಅವರ ಜತೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಸರ್ಕಾರ ಒಂದು ಯೋಜನೆಯನ್ನು ಸಲ್ಲಿಸಲಿ ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಆ.22ಕ್ಕೆ ಮುಂದೂಡಿತು.

ಇದನ್ನೂ ಓದಿ: ಲೋಕಾಯುಕ್ತ ಅವ್ಯವಹಾರ ಆರೋಪ: ತೀರ್ಪು ಪ್ರಕಟಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ ವಿಸ್ತರಣೆ - Lokayukta Case

ಕೋರ್ಟ್ ಆದೇಶಗಳನ್ನು ಪಾಲನೆ ಮಾಡುವ ಕುರಿತಂತೆ ಸರ್ಕಾರದ ಇಲಾಖೆಗಳು, ಪ್ರಾಧಿಕಾರಗಳು ಮತ್ತು ಸಂಸ್ಥೆಗಳಲ್ಲಿ ಒಂದು ಪರಿಣಾಮಕಾರಿ ಕಾರ್ಯತಂತ್ರವನ್ನು ರೂಪಿಸುವ ಅಗತ್ಯವಿದೆ. ನ್ಯಾಯಾಲಯಗಳ ಆದೇಶಗಳನ್ನು ಜಾರಿಗೊಳಿಸುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ. ಅದೇ ವೇಳೆ, ಕೋರ್ಟ್ ಆದೇಶಗಳಿಗೆ ಗೌರವ ನೀಡಬೇಕಿದೆ ಎಂದು ಪೀಠ ತಿಳಿಸಿತ್ತು.

ಅಲ್ಲದೇ, ನ್ಯಾಯಾಲಯದ ಆದೇಶಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕಿದೆ, ಇಲ್ಲವಾದರೆ ನ್ಯಾಯದಾನದ ಉದ್ದೇಶವೇ ಸಾರ್ಥಕವಾಗುವುದಿಲ್ಲ. ನೆಲದ ಕಾನೂನು ಪಾಲನೆ ಮಾಡಿದಂತಾಗುವುದಿಲ್ಲ. ನ್ಯಾಯಾಲಯಗಳ ಆದೇಶಗಳನ್ನು ಸರ್ಕಾರದ ಇಲಾಖೆಗಳು ಪಾಲನೆ ಮಾಡದೇ ಇರುವ ಸಂದರ್ಭಗಳಲ್ಲಿ ನ್ಯಾಯಾಂಗ ನಿಂದನೆ ಅರ್ಜಿಗಳು ಹೆಚ್ಚಾಗಲಿವೆ. ಕೋರ್ಟ್ ಆದೇಶಗಳಿಗೆ ಬೆಲೆ ನೀಡದಿದ್ದರೆ ಅದು ಕಕ್ಷಿದಾರರ ಮತ್ತು ಪ್ರಜೆಗಳ ಹಕ್ಕುಗಳನ್ನು ಮೊಟಕು ಗೊಳಿಸಿದಂತಾಗುವುದಲ್ಲದೆ, ನ್ಯಾಯಾಂಗದ ಆಡಳಿತದ ಮೇಲೂ ಸಹ ಪರಿಣಾಮ ಬೀರಲಿದೆ ಎಂದು ನ್ಯಾಯಾಲಯ ತಿಳಿಸಿತ್ತು.

ಇದನ್ನೂ ಓದಿ: ವಯನಾಡು ಸಂತ್ರಸ್ತರಿಗೆ ಮಿಡಿದ ಮನ: ಬೆಂಗಳೂರು ಗುತ್ತಿಗೆದಾರರಿಂದ ನೆರವು, ತಿಂಗಳ ಸಂಬಳ ನೀಡಲು ಮುಂದಾದ ಸ್ಮಶಾನ ಕಾಯುವ ಸಿಬ್ಬಂದಿ - Wayanad Land Slide

ABOUT THE AUTHOR

...view details